Ayodhya; “ನಮ್ಮ ರಾಮ ಬಂದಿದ್ದಾನೆ, ಇದು ಹೊಸ ಯುಗದ ಆರಂಭ…”: ಪ್ರಧಾನಿ ನರೇಂದ್ರ ಮೋದಿ
Team Udayavani, Jan 22, 2024, 3:26 PM IST
ಹೊಸದಿಲ್ಲಿ: “ಶತಮಾನಗಳ ಕಾಯುವಿಕೆಯ ನಂತರ ಪ್ರಭು ರಾಮ ಬಂದಿದ್ದಾನೆ. ಶತ ಶತಮಾನಗಳ ತಾಳ್ಮೆ ಮತ್ತು ತ್ಯಾಗದ ರೂಪವಾಗಿ ದೇವ ರಾಮ ಕೊನೆಗೂ ರಾಮ ಬಂದಿದ್ದಾನೆ” ಹೀಗೆಂದವರು ಪ್ರಧಾನಿ ನರೇಂದ್ರ ಮೋದಿ.
ಅಯೋಧ್ಯೆ ರಾಮ ಮಂದಿರದಲ್ಲಿ ಬಾಲ ರಾಮನ ಮೂರ್ತಿಗೆ ಪ್ರಾಣಪ್ರತಿಷ್ಠೆ ಮಾಡಿ, ಪೂಜಾ ಕೈಂಕರ್ಯದಲ್ಲಿ ಭಾಗಿಯಾದ ಬಳಿಕ ಅವರು ನೆರೆದ ಸಭಾಸದರೆದರು ಮಾತನಾಡಿದರು.
“ಜನವರಿ 24, 2024, ಇದು ಕೇವಲ ಒಂದು ದಿನಾಂಕವಲ್ಲ. ಇದು ಒಂದು ಹೊಸ ಯುಗದ ಆರಂಭ. ರಾಮ ಮಂದಿರದ ನಿರ್ಮಾಣವು ಜನರಲ್ಲಿ ಹೊಸ ಶಕ್ತಿ- ಉತ್ಸಾಹವನ್ನು ತುಂಬಿದೆ” ಎಂದರು.
“ದೇಶವು ಗುಲಾಮಗಿರಿಯ ಸಂಕೋಲೆಯಿಂದ ಕಳಚಿ ಬಂಧಮುಕ್ತವಾಗಿದೆ. ಈ ದಿನವನ್ನು ಸಾವಿರಾರು ವರ್ಷಗಳ ಬಳಿಕವೂ ನೆನಪಿನಲ್ಲಿಟ್ಟುಕೊಳ್ಳಲಾಗುತ್ತದೆ” ಎಂದರು.
ಇಂದು, ಪ್ರಭುರಾಮನ ಭಕ್ತರು ಈ ಐತಿಹಾಸಿಕ ಕ್ಷಣದಲ್ಲಿ ಸಂಪೂರ್ಣವಾಗಿ ಮಗ್ನರಾಗಿದ್ದಾರೆ ಎಂದು ನನಗೆ ದೃಢವಾದ ನಂಬಿಕೆಯಿದೆ. ದೇಶ ಮತ್ತು ಪ್ರಪಂಚದ ಮೂಲೆ ಮೂಲೆಯಲ್ಲಿರುವ ಪ್ರಭುರಾಮನ ಭಕ್ತರು ಈ ಕ್ಷಣವನ್ನು ಆಳವಾಗಿ ಅನುಭವಿಸುತ್ತಿದ್ದಾರೆ. ಈ ಕ್ಷಣವು ದೈವಿಕವಾಗಿದೆ, ಈ ಕ್ಷಣವು ಎಲ್ಲಕ್ಕಿಂತ ಪವಿತ್ರವಾಗಿದೆ…” ಎಂದು ಪ್ರಧಾನಿ ಮೋದಿ ಹೇಳಿದರು.
“ಈ ಕ್ಷಣ, ಈ ಪರಿಸರ, ಈ ಸಮಯ ನಮಗೆ ಶ್ರೀರಾಮನ ಆಶೀರ್ವಾದವಾಗಿದೆ ಎಂದು ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಇಂತಹ ಘಟನೆಗೆ ಸಾಕ್ಷಿಯಾಗಲು ನಾವು ಇಂದು ಜೀವಂತವಾಗಿರುವುದೇ ಶ್ರೀರಾಮನ ಆಶೀರ್ವಾದ” ಎಂದರು.
PM Narendra Modi offers prayers to Ram Lalla during the Pran Pratishtha ceremony. pic.twitter.com/peFD9iVqSD
— ANI (@ANI) January 22, 2024
ಶ್ರೀರಾಮನ ಕ್ಷಮೆಯಾಚಿಸಿದ ಪ್ರಧಾನಿ ಮೋದಿ, ” ಬಹುಶಃ ನಮ್ಮ ಪ್ರೀತಿ ಮತ್ತು ತಪಸ್ಸಿನಲ್ಲಿ ಏನಾದರೂ ಕೊರತೆಯಿದ್ದಿರಬೇಕು, ಅದಕ್ಕೆ ಈ ರಾಮ ಮಂದಿರ ನಿರ್ಮಾಣ ಕೆಲಸ ಹಲವು ವರ್ಷಗಳಿಂದ ನಡೆಯಲಿಲ್ಲ. ಆದಾಗ್ಯೂ, ಇಂದು ಆ ಅಂತರವನ್ನು ನಿವಾರಿಸಲಾಗಿದೆ, ಶ್ರೀರಾಮನು ನಮ್ಮನ್ನು ಕ್ಷಮಿಸುತ್ತಾನೆ ಎಂಬ ವಿಶ್ವಾಸವಿದೆ” ಎಂದರು.
“ನಾವು ಈಗ ಮುಂದಿನ 1,000 ವರ್ಷಗಳ ಭಾರತದ ಅಡಿಪಾಯವನ್ನು ಹಾಕಬೇಕಾಗಿದೆ… ಈ ಕ್ಷಣದಿಂದ ಸಮರ್ಥ, ಭವ್ಯವಾದ, ದೈವಿಕ ಭಾರತವನ್ನು ನಿರ್ಮಿಸುವ ಪ್ರತಿಜ್ಞೆಯನ್ನು ನಾವು ತೆಗೆದುಕೊಳ್ಳುತ್ತೇವೆ. ರಾಮ ಮಂದಿರ ನಿರ್ಮಾಣವು ಭಾರತೀಯ ಸಮಾಜದ ಪ್ರಬುದ್ಧತೆಯ ಪ್ರತಿಬಿಂಬವಾಗಿದೆ. ಇದು ಕೇವಲ ವಿಜಯದ ಮಾತ್ರವಲ್ಲ ನಮ್ರತೆಯ ಸಂದರ್ಭವಾಗಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.