ಸುಶಾಂತ್ ಕೇಸ್ ರಾಜಕೀಯ ಅಸ್ತ್ರ: ಅವಧಿಗೂ ಮುನ್ನ ಬಿಹಾರ ಡಿಜಿಪಿ ಪಾಂಡೆ ರಾಜೀನಾಮೆ
ನನ್ನಿಂದ ಯಾವ ಸೇವೆಯನ್ನು ನಿರೀಕ್ಷಿಸುತ್ತಾರೆ ಎಂಬುದನ್ನು ಚರ್ಚಿಸಿ ನಂತರ ನಾನು ನಿರ್ಧಾರ ತೆಗೆದುಕೊಳ್ಳುತ್ತೇನೆ
Team Udayavani, Sep 23, 2020, 11:35 AM IST
ನವದೆಹಲಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡು ಸುದ್ದಿಯಾಗಿದ್ದ ಬಿಹಾರದ ಡಿಜಿಪಿ (ಡೈರೆಕ್ಟರ್ ಜನರಲ್ ಆಫ್ ಪೊಲೀಸ್) ಗುಪ್ತೇಶ್ವರ್ ಪಾಂಡೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು, ರಾಜ್ಯಪಾಲ ಫಾಗು ಚೌಹಾಣ್ ರಾಜೀನಾಮೆ ಸ್ವೀಕರಿಸಿರುವುದಾಗಿ ತಿಳಿಸಿದ್ದಾರೆ.
ಏತನ್ಮಧ್ಯೆ ಸುಶಾಂತ್ ಪ್ರಕರಣದ ಹಿನ್ನೆಲೆಯಲ್ಲಿ ನಿವೃತ್ತಿ ಪಡೆದುಕೊಂಡಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಪಾಂಡೆ, ಸುಶಾಂತ್ ಸಿಂಗ್ ರಜಪೂತ್ ಪ್ರಕರಣದ ನಿಟ್ಟಿನಲ್ಲಿ ಈ ನಿರ್ಧಾರ ತೆಗೆದುಕೊಂಡಿಲ್ಲ ಎಂದು ತಿಳಿಸಿದ್ದಾರೆ.
ಪಾಂಡೆ ಅವರ ಸ್ವಯಂ ನಿವೃತ್ತಿ ಮಂಗಳವಾರ ಬಿಹಾರ ಸರ್ಕಾರ ಅಂಗೀಕರಿಸಿತ್ತು. ವರದಿಗಳ ಪ್ರಕಾರ, ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಕ್ಸಾರ್ ಜಿಲ್ಲೆಯ ಸಾಹ್ ಪುರ್ ಕ್ಷೇತ್ರದಲ್ಲಿ ಆಡಳಿತಾರೂಢ ಎನ್ ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂದು ವಿವರಿಸಿದೆ.
ಇದನ್ನೂ ಓದಿ: ಮುಂಬೈನಲ್ಲಿ ವರುಣನ ಆರ್ಭಟ: ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು, ರೈಲು ಸೇವೆ ಸ್ಥಗಿತ
ತುಂಬಾ ಸೂಕ್ಷ್ಮವಾಗಿ ಪ್ರತಿಕ್ರಿಯೆ ನೀಡಿದ್ದ ಮಾಜಿ ಡಿಜಿಪಿ ಪಾಂಡೆ, ತಮ್ಮ ರಾಜಕೀಯ ಜೀವನದ ಬಗ್ಗೆ ಅಲ್ಲಗಳೆದಿಲ್ಲ. ಇಂದಿನಿಂದ ನಾನು ಡಿಜಿಪಿಯಾಗಿ ಮುಂದುವರಿಯಲು ಸಾಧ್ಯವಿಲ್ಲ. ಹೀಗಾಗಿ ನನಗೆ ಯಾವುದೇ ಸರ್ಕಾರಿ ನಿಯಮ ಅನ್ವಯವಾಗುವುದಿಲ್ಲ. ಬಕ್ಸಾರ್, ಜೆಹನಾಬಾದ್, ಬೇಗುಸರಾಯ್ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಜನರು ನನ್ನ ಬಳಿ ಬರುತ್ತಾರೆ. ನನ್ನಿಂದ ಯಾವ ಸೇವೆಯನ್ನು ನಿರೀಕ್ಷಿಸುತ್ತಾರೆ ಎಂಬುದನ್ನು ಚರ್ಚಿಸಿ ನಂತರ ನಾನು ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.
ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ಈಗಲೂ ಹೇಳಲು ಸಾಧ್ಯವಿಲ್ಲ ಎಂದು ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಸಿಕ್ಕಿದರೆ ಏನು ಮಾಡುತ್ತೀರಿ ಎಂಬ ಪ್ರಶ್ನೆಗೆ ಈ ಪ್ರತಿಕ್ರಿಯೆ ನೀಡಿದ್ದಾರೆ.
ನಾನು ಯಾವುದೇ ರಾಜಕೀಯ ಪಕ್ಷ ಸೇರಿಲ್ಲ. ಒಂದು ವೇಳೆ ನಾನು ರಾಜಕೀಯ ಪಕ್ಷ ಸೇರುವ ವೇಳೆ ನಿಮಗೆಲ್ಲರಿಗೂ ತಿಳಿಸುತ್ತೇನೆ. ಸಾಮಾಜಿಕ ಸೇವೆ ಮಾಡಲು ರಾಜಕೀಯ ಒಂದೇ ದಾರಿಯಲ್ಲ ಎಂದು ಈ ಸಂದರ್ಭದಲ್ಲಿ ಹೇಳಿದರು.