ಇಂದು ಕೊಲೀಜಿಯಂ ಸಭೆ
Team Udayavani, May 11, 2018, 11:05 AM IST
ಹೊಸದಿಲ್ಲಿ: ಉತ್ತರಾಖಂಡ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಕೆ.ಎಂ.ಜೋಸೆಫ್ ರನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಸ್ಥಾನಕ್ಕೆ ಶಿಫಾರಸು ಮಾಡಲು ಶುಕ್ರವಾರ ಕೊಲೀಜಿಯಂ (ನ್ಯಾಯ ಮೂರ್ತಿಗಳ ಸಮಿತಿ) ಸಭೆ ನಡೆಯಲಿದೆ. ಅದರಲ್ಲಿ ನ್ಯಾ| ಜೋಸೆಫ್ ಹೆಸರನ್ನು ಮತ್ತೂಮ್ಮೆ ಅಂತಿಮಪಡಿಸಿ ಕೇಂದ್ರ ಸರಕಾರಕ್ಕೆ ಕಳುಹಿಸುವ ಸಾಧ್ಯತೆ ಇದೆ. ಈ ಬಗ್ಗೆ ಅಧಿಕೃತ ಮಾಹಿತಿ ಇರದೇ ಇದ್ದರೂ, ಸಮಿತಿ ಸದಸ್ಯರು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಜತೆ ಈಗಾಗಲೇ ಮಾತುಕತೆ ನಡೆಸಿದ್ದಾರೆ.
ನ್ಯಾ| ಜೋಸೆಫ್ ಹೆಸರನ್ನು ನ್ಯಾಯಮೂರ್ತಿಯಾಗಿ ಅಂಗೀಕರಿಸಬೇಕು. ಈ ಬಗ್ಗೆ ತುರ್ತಾಗಿ ಕೊಲೀಜಿಯಂ ಸಭೆ ನಡೆಯಬೇಕು ಎಂದು ಸಮಿತಿ ಸದಸ್ಯ ನ್ಯಾ| ಜೆ.ಚಲಮೇಶ್ವರ್ ಬುಧವಾರ ಮುಖ್ಯನ್ಯಾಯಮೂರ್ತಿ ದೀಪಕ್ಮಿಶ್ರಾಗೆ ಪತ್ರ ಬರೆದಿದ್ದರು. ಜ.10ರಂದು ನ್ಯಾ| ಜೋಸೆಫ್ ಹೆಸರನ್ನು ಅಂತಿಮಗೊಳಿಸಿ ಕೇಂದ್ರಕ್ಕೆ ಕಳುಹಿಸಿದ ಬಳಿಕದ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಹೀಗಾಗಿ, ಅವರನ್ನೇ ಪರಿಗಣಿಸಬೇಕು ಎಂದು ಪತ್ರದಲ್ಲಿ ಬರೆದ್ದರು.
ಎ.26ರಂದು ನಡೆದಿದ್ದ ಬೆಳವಣಿಗೆಯಲ್ಲಿ ಕೇಂದ್ರ ಕಾನೂನು ಸಚಿವ ರವಿಶಂಕರ ಪ್ರಸಾದ್ ಅವರು ನ್ಯಾ| ಜೋಸೆಫ್ ಹೆಸರನ್ನು ಮತ್ತೂಮ್ಮೆ ಪರಿಶೀಲಿಸುವಂತೆ ಕೋರಿ ಪತ್ರ ಬರೆದಿದ್ದರು. ಜೋಸೆಫ್ ಹೆಸರನ್ನು ಅಂತಿಮಪಡಿಸಿದರೆ ಕೇರಳಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿದಂತಾಗುತ್ತದೆ. ಅವರಿಗಿಂತ ಹಿರಿಯ ನ್ಯಾಯಮೂರ್ತಿಗಳೂ ಇದ್ದಾರೆ ಎಂದು ಸಚಿವರು ಉಲ್ಲೇಖಿಸಿದ್ದರು. ನ್ಯಾ| ಜೆ.ಚಲಮೇಶ್ವರ್ ತಮ್ಮ ಪತ್ರದಲ್ಲಿ ಸಚಿವ ರವಿಶಂಕರ ಪ್ರಸಾದ್ ಪ್ರಸ್ತಾವಿಸಿರುವ ಅಂಶಗಳಿಗೂ ಉತ್ತರ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.