ರಾಜಕೀಯ ಹಿಂಸೆ, ವೈದ್ಯರ ಮುಷ್ಕರ : ಮಮತಾ ಸರಕಾರದಿಂದ ವರದಿ ಕೇಳಿದ ಕೇಂದ್ರ
Team Udayavani, Jun 15, 2019, 7:32 PM IST
ಹೊಸದಿಲ್ಲಿ: ಪಶ್ಚಿಮ ಬಂಗಾಲದಲ್ಲಿ ಈಚೆಗೆ ನಡೆದಿರುವ ರಾಜಕೀಯ ಹಿಂಸೆ ಮತ್ತು ಪ್ರಕೃತ ಸಾಗುತ್ತಿರುವ ವೈದ್ಯರ ಮುಷ್ಕರದ ಬಗ್ಗೆ ಕೇಂದ್ರ ಸರಕಾರ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಂದ ಪ್ರತ್ಯೇಕ ವರದಿಗಳನ್ನು ಕೇಳಿದೆ.
‘ಪಶ್ಚಿಮ ಬಂಗಾಲದಲ್ಲಿ ನಡೆಯುತ್ತಿರುವ ವೈದ್ಯ ಮುಷ್ಕರದ ಹಿನ್ನೆಲೆಯಲ್ಲಿ ದೇಶದ ವಿವಿಧ ಭಾಗಗಳ ವೈದ್ಯರಿಂದ, ಆರೋಗ್ಯ ರಕ್ಷಣೆಯಲ್ಲಿ ತೊಡಗಿರುವ ವೃತ್ತಿಪರರಿಂದ ಮತ್ತು ವೈದ್ಯಕೀಯ ಸಂಘಗಳಿಂದ ನಮ್ಮ ಸಚಿವಾಲಯಕ್ಕೆ ಅಸಂಖ್ಯ ಮನವಿಗಳು, ದೂರುಗಳು ಬಂದಿವೆ. ಆದುದರಿಂದ ವೈದ್ಯರ ಮುಷ್ಕರಕ್ಕೆ ಸಂಬಂಧಿಸಿದಂತೆ ವಿಸ್ತೃತ ವರದಿಯನ್ನು ರಾಜ್ಯ ಸರಕಾರ ಕೊಡಬೇಕು’ ಎಂದು ಗೃಹ ಸಚಿವಾಲಯ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ತಿಳಿಸಿದೆ.
ಅದೇ ರೀತಿ ಪಶ್ಚಿಮ ಬಂಗಾಲದಲ್ಲಿ ಈಚೆಗೆ ಘಟಿಸಿರುವ ರಾಜಕೀಯ ಹಿಂಸಾ ಪ್ರಕರಣಗಳು ಮತ್ತು ಅಪರಾಧಿಗಳನ್ನು ಕಾನೂನು ಪ್ರಕಾರ ಶಿಕ್ಷಿಸಲು ತೆಗೆದುಕೊಂಡ ಕ್ರಮಗಳ ಕುರಿತಾಗಿಯೂ ಪಶ್ಚಿಮ ಬಂಗಾಲ ಸರಕಾರ ವಿವರವಾದ ವರದಿ ನೀಡಬೇಕು ಎಂದು ಗೃಹ ಸಚಿವಾಲಯ ಹೇಳಿದೆ.
2016ರಿಂದ 2019ರ ವರೆಗಿನ ಅವಧಿಯಲ್ಲಿ ಪಶ್ಚಿಮ ಬಂಗಾಲದಲ್ಲಿ ಸ್ಫೋಟಿಸಿರುವ ಚುನಾವಣೆ ಸಂಬಂಧಿತ ರಾಜಕೀಯ ಹಿಂಸೆಗಳು ತೀವ್ರ ಕಳವಳಕ್ಕೆ ಕಾರಣವಾಗಿವೆ ಎಂದು ಗೃಹ ಸಚಿವಾಲಯ ಹೇಳಿದೆ.