ರಾಜಸ್ಥಾನ ಸಿಎಂ ಭವಿಷ್ಯ 2 ದಿನದಲ್ಲಿ ನಿರ್ಧಾರ
Team Udayavani, Sep 30, 2022, 6:30 AM IST
ನವದೆಹಲಿ: ಭಾರೀ ಹೈಡ್ರಾಮಾಗಳಿಗೆ ಸಾಕ್ಷಿಯಾದ ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ಅವರು ಸಿಎಂ ಆಗಿ ಮುಂದುವರಿಯುತ್ತಾರೋ, ಇಲ್ಲವೋ ಎಂಬುದು ಇನ್ನೆರಡು ದಿನಗಳಲ್ಲಿ ಸ್ಪಷ್ಟವಾಗಲಿದೆ.
ಗುರುವಾರ ಗೆಹ್ಲೋಟ್ ಅವರು ದೆಹಲಿಗೆ ಆಗಮಿಸಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೊಂದಿಗೆ ಮಾತುಕತೆ ನಡೆಸಿ ವಾಪಸಾಗಿದ್ದಾರೆ. ಈ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದಾರೆ. ಅಲ್ಲದೇ, ಇತ್ತೀಚೆಗೆ ಜೈಪುರದಲ್ಲಿ ನಡೆದ ಘಟನೆಗಳಿಗಾಗಿ ನಾನು ಸೋನಿಯಾರಲ್ಲಿ ಕ್ಷಮೆ ಯಾಚಿಸಿದ್ದೇನೆ ಎಂದೂ ತಿಳಿಸಿದ್ದಾರೆ.
ಅತ್ತ ಗೆಹ್ಲೋಟ್ ರಾಜಸ್ಥಾನಕ್ಕೆ ವಾಪಸಾಗುತ್ತಿದ್ದಂತೆ, ರಾಜಸ್ಥಾನ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಅವರು ದೆಹಲಿಗೆ ದೌಡಾಯಿಸಿದ್ದಾರೆ. ಗುರುವಾರ ರಾತ್ರಿ 10 ಜನಪಥ್ನಲ್ಲಿ ಸೋನಿಯಾ ನೇತೃತ್ವದಲ್ಲಿ ಮಹತ್ವದ ಸಭೆ ನಡೆದಿದ್ದು, ಅದರಲ್ಲಿ ಪೈಲಟ್, ಕೆ.ಸಿ.ವೇಣುಗೋಪಾಲ್ ಮತ್ತಿತರ ನಾಯಕರು ಪಾಲ್ಗೊಂಡಿದ್ದರು.
ಇದಕ್ಕೂ ಮುನ್ನ ಮಾತನಾಡಿದ್ದ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ರಾಜಸ್ಥಾನ ಸಿಎಂ ಹುದ್ದೆ ಕುರಿತು ಇನ್ನು ಒಂದೆರಡು ದಿನಗಳಲ್ಲಿ ಸೋನಿಯಾಗಾಂಧಿ ಅವರೇ ನಿರ್ಧಾರ ಕೈಗೊಳ್ಳುತ್ತಾರೆ ಎಂದಿದ್ದಾರೆ.
ನಮ್ಮದು ಫ್ರೆಂಡ್ಲಿ ಫೈಟ್! :
ಎಐಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾದ ದಿಗ್ವಿಜಯ್ ಸಿಂಗ್ ಹಾಗೂ ಶಶಿತರೂರ್ ಅವರು ಗುರುವಾರ ದೆಹಲಿಯಲ್ಲಿ ಭೇಟಿಯಾಗಿದ್ದಾರೆ. ಈ ವೇಳೆ ಮಾತನಾಡಿದ ಉಭಯ ನಾಯಕರು, “ನಮ್ಮದು ಪ್ರತಿಸ್ಪರ್ಧಿಗಳ ನಡುವಿನ ಹೋರಾಟವಲ್ಲ. ಬದಲಾಗಿ, ಸಹೋದ್ಯೋಗಿಗಳ ನಡುವಿನ ಫ್ರೆಂಡ್ಲಿ ಫೈಟ್ ಆಗಿರಲಿದೆ’ ಎಂದಿದ್ದಾರೆ. ಶುಕ್ರವಾರ ಇವರಿಬ್ಬರೂ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಇನ್ನು, ಜಾರ್ಖಂಡ್ನ ಕಾಂಗ್ರೆಸ್ ಶಾಸಕ ಕೆ.ಎನ್.ತ್ರಿಪಾಠಿ ಅವರೂ ನಾಮಪತ್ರದ ಅರ್ಜಿಯನ್ನು ಪಡೆದುಕೊಂಡಿದ್ದು, ಸ್ಪರ್ಧೆಯ ಸುಳಿವು ನೀಡಿದ್ದಾರೆ. ಮತ್ತೂಂದೆಡೆ, ಜಿ-23 ನಾಯಕರಲ್ಲಿ ಒಬ್ಬರಾದ ಮುಕುಲ್ ವಾಸ್ನಿಕ್ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಚಿಂತನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.