ಜಿಎಸ್ ಟಿಯಿಂದ ನವಭಾರತದ ನಿರ್ಮಾಣವಾಗಲಿದೆ; ಅರುಣ್ ಜೇಟ್ಲಿ ಬಣ್ಣನೆ
Team Udayavani, Jul 1, 2017, 12:02 AM IST
ನವದೆಹಲಿ: ಭಾರತ ಸಂಕುಚಿತ ರಾಜಕೀಯವನ್ನು ಮೀರಿ ಬೆಳೆಯುತ್ತಿದೆ. ಒಂದು ದೇಶ, ಒಂದು ತೆರಿಗೆ, ಒಂದೇ ಮಾರುಕಟ್ಟೆಯಾಗಲಿದೆ. ಹಾಗಾಗಿ ಕೇಂದ್ರ, ರಾಜ್ಯ ಸರ್ಕಾರಗಳು ಕೂಡಿ ಕೆಲಸ ಮಾಡಬೇಕಿದೆ. ಜಿಎಸ್ ಟಿಯಿಂದಾಗಿ ನವಭಾರತದ ನಿರ್ಮಾಣವಾಗಲಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಅಭಿಪ್ರಾಯವ್ಯಕ್ತಪಡಿಸಿದರು.
ಶುಕ್ರವಾರ ಸಂಸತ್ ಭವನದ ಸೆಂಟ್ರಲ್ ಹಾಲ್ ನಲ್ಲಿ ಆಯೋಜಿಸಿದ್ದ ಐತಿಹಾಸಿಕ ಜಿಎಸ್ ಟಿ ಜಾರಿಗೂ ಮುನ್ನ ಕಾರ್ಯಕ್ರಮದಲ್ಲಿ ಜೇಟ್ಲಿ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು.
ಮಹತ್ವಾಕಾಂಕ್ಷಿ ತೆರಿಗೆ ಪದ್ಧತಿಯನ್ನು ಮಧ್ಯರಾತ್ರಿಯಿಂದ ಆರಂಭಿಸುತ್ತಿದ್ದೇವೆ. ಒಂದು ರಾಷ್ಟ್ರ, ಒಂದು ತೆರಿಗೆ ನಮ್ಮ ಉದ್ದೇಶ. ಕೇಂದ್ರ ಪ್ರಬಲವಾಗಿದ್ದಾಗ, ರಾಜ್ಯಗಳು ಕೂಡಾ ಪ್ರಬಲವಾಗುತ್ತವೆ. ಜಿಎಸ್ ಟಿಯಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲದೆ ತೆರಿಗೆ ದರ ನಿಗದಿಪಡಿಸಲಾಗಿದೆ ಎಂದರು.
ರಾಜ್ಯ, ಕೇಂದ್ರದಲ್ಲಿ 17 ತೆರಿಗೆ ಹಾಗೂ 23 ಸೆಸ್ ಗಳಿದ್ದವು. ಈವರೆಗೂ 24 ನಿಯಮಗಳನ್ನು ರೂಪಿಸಲಾಗಿದೆ. ಮಧ್ಯರಾತ್ರಿಯಿಂದ ಆರ್ಥಿಕ ಕ್ರಾಂತಿಯ ಹೊಸ ಯುಗ ಆರಂಭವಾಗಲಿದೆ ಎಂದು ಹೇಳಿದರು.