ಕೇಸರಿ ನನ್ನ ಬಣ್ಣವಲ್ಲ; ಎಡ ನಾಯಕರೇ ಹೀರೋಗಳು
Team Udayavani, Sep 2, 2017, 7:20 AM IST
ತಿರುವನಂತಪುರಂ: ತಮಿಳು ಸೂಪರ್ಸ್ಟಾರ್ ರಜನಿಕಾಂತ್ ಅವರ ರಾಜಕೀಯ ಪ್ರವೇಶದ ಸುದ್ದಿ ಇನ್ನೂ ತಾರ್ಕಿಕ ಅಂತ್ಯ ಕಾಣದಿರುವ ನಡುವೆಯೇ, ಮತ್ತೂಬ್ಬ ಖ್ಯಾತ ನಟ ಕಮಲ್ ಹಾಸನ್ ರಾಜಕೀಯಕ್ಕೆ ಎಂಟ್ರಿ ಕೊಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಂತಿದೆ. “ತಮಿಳುನಾಡಿನ ವಿಧಾನಭವನವಿರುವ ಫೋರ್ಟ್ ಸೈಂಟ್ ಜಾರ್ಜ್ನತ್ತ ಹೆಜ್ಜೆ ಹಾಕಲು ಸಿದ್ಧರಾಗಿ’ ಎಂದು ತಮ್ಮ ಬೆಂಬಲಿಗರಿಗೆ ಇತ್ತೀಚೆಗಷ್ಟೇ ಕರೆ ನೀಡಿದ್ದ ಕಮಲ್ ಅವರು ಶುಕ್ರವಾರ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರನ್ನು ಭೇಟಿಯಾಗಿರುವುದು ಸಹಜವಾಗಿಯೇ ಕುತೂಹಲ ಮೂಡಿಸಿದೆ.
ಶುಕ್ರವಾರ ತಿರುವನಂತಪುರಂಗೆ ತೆರಳಿದ್ದ ಕಮಲ್ ಅವರನ್ನು ಸಿಎಂ ಪಿಣರಾಯಿ ಹಾಗೂ ಅವರ ಪತ್ನಿ ಕಮಲಾ ಆತ್ಮೀಯ ವಾಗಿ ಸ್ವಾಗತಿಸಿದ್ದಾರೆ. ತದನಂತರ ಸುದ್ದಿಗಾರರ ಪ್ರಶ್ನೆಗೆ ಉತ್ತರಿ ಸುತ್ತಾ ಇಬ್ಬರೂ, ತಾವು ರಾಜಕೀಯದ ಕುರಿತೂ ಚರ್ಚಿಸಿರುವು ದಾಗಿ ಒಪ್ಪಿಕೊಂಡಿದ್ದಾರೆ. ವಿಶೇಷವೆಂದರೆ, “ರಾಜಕೀಯ ಪ್ರವೇಶಿಸುತ್ತೀರಾ, ಯಾವ ಪಕ್ಷ ಸೇರುತ್ತೀರಿ’ ಎಂಬ ಪ್ರಶ್ನೆಗೆ ಕಮಲ್ ಹಾಸನ್ ಅವರು, “ಸ್ವಲ್ಪ ಕಾಯಿರಿ. ಆದರೆ, ಖಂಡಿತಾ ನನ್ನದು ಕೇಸರಿ ಬಣ್ಣವಲ್ಲ. ಎಡಪಕ್ಷಗಳ ನಾಯಕರೇ ನನ್ನ ಹೀರೋಗಳು’ ಎಂದು ನುಡಿಯುವ ಮೂಲಕ ಎಡರಂಗದಲ್ಲಿ ಗುರುತಿಸಿಕೊಳ್ಳುವ ಸುಳಿವು ನೀಡಿದ್ದಾರೆ.
ಇದೇ ವೇಳೆ, ಇದೊಂದು ಸದ್ಭಾವನಾ ಭೇಟಿಯಾಗಿತ್ತು. ಇಲ್ಲಿ ನಾವು ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ರಾಜಕೀಯ ಕುರಿತು ಚರ್ಚಿಸಿದ್ದೇವೆ ಎಂದು ಪಿಣರಾಯಿ ತಿಳಿಸಿದ್ದಾರೆ. ಇನ್ನು ರಾಜಕೀಯ ಪ್ರವೇಶ ಕುರಿತು ಪ್ರತಿಕ್ರಿಯಿಸಿದ ಕಮಲ್, “ರಾಜಕೀಯ ಪ್ರವೇಶ ದೊಡ್ಡ ವಿಚಾರವಲ್ಲ. ಆದರೆ, ಅದಕ್ಕಾಗಿ ನಾನು ಎಷ್ಟು ಸಮಯವನ್ನು ಕಾದಿರಿಸಬಲ್ಲೆ ಎನ್ನುವುದು ಮುಖ್ಯವಾಗುತ್ತದೆ. ಅಲ್ಲದೆ, ಸರಕಾರಕ್ಕಿಂತಲೂ ವಿಚಾರಗಳು ಹಾಗೂ ಜನರು ಮುಖ್ಯ. ನಾನು ರಾಜಕೀಯ ಸೇರುವ ಮೊದಲು ಇನ್ನಷ್ಟು ರಾಜಕೀಯ ನಾಯಕರನ್ನು ಭೇಟಿಯಾಗಲು ಇಚ್ಛಿಸುತ್ತೇನೆ’ ಎಂದಿದ್ದಾರೆ.