ಸಾಲ ವಸೂಲಾತಿ ವೇಳೆ ಗರ್ಭಿಣಿ ಮಹಿಳೆ ಮೇಲೆ ಟ್ರ್ಯಾಕ್ಟರ್ ಹರಿಸಿದ ಫೈನಾನ್ಸ್ ಸಿಬ್ಬಂದಿ
Team Udayavani, Sep 18, 2022, 7:45 AM IST
ಜಾರ್ಖಂಡ್ : ಸಾಲ ಪಾವತಿ ಮಾಡಿಲ್ಲ ಎಂದು ಸಾಲ ವಸೂಲಾತಿಗೆ ಬಂದ ಸಿಬ್ಬಂದಿಗಳು ಮನೆಯಲ್ಲಿದ್ದ ಗರ್ಭಿಣಿ ಮಹಿಳೆಯ ಮೇಲೆ ಟ್ರ್ಯಾಕ್ಟರ್ ಹರಿಸಿ ಕೊಲೆ ಮಾಡಿರುವ ಭೀಕರ ಘಟನೆ ಜಾರ್ಖಂಡ್ ನ ಹಜಾರಿಬಾಗ್ ಜಿಲ್ಲೆಯ ಇಚ್ಚಾಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇಲ್ಲಿನ ಖಾಸಗಿ ಫೈನಾನ್ಸ್ ವೊಂದರಲ್ಲಿ ಬಡ ಕುಟುಂಬವೊಂದು ಕೃಷಿ ಮಾಡಲು ಸಾಲ ಪಡೆದುಕೊಂಡಿತ್ತು. ಆದರೆ ಸಕಾಲದಲ್ಲಿ ಸಾಲ ತೀರಿಸಲು ಆಗಿರಲಿಲ್ಲ ಸಾಲ ವಸೂಲಾತಿಗೆಂದು ರೈತನ ಮನೆಗೆ ಖಾಸಗಿ ಫೈನಾನ್ಸ್ ಕಂಪನಿಯ ಏಜೆಂಟರು ಬಂದಿದ್ದಾರೆ. ಈ ವೇಳೆ ರೈತ ಹಾಗೂ ಏಜೆಂಟ್ ನಡುವೆ ವಾಗ್ವಾದ ನಡೆದಿದೆ. ಕೋಪಗೊಂಡ ಏಜೆಂಟ್ ರೈತನ ಮನೆಯಲ್ಲಿದ್ದ ಟ್ರ್ಯಾಕ್ಟರ್ ವಶಕ್ಕೆ ಪಡೆಯಲು ಮುಂದಾಗಿದ್ದಾನೆ, ಈ ವೇಳೆ ರೈತನ ಮೂರು ತಿಂಗಳ ಗರ್ಭಿಣಿ ಮಗಳು ಟ್ರ್ಯಾಕ್ಟರ್ ಮುಂದೆ ಅಡ್ಡ ಬಂದಿದ್ದಾಳೆ. ಆದರೆ ಆ ಏಜೆಂಟ್ ಆಕೆಯನ್ನೂ ಲೆಕ್ಕಿಸದೆ ಮೇಲೆಯೇ ಟ್ರ್ಯಾಕ್ಟರ್ ಹರಿಸಿದ್ದಾನೆ ಇದರಿಂದ ಗಂಭೀರ ಗಾಯಗೊಂಡ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.
ಘಟನೆಗೆ ಸಂಬಂಧಿಸಿದಂತೆ ಫೈನಾನ್ಸ್ ಕಂಪನಿಯ ರಿಕವರಿ ಏಜೆಂಟ್ ಹಾಗೂ ಮ್ಯಾನೇಜರ್ ಸೇರಿದಂತೆ ನಾಲ್ವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ರತನ್ ಚೋಥೆ ತಿಳಿಸಿದ್ದಾರೆ.
ಇದನ್ನೂ ಓದಿ : ಮಡಿಕೇರಿ : ಆತಂಕ ಮೂಡಿಸಿದ ಹುಲಿ ಸಂಚಾರ, ಚುಚ್ಚುಮದ್ದು ನೀಡಿದರೂ ತಪ್ಪಿಸಿಕೊಂಡ ಹುಲಿ