ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯನ್ನು 12ಗಂಟೆ ಕಾಯಿಸಿದ ಪೊಲೀಸರು !
Team Udayavani, Jan 22, 2023, 7:48 AM IST
ಭುನವೇಶ್ವರ: ಒಡಿಶಾದ ಕಿಯೋಂಜಾರ್ ಜಿಲ್ಲೆಯಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಯನ್ನು ಪೊಲೀಸರು 12 ಗಂಟೆಗಳ ಕಾಲ ವಿನಾಕಾರಣ ವಾಹನದಲ್ಲಿಯೇ ಕುಳ್ಳಿರಿಸಿದ ಅಮಾನವೀಯ ಘಟನೆ ನಡೆದಿದೆ.
ಪೊಲೀಸರ ಪ್ರಕಾರ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲು ಉಪವಿಭಾಗೀಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ಅಪರಾಧ ನಡೆದ ಸ್ಥಳ ಸಮುದಾಯ ಆರೋಗ್ಯ ಕೇಂದ್ರ (ಸಿಎಚ್ಸಿ) ವ್ಯಾಪಿಗೆ ಒಳಪಟ್ಟಿದ್ದರಿಂದ ವೈದ್ಯರು ಪರೀಕ್ಷೆ ನಡೆಸಲು ನಿರಾಕರಿಸಿದ್ದಾರೆ. ನಂತರ ಸಿಎಚ್ಸಿಯಲ್ಲಿ ಮಹಿಳಾ ವೈದ್ಯರಿಲ್ಲದ ಕಾರಣ ಪರೀಕ್ಷೆ ನಡೆಸಲಾಗಿಲ್ಲ. ಹೀಗಾಗಿ ಮಹಿಳೆಯನ್ನು 12 ಗಂಟೆಗಳ ಕಾಲ ವಾಹನದಲ್ಲೇ ಇರಿಸಿದ್ದಾರೆ. ಬಳಿಕ ಮತ್ತೆ ಉಪವಿಭಾಗೀಯ ಆಸ್ಪತ್ರೆಗೆ ಕರೆತಂದು ಮರುದಿನ ಪರೀಕ್ಷೆಗೆ ಒಳಪಡಿಸಲಾಗಿದೆ.
ಈ ಸಂಬಂಧ ಜಿಲ್ಲಾ ವೈದ್ಯಾಧಿಕಾರಿಯನ್ನು ಪ್ರಶ್ನಿಸಿದರೆ ತಾವು ರಜೆಯಲ್ಲಿ ಇದ್ದದಾಗಿಯೂ, ಪೊಲೀಸರನ್ನು ಪ್ರಶ್ನಿಸಿದರೆ ಇದು ಸಂವಹನದ ತೊಂದರೆಯಿಂದ ಆದ ಸಮಸ್ಯೆ, ಉದ್ದೇಶಪೂರ್ವಕ ಅಲ್ಲವೆಂದೂ ಸಬೂಬು ನೀಡಿದ್ದಾರೆ.