ಸುಪ್ರೀಂಕೋರ್ಟ್ಕ್ಷಮೆ ಕೋರಿದ ರಾಹುಲ್ ಗಾಂಧಿ
ಚೌಕಿದಾರ್ ಚೋರ್ ಹೈ ಹೇಳಿಕೆ ವಿವಾದ ಇತ್ಯರ್ಥ
Team Udayavani, May 9, 2019, 6:10 AM IST
ನವದೆಹಲಿ: ರಫೇಲ್ ಯುದ್ಧ ವಿಮಾನದ ದಾಖಲೆಗಳ ಬಗ್ಗೆ ಸುಪ್ರೀಂಕೋರ್ಟ್ ಏ.10ರಂದು ನೀಡಿದ್ದ ತೀರ್ಪನ್ನು ಉಲ್ಲೇಖೀಸಿ ಪ್ರಧಾನಿ ವಿರುದ್ಧ ‘ಚೌಕಿದಾರ್ ಚೋರ್ ಹೈ’ ಎಂಬ ಹೇಳಿಕೆ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬೇಷರತ್ ಕ್ಷಮೆ ಯಾಚಿಸಿದ್ದಾರೆ. ಬಿಜೆಪಿ ಸಂಸದೆ, ನ್ಯಾಯವಾದಿ ಮೀನಾಕ್ಷಿ ಲೇಖೀ ಸಲ್ಲಿಸಿದ್ದ ದೂರಿನ ಆಧಾರದಲ್ಲಿ ದಾಖಲಾಗಿರುವ ಕ್ರಿಮಿನಲ್ ಮೊಕದ್ದಮೆಯನ್ನೂ ರದ್ದು ಮಾಡಬೇಕು ಎಂದು ಬುಧವಾರ ಸಲ್ಲಿಸಿರುವ ಹೆಚ್ಚುವರಿ ಅಫಿಡವಿಟ್ನಲ್ಲಿ ಅರಿಕೆ ಮಾಡಿಕೊಂಡಿದ್ದಾರೆ.
ಸುಪ್ರೀಂಕೋರ್ಟಿನ ಬಗ್ಗೆ ಅತ್ಯುನ್ನತ ಗೌರವವಿದೆ ಎಂದು ಹೇಳಿಕೊಂಡಿರುವ ಅವರು, ನ್ಯಾಯಾಂಗದ ಕಾರ್ಯಕಲಾಪದ ಮೇಲೆ ಯಾವುದೇ ರೀತಿಯಲ್ಲಿ ಹಸ್ತಕ್ಷೇಪ ನಡೆಸುವ ಇಚ್ಛೆ ತಮಗಿಲ್ಲ ಎಂದು ಹೇಳಿಕೊಂಡಿದ್ದಾರೆ. ಒಟ್ಟು ಮೂರು ಪುಟಗಳ ಅಫಿಡವಿಟ್ನಲ್ಲಿ ವಿವಾದದ ಬಗ್ಗೆ ಕ್ಷಮೆ ಕೋರಿ ಕಾಂಗ್ರೆಸ್ ಅಧ್ಯಕ್ಷರು ಪ್ರಕರಣಕ್ಕೆ ಮುಕ್ತಾಯ ಹಾಡಿದ್ದಾರೆ. ಇದೇ ವೇಳೆ ಲೇಖೀ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿ ಮತ್ತು ರಫೇಲ್ ವಿವಾದಕ್ಕೆ ಸಂಬಂಧಿಸಿದ ಪ್ರಕರಣ ಮೇ 10ರಂದು ವಿಚಾರಣೆಗೆ ಬರಲಿದೆ.
ಸುಪ್ರೀಂಕೋರ್ಟ್ಗೆ ರಾಹುಲ್ ಗಾಂಧಿ ಸಲ್ಲಿಸಿರುವ ಬೇಷರತ್ ಕ್ಷಮೆ ಕಾಂಗ್ರೆಸ್ ರಾಜಕೀಯವಾಗಿ ದಿವಾಳಿಯಾಗಿದೆ ಎಂಬುದನ್ನು ತೋರಿಸುತ್ತದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ವ್ಯಂಗ್ಯವಾಡಿದ್ದಾರೆ. ಅವರು ಪದೇ ಪದೆ ಸುಳ್ಳು ಹೇಳುತ್ತಾರೆ ಎನ್ನುವುದು ಮತ್ತೂಮ್ಮೆ ಸಾಬೀತಾಗಿದೆ. ಪ್ರಧಾನಿಯವರ ವಿರುದ್ಧ ಅವರು ಒಟ್ಟು 52 ಬೈಗುಳ ಪದಗಳನ್ನು ಪ್ರಯೋಗಿಸಿದ್ದಾರೆ ಎಂದಿದ್ದಾರೆ.