ಕೆಂಪುಕೋಟೆ ದಾಳಿ: ಲಷ್ಕರ್ ಉಗ್ರನ ಗಲ್ಲು ಕಾಯಂ
Team Udayavani, Nov 3, 2022, 8:30 PM IST
ನವದೆಹಲಿ: ಡಿಸೆಂಬರ್ 22, 2000ದಲ್ಲಿ ನಡೆದ ಕೆಂಪು ಕೋಟೆ ದಾಳಿ ಪ್ರಕರಣದಲ್ಲಿ ಪಾಕ್ ಮೂಲದ ಲಷ್ಕರ್ ಉಗ್ರನ ಗಲ್ಲುಶಿಕ್ಷೆಯನ್ನು ಕಾಯಂಗೊಳಿಸಿ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
ಮರಣದಂಡನೆ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಉಗ್ರ ಮೊಹಮ್ಮದ್ ಆರಿಫ್ ಅಲಿಯಾಸ್ ಅಶ್ಫಾಕ್ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ಗುರುವಾರ ವಜಾ ಮಾಡಿದೆ. “ದಾಳಿಯಲ್ಲಿ ಆರಿಫ್ ತಪ್ಪಿತಸ್ಥ ಎನ್ನುವುದು ಸಾಬೀತಾಗಿದೆ. ಹೀಗಾಗಿ, ಮೇಲ್ಮನವಿ ವಜಾ ಮಾಡುತ್ತಿದ್ದೇವೆ’ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್ ಮತ್ತು ನ್ಯಾ.ಬೇಲಾ ಎಂ. ತ್ರಿವೇದಿ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠ ಹೇಳಿದೆ.
ಡಿ.22, 2000ದಲ್ಲಿ ಕೆಂಪುಕೋಟೆಯೊಳಗೆ ನುಗ್ಗಿದ್ದ 6 ಶಸ್ತ್ರಧಾರಿ ಉಗ್ರರು, ಅಲ್ಲಿ ಕಾವಲಿದ್ದ ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಘಟನೆಯಲ್ಲಿ ಇಬ್ಬರು ಯೋಧರು ಸೇರಿ ಮೂವರು ಮೃತಪಟ್ಟಿದ್ದರು.