ಜನರಿಂದ ಚಂದಾ ಎತ್ತಿ ಚು. ವೆಚ್ಚ ನಿಭಾಯಿಸುವ ಕಾಂಗ್ರೆಸ್ ಅಭ್ಯರ್ಥಿ
Team Udayavani, Oct 1, 2019, 8:30 PM IST
ಭುವನೇಶ್ವರ: ಜನರಿಂದ ಚಂದಾ ಎತ್ತಿ ಚುನಾವಣೆಗೆ ಸ್ಪರ್ಧಿಸುವ ವಿಚಾರ ಹೊಸತೇನೂ ಅಲ್ಲ. ಸ್ವತಂತ್ರ ಅಭ್ಯರ್ಥಿಗಳು ವೆಚ್ಚ ನಿಭಾಯಿಸುವ ನಿಟ್ಟಿನಲ್ಲಿ ಈ ಮಾರ್ಗ ಅನುಸರಿಸುತ್ತಾರೆ. ಆದರೆ ಇಲ್ಲಿ ಜನರಿಂದಲೇ ಚುನಾವಣೆಯ ವೆಚ್ಚ ಸಂಗ್ರಹಿಸಲು ಮುಂದಾಗಿರುವುದು ಒಡಿಶಾ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ನಿರಂಜನ್ ಪಟ್ನಾಯಕ್.
ಅ.21ರಂದು ಬಿಜೇಪುರ್ ವಿಧಾನಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪ ಚುನಾವಣೆಯಲ್ಲಿ ಅಭ್ಯರ್ಥಿಯಾಗಿರುವ ಅವರು ಈ ಮನವಿ ಮಾಡಿಕೊಂಡಿದ್ದಾರೆ. ಮೇ ತಿಂಗಳಿನಲ್ಲಿ ನಡೆದಿದ್ದ ಚುನಾವಣೆಯಲ್ಲಿ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಈ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. ಅನಂತರ ಅವರು ರಾಜೀನಾಮೆ ನೀಡಿರುವುದರಿಂದ ಮತ್ತೆ ಅಲ್ಲಿ ಚುನಾವಣೆ ನಡೆಸುವ ಸ್ಥಿತಿ ಎದುರಾಗಿದೆ. ಅವರು ತಮ್ಮ ನೆಚ್ಚಿನ ಕ್ಷೇತ್ರ ಹಿಂಜಿಲಿಯಿಂದಲೂ ಸ್ಪರ್ಧಿಸಿ ಗೆದ್ದಿದ್ದರು.
ಕಾಂಗ್ರೆಸ್ ಚುನಾವಣ ವೆಚ್ಚ ಭರಿಸುತ್ತಿದ್ದರೂ ಪೂರ್ಣ ಪ್ರಮಾಣದ ವೆಚ್ಚ ನಿಭಾಯಿಸಲು ಅದು ಏನೇನೂ ಸಾಲದು. ಹೀಗಾಗಿ ಜನರಿಂದಲೇ ವೆಚ್ಚ ನಿಭಾಯಿಸಲು ಧನ ಸಂಗ್ರಹ ಮಾಡಲು ಮುಂದಾಗಿದ್ದೇನೆ ಎಂದು ನಿರಂಜನ್ ಪಟ್ನಾಯಕ್ ಹೇಳಿದ್ದಾರೆ. ಚುನಾವಣ ಆಯೋಗ ಪ್ರತಿ ವಿಧಾನಸಭೆ ಕ್ಷೇತ್ರದ ಚುನಾವಣಾ ವೆಚ್ಚದ ಮಿತಿ 28 ಲಕ್ಷ ರೂ. ಎಂದು ನಿಗದಿ ಮಾಡಿದೆ.