“ಭಾರತ್ ಕೇ ವೀರ್’ ನಿಧಿಗೆ 12.93 ಕೋಟಿ ರೂ. ದೇಣಿಗೆ!
Team Udayavani, Jan 21, 2018, 12:15 PM IST
ಹೊಸದಿಲ್ಲಿ: ಅರೆಸೇನಾ ಪಡೆಗಳ ಹುತಾತ್ಮ ಯೋಧರ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಸ್ಥಾಪಿತವಾದ “ಭಾರತ್ ಕೇ ವೀರ್’ ನಿಧಿಯ ಆರಂಭಿಕ ಹೆಜ್ಜೆಯಾಗಿ ಸಂಗ್ರಹಿಸಲಾದ ದೇಣಿಗೆ ವೇಳೆ ಒಂದೇ ದಿನದಲ್ಲಿ 12.93 ಕೋಟಿ ರೂ. ಹರಿದುಬಂದಿದೆ!
ಭಾರತ್ ಕೇ ವೀರ್ ನಿಧಿಗಾಗಿ ಧ್ಯೇಯ ಗೀತೆಯೊಂದನ್ನು ರಚಿಸಲಾಗಿದ್ದು, ಶನಿವಾರ ಅದರ ಅನಾವರಣ ಸಮಾರಂಭ ನಡೆಯಿತು. ಈ ಗೀತೆಯನ್ನು ಬಾಲಿವುಡ್ನ ಹೆಸರಾಂತ ಗಾಯಕ ಕೈಲಾಶ್ ಖೇರ್ ಸಂಯೋಜಿಸಿ, ಹಾಡಿದ್ದಾರೆ. ಸಮಾರಂಭದಲ್ಲಿ, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಗೃಹ ಇಲಾಖೆಯ ರಾಜ್ಯ ಸಚಿವರಾದ ಕಿರಣ್ ರಿಜಿಜು, ಹನ್ಸ್ರಾಜ್ ಅಹಿರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಬಾಲಿವುಡ್ ನಟ ಅಕ್ಷಯ್ ಕುಮಾರ್ ಭಾಗವಹಿಸಿದ್ದರು.