Ram Mandir; ಜಾಲತಾಣಗಳಲ್ಲಿ ರಾಮ ಭಜನೆ ಅಪ್ಲೋಡ್ ಮಾಡಿ: ಮೋದಿ
108ನೇ ಮನ್ ಕೀ ಬಾತ್ ಬಾನುಲಿ ಕಾರ್ಯಕ್ರಮದಲ್ಲಿ ದೇಶವಾಸಿಗಳಿಗೆ ಸಲಹೆ
Team Udayavani, Jan 1, 2024, 1:19 AM IST
ಹೊಸದಿಲ್ಲಿ: ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆಯ ಸಂಭ್ರಮವು ದೇಶಾದ್ಯಂತ ಮನೆ ಮಾಡಿದ್ದು, ರಾಮನ ಕುರಿತಾಗಿ ನೀವು ರಚಿಸಿದ ಹಾಡು, ಭಜನೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿ ಎಂದು ದೇಶವಾಸಿಗಳಿಗೆ ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ.
2023ರ ಕೊನೆಯ ಮತ್ತು 108ನೇ ಆವೃತ್ತಿಯ “ಮನ್ ಕೀ ಬಾತ್’ನಲ್ಲಿ ರವಿವಾರ ಮಾತನಾಡಿದ ಅವರು, “ಶ್ರೀರಾಮನ ಕುರಿತ ಭಜನೆಗಳನ್ನು “ಶ್ರೀ ರಾಮ್ ಭಜನ್’ ಎಂಬ ಹ್ಯಾಶ್ಟ್ಯಾಗ್ ಮೂಲಕ ಪೋಸ್ಟ್ ಮಾಡಿ. ಇದರಿಂದ ಭಕ್ತಿ ಭಾವದ ಹರಿವು ಉಂಟಾಗಲಿದೆ ಮತ್ತು ಶ್ರೀರಾಮನ ನೈತಿಕ ಅಂಶಗಳ ಬಗ್ಗೆ ಹೆಚ್ಚು ಪ್ರಚಾರ ಸಿಕ್ಕಿದಂತಾಗುತ್ತದೆ. ನಮ್ಮಲ್ಲಿ ಹೃದಯಸ್ಪರ್ಶಿ ಭಜನೆ ರಚಿಸಿ ಹಾಡುವ ಯುವ ಹಾಗೂ ಪ್ರಸಿದ್ಧ ಕಲಾವಿದರಿದ್ದಾರೆ’ ಎಂದಿದ್ದಾರೆ.
ಸಾಧನೆಗಳ ಪ್ರಸ್ತಾವ: ಇದೇ ವೇಳೆ, 2023ರ ಸಾಧನೆಗಳನ್ನೂ ಪ್ರಸ್ತಾವಿಸಿದ ಮೋದಿ, ಜಿ20 ರಾಷ್ಟ್ರಗಳ ಸಮ್ಮೇಳನ, ಚಂದ್ರನ ದಕ್ಷಿಣ ಭಾಗದಲ್ಲಿ ಇಸ್ರೋ ಯಶಸ್ವಿಯಾಗಿ ಇಳಿದದ್ದು, ಜಗತ್ತಿನ
ನಾವೀನ್ಯ ಸೂಚ್ಯಂಕದಲ್ಲಿ ದೇಶದ ಶ್ರೇಯಾಂಕ 81ರಿಂದ 40ಕ್ಕೆ ಏರಿಕೆಯಾಗಿದ್ದು, “ನಾಟ್ಟು ನಾ ಟ್ಟು’ ಹಾಡು, “ದ ಎಲಿಫೆಂಟ್ ವಿಸ್ಪರರ್ಸ್’ ಆಸ್ಕರ್ ಪ್ರಶಸ್ತಿಗೆ ಭಾಜನವಾಗಿದ್ದು, ಏಷ್ಯನ್ ಗೇಮ್ಸ್ -ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ದೇಶದ ಕ್ರೀಡಾಪಟುಗಳು ಕ್ರಮವಾಗಿ 107 ಮತ್ತು 111 ಪದಕ ಗೆದ್ದಿದ್ದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
108ರ ಮಹತ್ವ ವಿವರಣೆ
ಇದು 108ನೇ “ಮನ್ ಕೀ ಬಾತ್’. ಭಾರತೀಯರ ಜೀವನ ಕ್ರಮದಲ್ಲಿ 108ಕ್ಕೆ ಮಹತ್ವವಿದೆ. ಜಪಮಾಲೆಯಲ್ಲಿ ಶ್ಲೋಕಗಳನ್ನು 108 ಬಾರಿ ಪಠಣ, 108 ಪವಿತ್ರ ಕ್ಷೇತ್ರಗಳು, 108 ಮೆಟ್ಟಿಲುಗಳು, 108 ಗಂಟೆಗಳು ಹೀಗೆ ನಮ್ಮ ಜೀವನ ಕ್ರಮದಲ್ಲಿ ಮತ್ತು ನಂಬಿಕೆಯ ವಿಚಾರಗಳಲ್ಲಿ 108 ಸಂಖ್ಯೆಯು ಭಾರೀ ಮಹತ್ವ ಪಡೆದುಕೊಂಡಿದೆ ಎಂದೂ ಮೋದಿ ಹೇಳಿದ್ದಾರೆ.
ಬೆಂಗಳೂರಿನ ರಿಷಭ್ ಫಿಟ್ನೆಸ್ ಉಲ್ಲೇಖ
ಫಿಟ್ನೆಸ್ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಮಾತನಾಡಿರುವ ಪ್ರಧಾನಿ ಮೋದಿ, ಬೆಂಗಳೂ ರಿನಲ್ಲಿ ನೆಲೆಸಿರುವ ರಿಷಭ್ ಮಲ್ಹೋತ್ರಾ ಅವರ “ರಿಷಭ್ ಫಿಟೆ°ಸ್’ ಸ್ಟಾರ್ಟ್ಅಪ್ ಬಗ್ಗೆ ಉಲ್ಲೇಖೀಸಿದ್ದಾರೆ. “ಮನ್ ಕೀ ಬಾತ್’ನಲ್ಲಿ ಪ್ರಧಾನಿ ಜತೆಗೆ ರಿಷಭ್ ತಮ್ಮ “ತಗ್ಡಾ ರಹೋ’ ಎಂಬ ಸ್ಟಾರ್ಟ್ ಅಪ್ ಬಗ್ಗೆ ವಿವರಿಸಿದ್ದಾರೆ. ದೇಶದ ಸಾಂಪ್ರದಾಯಿಕ ವ್ಯಾಯಾಮ ಪದ್ಧತಿ ಗದಾ ವ್ಯಾಯಾಮ ಪದ್ಧತಿ ಅಳವಡಿಸಿಕೊಂಡು ಜನರಿಗೆ ಅದರ ಬಗ್ಗೆ ತರಬೇತಿ ನೀಡುತ್ತಿದ್ದೇವೆ. ಇದರಿಂದ ಜನರ ಬಲ ಹೆಚ್ಚಿ, ಆರೋಗ್ಯ ಖಾತರಿ ಜತೆಗೆ ಉಸಿರಾಟದ ಸಮಸ್ಯೆ ನಿವಾರಿಸುವುದರ ಬಗ್ಗೆಯೂ ಶ್ರಮ ವಹಿಸುತ್ತೇವೆ ಎಂದರು. ಇದೇ ವೇಳೆ, ಬಾಲಿ ವುಡ್ ನಟ ಅಕ್ಷಯ ಕುಮಾರ್, ಸದ್ಗುರು, ಮಹಿಳಾ ಕ್ರಿಕೆಟರ್ ಹರ್ಮನ್ ಪ್ರೀತ್ ಕೌರ್, ಚೆಸ್ ಆಟಗಾರ ವಿಶ್ವನಾಥನ್ ಆನಂದ್ ಕೂಡ ಫಿಟ್ನೆಸ್ ಟಿಪ್ಸ್ ನೀಡಿದರು.
80ರ ದಶಕದ ಮೆಗಾ ಟಿವಿ ಧಾರಾವಾಹಿಗಳಾದ ರಾಮಾಯಣ ಮತ್ತು ಮಹಾಭಾರತಕ್ಕಿಂತಲೂ ಪ್ರಧಾನಿ ಮೋದಿಯವರ “ಮನ್ ಕೀ ಬಾತ್’ ಕಾರ್ಯಕ್ರಮ ಹೆಚ್ಚು ಜನಪ್ರಿಯವಾಗಿದೆ.
ಮಾಣಿಕ್ ಸಾಹಾ, ತ್ರಿಪುರಾ ಸಿಎಂ