ಶಾಸಕ ಭೀಮಾ ಮಾಂಡವಿ ಸಾವಿನಲ್ಲಿ ರಾಜಕೀಯ ಪಿತೂರಿ; ಸಿಬಿಐ ತನಿಖೆಗೆ ಶಾ ಆಗ್ರಹ
Team Udayavani, Apr 12, 2019, 7:24 PM IST
ಹೊಸದಿಲ್ಲಿ : ಕಳೆದ ಎಪ್ರಿಲ್ 9ರಂದು ಛತ್ತೀಸ್ಗಢದ ದಾಂತೇವಾಡದಲ್ಲಿ ನಡೆದಿದ್ದ ನಕ್ಸಲ್ ದಾಳಿಗೆ ಬಲಿಯಾಗಿದ್ದ ಬಿಜೆಪಿ ಶಾಸಕ ಭೀಮಾ ಮಾಂಡವಿ ಅವರ ಹತ್ಯೆಯ ಹಿಂದೆ ರಾಜಕೀಯ ಪಿತೂರಿ ಇದೆ. ಆದುದರಿಂದ ರಾಜ್ಯದ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಅವರು ಸಿಬಿಐ ತನಿಖೆಗೆ ಅವಕಾಶ ನೀಡಬೇಕು ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಆಗ್ರಹಿಸಿದ್ದಾರೆ.
ಈ ನಡುವೆ ರಫೇಲ್ ಡೀಲ್ ಸಂಬಂಧ ಸುಪ್ರೀಂ ಕೋರ್ಟಿನ ಆದೇಶವನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಪ್ಪಾಗಿ ಉಲ್ಲೇಖೀಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ನಾಯಕಿ ಮೀನಾಕ್ಷಿ ಲೇಖೀ ಅವರು ಸುಪ್ರೀಂ ಕೋರ್ಟ್ ಮೆಟ್ಟಲೇರಿದ್ದಾರೆ.
ಲೇಖೀ ಸಲ್ಲಿಸಿರುವ ಕೋರ್ಟ್ ನಿಂದನೆ ಅರ್ಜಿಯನ್ನು ತಾನು ಎ.15ರಂದು ವಿಚಾರಣೆಗೆ ಎತ್ತಿಕೊಳ್ಳುವುದಾಗಿ ಸುಪ್ರೀಂ ಕೋರ್ಟ್ ಇಂದು ಶುಕ್ರವಾರ ಹೇಳಿದೆ.
ಇದೇ ವೇಳೆ ದೇಶ ವಿರೋಧಿ ಹೇಳಿಕೆ ನೀಡುತ್ತಿರುವ ಜಮ್ಮು ಕಾಶ್ಮೀರದ ರಾಜಕಾರಣಿಗಳಾದ ಫಾರೂಕ್ ಅಬ್ದುಲ್ಲ, ಉಮರ್ ಅಬ್ದುಲ್ಲ, ಮೆಹಬೂಬ ಮುಫ್ತಿ ಅವರನ್ನು ಲೋಕಸಭಾ ಚುನಾವಣೆಯಲ್ಲಿ ಪಾಲ್ಗೊಳ್ಳದಂತೆ ನಿರ್ಬಂಧಿಸುವಂತೆ ಚುನಾವಣಾ ಆಯೋಗಕ್ಕೆ ಸೂಕ್ತ ನಿರ್ದೇಶ ನೀಡಬೇಕೆಂದು ಕೋರಿದ ಅರ್ಜಿಯನ್ನು ದಿಲ್ಲಿ ಹೈಕೋರ್ಟ್ ನ ಇನ್ನೊಂದು ಪೀಠ “ಹಿಂಪಡೆಯಲಾಗಿರುವುದರಿಂದ ವಜಾ ಮಾಡಲಾಗಿದೆ’ ಎಂದು ಇಂದು ಶುಕ್ರವಾರ ಹೇಳಿದೆ.