ಪ್ರಧಾನಿ ಮೋದಿ ಐರೋಪ್ಯ ರಾಷ್ಟ್ರಗಳ ಪ್ರವಾಸ : ಹೊಸ ಶಕೆಗೆ ನಾಂದಿ
Team Udayavani, May 6, 2022, 7:10 AM IST
ಪ್ರಧಾನಿ ನರೇಂದ್ರ ಮೋದಿ ಕೈಗೊಂಡಿದ್ದ ಮೂರು ದಿನಗಳ ಐರೋಪ್ಯ ರಾಷ್ಟ್ರಗಳ ಪ್ರವಾಸ ಮುಕ್ತಾಯವಾಗಿ, ಗುರುವಾರ ಸ್ವದೇಶಕ್ಕೆ ಮರಳಿದ್ದಾರೆ. ಪ್ರವಾಸದ ವೇಳೆ ಅವರು ಜರ್ಮನಿ, ಡೆನ್ಮಾರ್ಕ್ ಹಾಗೂ ಫ್ರಾನ್ಸ್ ರಾಷ್ಟ್ರಗಳಿಗೆ ಭೇಟಿ ನೀಡಿರುವ ಅವರು, ಅಲ್ಲಿನ ಹಾಗೂ ವಿಶ್ವಮಟ್ಟದ ರಾಜಕೀಯ ನಾಯಕರು, ಉದ್ಯಮಿಗಳನ್ನು ಭೇಟಿಯಾಗಿದ್ದಾರೆ. ಈ ಪ್ರವಾಸದ ಹಿಂದಿನ ಉದ್ದೇಶವೇನು, ಇದರಿಂದ ಭಾರತಕ್ಕೇನು ಲಾಭ ಎಂಬುದರ ಸಂಕ್ಷಿಪ್ತ ವಿಶ್ಲೇಷಣೆ ಇಲ್ಲಿದೆ.
ಮೂರು ಪ್ರಮುಖ ಉದ್ದೇಶ :
ಈ ಪ್ರವಾಸದ ಹಿಂದೆ ಮೂರು ನಿರ್ದಿಷ್ಟ ಉದ್ದೇಶ ಗಳಿವೆ. ಭಾರತ ಮತ್ತು ಐರೋಪ್ಯ ರಾಷ್ಟ್ರಗಳ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವುದು, ಬಂಡವಾಳ ಹೂಡಿಕೆಯನ್ನು ಆಕರ್ಷಿಸುವುದು ಹಾಗೂ ರಷ್ಯಾದೊಂದಿಗೆ ಭಾರತ ಹೊಂದಿರುವ ಅಥವಾ ಮುಂದೆ ಹೊಂದಲಿಚ್ಛಿಸುವ ವ್ಯಾಪಾರ ಉದ್ದೇಶಗಳಿಗೆ ಪ್ರೋತ್ಸಾಹ ನೀಡುವಂತೆ ಐರೋಪ್ಯ ಒಕ್ಕೂಟದ ನಾಯಕರ ಮನವೊಲಿಸುವುದೇ ಈ ಪ್ರವಾಸದ ಮುಖ್ಯ ಉದ್ದೇಶವಾಗಿದೆ.
ಹೊಸ ಸಾಧ್ಯತೆಗಳ ಬಗ್ಗೆ ಚರ್ಚೆ :
ಫೆ. 24ರಿಂದ ನಡೆಯುತ್ತಿರುವ ರಷ್ಯಾ- ಉಕ್ರೇನ್ ಯುದ್ಧದಿಂದಾಗಿ ಐರೋಪ್ಯ ವಲಯದಲ್ಲಿ 70 ವರ್ಷಗಳಿಂದ ನಿರ್ದಿಷ್ಟ ಲಯದಲ್ಲಿ ಮಿಡಿಯು ತ್ತಿದ್ದ ಶಾಂತಿ, ಸಾಮರಸ್ಯ, ರಾಜಕೀಯ ಹಾಗೂ ವಾಣಿಜ್ಯ ಸಂಬಂಧಗಳು ಪತನಗೊಂಡಿವೆ.
ಐರೋಪ್ಯ ರಾಷ್ಟ್ರಗಳೆಲ್ಲವೂ ಪರಸ್ಪರ ಅವಲಂಬಿತ ಆರ್ಥಿಕತೆಯನ್ನು ಒಳಗೊಂಡಿರುವುದರಿಂದ ಉಕ್ರೇನ್-ರಷ್ಯಾ ನಡುವಿನ ಯುದ್ಧ ಹಾಗೂ ಆನಂತರದಲ್ಲಿ ಅಮೆರಿಕ, ನ್ಯಾಟೋ ದೇಶಗಳು ಹಾಗೂ ಐರೋಪ್ಯ ಒಕ್ಕೂಟ ರಷ್ಯಾ ಮೇಲೆ ಹಂತ ಹಂತವಾಗಿ ಹೇರಿದ ಆರ್ಥಿಕ ದಿಗ್ಬಂಧನವು ಅಲ್ಲಿ ಹಿಂದೆಂದೂ ಕಂಡಿ ರದಂಥ ಬಿಗುವಿನ ವಾತಾ ವರಣವನ್ನು ನಿರ್ಮಿಸಿ ದೆ. ಈ ಸಂದರ್ಭದಲ್ಲಿ ಪ್ರಧಾನಿ ಅಲ್ಲಿ ಭೇಟಿ ನೀಡುತ್ತಿರು ವುದು ಯೂರೋಪ್ ರಾಷ್ಟ್ರಗಳು ಹಾಗೂ ಭಾರತ ನಡು ವಿನ ಬಾಂಧವ್ಯವನ್ನು ಬಿಗಿ ಗೊಳಿಸುವುದು, ಐರೋಪ್ಯ ರಾಷ್ಟ್ರಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೊಸ ವಾಣಿಜ್ಯ ವ್ಯವಹಾರಗಳನ್ನು ಕುದುರಿಸುವ ಉದ್ದೇಶವನ್ನು ಹೊಂದಿವೆ.
ಹೂಡಿಕೆಗೆ ಆಹ್ವಾನ :
ಉಕ್ರೇನ್- ರಷ್ಯಾ ಯುದ್ಧದಿಂದಾಗಿ ಐರೋಪ್ಯ ರಾಷ್ಟ್ರಗಳಲ್ಲಿನ ಸರಕು ಸೇವೆಗಳಲ್ಲಿ ಭಾರೀ ಪ್ರಮಾಣದ ಏರುಪೇರಾಗಿದೆ. ಹಾಗಾಗಿ, ಅಲ್ಲಿನ ಉದ್ದಿಮೆ ದಾರರು ಕಂಗಾಲಾಗಿದ್ದಾರೆ. ಇಂಥ ಸಮಯದಲ್ಲಿ ಅವರಿಗೊಂದು ಹೊಸ ಮಾರುಕಟ್ಟೆಯ ಅವಶ್ಯಕತೆ ಇರುವುದನ್ನು ಮನಗಂಡಿರುವ ಭಾರತ, ಅವರನ್ನು ಭಾರತದಲ್ಲಿ ಹೂಡಿಕೆ ಮಾಡಲು ಆಹ್ವಾನಿಸಲಿದೆ. ಆ ದೃಷ್ಟಿಕೋನದಲ್ಲಿ ಅಲ್ಲಿನ ದೈತ್ಯ ಉದ್ಯಮಿಗಳನ್ನು ಮೋದಿ ಭೇಟಿ ಮಾಡಿ, ಹೂಡಿಕೆಗೆ ಆಹ್ವಾನ ಕೊಟ್ಟು ಬಂದಿದ್ದಾರೆ.
ನಾಯಕರ ಮನವೊಲಿಕೆಗೆ ಪ್ರಯತ್ನ :
ಭಾರತವನ್ನು ಕುರಿತು ಹೇಳುವುದಾದರೆ, ಐರೋಪ್ಯ ಒಕ್ಕೂಟಗಳ ಜೊತೆಗೆ ಭಾರತದ ಸ್ನೇಹ ಹಾಗೂ ವಾಣಿಜ್ಯ ಅನುಬಂಧ ಮೊದಲಿನಿಂದಲೂ ಉತ್ತಮವಾಗಿದೆ. ಹಾಗಾಗಿಯೇ, ಉಕ್ರೇನ್-ರಷ್ಯಾ ವಿಚಾರದಲ್ಲಿ ಭಾರತ ಮೌನವಾಗಿದೆ. ಯುದ್ಧದ ಹಿನ್ನೆಲೆಯಲ್ಲಿ ಇಡೀ ಐರೋಪ್ಯ ಒಕ್ಕೂಟ ರಷ್ಯಾ ವಿರುದ್ಧ ತಿರುಗಿಬಿದ್ದಿರುವಾಗ ಭಾರತ, ರಷ್ಯಾದೊಂದಿಗೆ ತೈಲ ಖರೀದಿಗೆ ಮುಂದಾಗಿದೆ. ಅತ್ತ, ರಷ್ಯಾ ಕೂಡ ತನ್ನ ಸರಕು, ಸೇವೆಗಳಿಗೆ ಐರೋಪ್ಯ ದೇಶಗಳ ಹೆಬ್ಟಾಗಿಲು ಮುಚ್ಚಿಹೋದ ಈ ಸಂದರ್ಭದಲ್ಲಿ, ಭಾರತವನ್ನು ತನ್ನ ವ್ಯಾಪಾರದ ಹೊಸ ವೇದಿಕೆಯನ್ನಾಗಿಸಲು ನಿರ್ಧರಿಸಿದೆ. ಅಲ್ಲಿನ ಸಾಫ್ಟ್ವೇರ್ ಕಂಪನಿಗಳನ್ನು ಇಲ್ಲಿ ಬೆಳೆಸಲು ಲೆಕ್ಕಾಚಾರ ಹಾಕಿಕೊಂಡಿದೆ. ಇದಕ್ಕೆ ಭಾರತ ಅವಕಾಶ ಮಾಡಿಕೊಟ್ಟರೆ, ಭಾರತಕ್ಕೆ ಲಾಭವಾಗುತ್ತದಾದರೂ ಅದು ಐರೋಪ್ಯ ಒಕ್ಕೂಟ, ಅಮೆರಿಕ ಹಾಗೂ ನ್ಯಾಟೋ ರಾಷ್ಟ್ರಗಳ ಸ್ನೇಹಕ್ಕೆ ತಿಲಾಂಜಲಿ ನೀಡುವಂಥ ದುಬಾರಿ ನಿರ್ಧಾರವಾಗಲಿದೆ. ಇದನ್ನು ಮನಗಂಡಿರುವ ಭಾರತ ಈ ರಾಷ್ಟ್ರಗಳ ಮನವೊಲಿಸಲು ಈ ಪ್ರವಾಸದಲ್ಲಿ ಪ್ರಯತ್ನಿಸಿದೆ.
ಯುದ್ಧ ನಿಲ್ಲಿಸಿ: ಆಗ್ರಹ :
ಉಕ್ರೇನ್ ಮೇಲೆ ತಾನು ನಡೆಸು ತ್ತಿರುವ ಯುದ್ಧವನ್ನು ಈ ಕೂಡಲೇ ನಿಲ್ಲಿಸಬೇಕೆಂದು ಭಾರತ ಮತ್ತು ಫ್ರಾನ್ಸ್, ಜಂಟಿಯಾಗಿ ರಷ್ಯಾಕ್ಕೆ ತಾಕೀತು ಮಾಡಿವೆ. ಬುಧವಾರದಂದು ಪ್ಯಾರಿಸ್ನ ಎಲಿಸೀ ಅರಮನೆಯಲ್ಲಿ ಪ್ರಧಾನಿ ಮೋದಿ ಹಾಗೂ ಫ್ರಾನ್ಸ್ ಅಧ್ಯ ಕ್ಷ ಇಮ್ಯಾನ್ಯುವಲ್ ಮ್ಯಾಕ್ರನ್ ನಡುವೆ ನಡೆದ ಸಭೆಯಲ್ಲಿ ರಷ್ಯಾವು ತನ್ನ ದಮನಕಾರಿ ನೀತಿಯನ್ನು ಕೂಡಲೇ ನಿಲ್ಲಿಸಬೇಕೆಂದು ಆಗ್ರಹಿಸಿದ್ದಾರೆ.
ಆಗಲೂ ಮೋದಿ, ಈಗಲೂ ಮೋದಿ! :
2017ರಲ್ಲಿ ಮ್ಯಾಕ್ರನ್ರವರು ಮೊದಲ ಬಾರಿಗೆ ಫ್ರಾನ್ಸ್ನ ಅಧ್ಯಕ್ಷರಾಗಿದ್ದಾಗ, ಅವರನ್ನು ವೈಯಕ್ತಿಕವಾಗಿ ಭೇಟಿಯಾಗಿ ಅಭಿನಂದನೆ ಸಲ್ಲಿಸಿದವರಲ್ಲಿ ಪ್ರಧಾನಿ ನರೇಂದ್ರ ಮೋದಿಯೇ ಮೊದಲು. ಈಗಲೂ ಹಾಗೆಯೇ ಆಗಿದೆ. ಈ ಬಾರಿಯ ಚುನಾವಣೆಯಲ್ಲಿ ಅವರು ಪುನಃ ಫ್ರಾನ್ಸ್ನ ಅಧ್ಯಕ್ಷರಾಗಿದ್ದಾರೆ. ಕಾಕತಾಳೀಯವೆಂಬಂತೆ ಅದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಐರೋಪ್ಯ ರಾಷ್ಟ್ರಗಳ ಪ್ರವಾಸವೂ ಜರುಗಿದ್ದು ಅದರ ಭಾಗವಾಗಿ, ಮೋದಿ, ಮ್ಯಾಕ್ರನ್ರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದ್ದಾರೆ. ಇದು ಭಾರತ- ಫ್ರಾನ್ಸ್ನ ಬಾಂಧವ್ಯಕ್ಕೆ ಹಿಡಿದ ಕೈಗನ್ನಡಿ.
ಮುಕ್ತ ವ್ಯಾಪಾರ ಒಪ್ಪಂದಕ್ಕೆ ಶ್ರೀಕಾರ :
ಕೊರೊನಾದಿಂದ ಐರೋಪ್ಯ ರಾಷ್ಟ್ರಗಳ ಆರ್ಥಿಕ ಪರಿಸ್ಥಿತಿ ಬಿಗಡಾಯಿಸಿತ್ತು. ಈಗ ಯುದ್ಧದಿಂದಾಗಿ ಮತ್ತಷ್ಟು ಹದಗೆಟ್ಟಿದೆ. ಇದರ ಸುಧಾರಣೆಗಾಗಿ ಐರೋಪ್ಯ ರಾಷ್ಟ್ರಗಳು, ತಮ್ಮ ನಡುವಿನ ಹಾಗೂ ಹೊರ ದೇಶಗಳ ಜೊತೆಗಿನ ವ್ಯಾಪಾರ ನೀತಿಗಳಲ್ಲಿ ಒಂದಿಷ್ಟು ಬದಲಾವಣೆ ತಂದುಕೊಳ್ಳಲು ನಿರ್ಧರಿಸಿದೆ. ಈಗಾಗಲೇ ಫ್ರಾನ್ಸ್ ಮತ್ತು ಜರ್ಮನಿ ನಡುವೆ ಮುಕ್ತ ವ್ಯಾಪಾರ ಒಪ್ಪಂದವಿದೆ. ಈ ಸೌಲಭ್ಯವನ್ನು ಭಾರತಕ್ಕೂ ವಿಸ್ತರಿಸಲು ಮೋದಿ ಈ ಭೇಟಿಯಲ್ಲಿ ಪ್ರಯತ್ನಿಸಿದ್ದಾರೆ.
“ನಾರ್ಡಿಕ್’ ವಿಶ್ವಾಸ ಗೆಲ್ಲುವ ಪ್ರಯತ್ನ :
ಇದಲ್ಲದೆ ಉತ್ತರ ಯೂರೋಪ್ ಹಾಗೂ ಉತ್ತರ ಅಟ್ಲಾಂಟಾದ ರಾಷ್ಟ್ರಗಳಲ್ಲಿ (ನಾರ್ಡಿಕ್ ರಾಷ್ಟ್ರಗಳು) ಇರುವ ಅಪಾರ ಹೂಡಿಕೆಯ ಶಕ್ತಿಯನ್ನು ಭಾರತದ ಕಡೆಗೆ ತಿರುಗಿಸಲು ಈ ಬಾರಿ ಪ್ರಯತ್ನಿಸಲಾಗಿದೆ. ನಾರ್ಡಿಕ್ ಶೃಂಗಸಭೆಯಲ್ಲಿ ಭಾಗವಹಿಸಿದ್ದ ಮೋದಿ, ಹವಾಮಾನ ಬದಲಾವಣೆ, ತಂತ್ರಜ್ಞಾನ, ನವೀಕರಿಸಬಹುದಾದ ಇಂಧನ ಕ್ಷೇತ್ರಗಳಲ್ಲಿ ಭಾರತದಲ್ಲಿ ಮುಕ್ತ ಹೂಡಿಕೆಗೆ ಆಹ್ವಾನವಿತ್ತು ಬಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jharkhand 32 ಕೋಟಿ ಪತ್ತೆ ಪ್ರಕರಣ: ಇಬ್ಬರ ಸೆರೆ
Loksabha; 3ನೇ ಹಂತದಲ್ಲಿ ಶೇ.61.66ರಷ್ಟು ಮತದಾನ; ಶಾ ಕ್ಷೇತ್ರದಲ್ಲಿ ಮೋದಿ ವೋಟಿಂಗ್
Loksabha election; ಆಯೋಗದ ಮತದಾನ ಮಾಹಿತಿಯಲ್ಲಿ ಲೋಪವಿದೆ, ಧ್ವನಿಯೆತ್ತಿ: ಖರ್ಗೆ ಪತ್ರ
CSIR: ಪ್ರತೀ ಸೋಮವಾರ ಇಸ್ತ್ರಿ ಹಾಕದ ವಸ್ತ್ರ ಧರಿಸಲು ಅವಕಾಶ!
West Bengal; ಶಿಕ್ಷಕರ ನೇಮಕ ಹಗರಣ: ಬಂಗಾಳ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ