ನಾಗರಿಕರ ಹತ್ಯೆ: ಸುಪ್ರೀಂ ಕೋರ್ಟ್ಗೆ ಅರ್ಜಿ
ಕಾಶ್ಮೀರದಲ್ಲಿ ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡಲು ಕೋರಿಕೆ; ಮೃತರ ಕುಟುಂಬಕ್ಕೆ 1 ಕೋಟಿ ಪರಿಹಾರ, ಸರ್ಕಾರಿ ಉದ್ಯೋಗಕ್ಕೆ ಮನವಿ
Team Udayavani, Oct 10, 2021, 7:00 AM IST
ನವದೆಹಲಿ/ಜಮ್ಮು: ಜಮ್ಮು ಮತ್ತು ಕಾಶ್ಮೀರದಲ್ಲಿ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಹತ್ಯೆ ಕುರಿತು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಅರ್ಜಿಯೊಂದನ್ನು ಸಲ್ಲಿಸಲಾಗಿದೆ.
ದೆಹಲಿ ಮೂಲದ ವಕೀಲರೊಬ್ಬರು ಈ ಅರ್ಜಿ ಸಲ್ಲಿಸಿದ್ದು, “ಹಿಂದೂಗಳು ಮತ್ತು ಸಿಖ್ಖರನ್ನು ಟಾರ್ಗೆಟ್ ಮಾಡಿ ಕೊಲ್ಲಲಾಗುತ್ತಿದ್ದು, ಅಲ್ಲಿರುವ ಅಲ್ಪಸಂಖ್ಯಾತರಿಗೆ ಸೂಕ್ತ ಭದ್ರತೆ ಕಲ್ಪಿಸಬೇಕು. ಹತ್ಯೆಗೀಡಾದವರ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ಮತ್ತು ಕುಟುಂಬದ ಸದಸ್ಯರಿಗೆ ಸರ್ಕಾರಿ ಕೆಲಸ ನೀಡಬೇಕು’ ಎಂದು ಒತ್ತಾಯಿಸಿದ್ದಾರೆ.
5 ದಿನಗಳಲ್ಲಿ 7 ಮಂದಿ ನಾಗರಿಕರನ್ನು ಕೊಲ್ಲಲಾಗಿದೆ. ಇದು ಅಲ್ಲಿರುವ ಅಲ್ಪಸಂಖ್ಯಾತರಲ್ಲಿ ಅಭದ್ರತೆ ಮತ್ತು ಭಯ ಮೂಡಿಸಿದೆ. ಈಗ ನಡೆಯುತ್ತಿರುವ ಕೃತ್ಯಗಳು 21 ವರ್ಷಗಳ ಹಿಂದೆ ಅನಂತ್ನಾಗ್ನ ಛತ್ತೀಸಿಂಘ್ ಪೋರಾದಲ್ಲಿ ನಡೆದ 36 ಸಿಖ್ಖರ ನರಮೇಧವನ್ನು ನೆನಪಿಸುತ್ತಿದೆ ಎಂದೂ ವಕೀಲ ವಿನೀತ್ ಜಿಂದಾಲ್ ಹೇಳಿದ್ದಾರೆ.
ಇಬ್ಬರು ಪೊಲೀಸರಿಗೆ ಗಾಯ
ಜಮ್ಮು-ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ಪೊಲೀಸ್ ಗಸ್ತುಪಡೆ ಮೇಲೆ ಶನಿವಾರ ಉಗ್ರರು ದಾಳಿ ನಡೆಸಿದ್ದು, ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ. ಇದೇ ವೇಳೆ, ಶ್ರೀನಗರದ ಛನಾಪೋರಾದಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿಯೂ ನಡೆದಿದೆ.
ಇದನ್ನೂ ಓದಿ:ಕೊರೊನಾ ಮಾತಾ ದೇಗುಲ : ಅರ್ಜಿದಾರನಿಗೇ ದಂಡ ವಿಧಿಸಿದ ಸುಪ್ರೀಂಕೋರ್ಟ್
ಕಾಶ್ಮೀರದಲ್ಲಿ ಹಿಂದೂ ಮತ್ತು ಸಿಖ್ಖರ ಹತ್ಯೆಯು ಉಗ್ರರ ವ್ಯವಸ್ಥಿತ ಸಂಚು. ಕಣಿವೆಯಲ್ಲಿ ಉಳಿದಿರುವ ಅಲ್ಪಸಂಖ್ಯಾತರನ್ನು ಒದ್ದೋಡಿಸುವ ಮತ್ತು ವಾಪಸಾಗದಂತೆ ಅವರಲ್ಲಿ ಭಯ ಹುಟ್ಟಿಸುವ ತಂತ್ರವಿದು.
– ಸತೀಶ್ ಮಹಾಲ್ದಾರ್, ಕಾಶ್ಮೀರಿ ಪಂಡಿತ