ಉಗ್ರ ನಿಗ್ರಹಕ್ಕೆ “ಜೀವಂತ ಹಿಡಿವ ಪ್ರಯತ್ನ’
Team Udayavani, May 22, 2018, 6:00 AM IST
ಶ್ರೀನಗರ/ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರಗಾಮಿಗಳನ್ನು ಮಟ್ಟ ಹಾಕುತ್ತಿರುವ ಭದ್ರತಾ ಪಡೆಗಳು ಹೊಸ ತಂತ್ರ ಅನುಸರಿಸಲು ಮುಂದಾಗಿವೆ. ಉಗ್ರ ಸಂಘಟನೆಗಳಿಗೆ ಸೇರ ಬೇಡಿ ಎಂಬ ಮನವೊಲಿಕೆ ತಂತ್ರ ಮುಂದುವರಿಸುವ ಜತೆಗೆ, ಇದರ ಹೊರತಾಗಿಯೂ ಭಯೋತ್ಪಾದನೆಯತ್ತ ಮುಖ ಮಾಡಿರುವವರನ್ನು “ಜೀವಂತ ವಾಗಿ ಹಿಡಿಯುವ ಪ್ರಯತ್ನ ‘(ಟ್ರೈ ಟು ಕ್ಯಾಚ್ ದೆಮ್ ಎಲೈವ್)ಕ್ಕೆ ಕೈಹಾಕಿವೆ. ಒಟ್ಟು 7 ತಿಂಗಳ ಅವಧಿ ಯಲ್ಲಿ 70ಕ್ಕೂ ಹೆಚ್ಚು ಉಗ್ರ ರನ್ನು ಕೊಲ್ಲಲಾಗಿದ್ದು, ಇದರ ಹೊರತಾಗಿಯೂ ಉಗ್ರ ಸಂಘ ಟನೆಗಳು ಯುವಕರ ಮನಸ್ಸು ಪರಿವರ್ತನೆ ಮಾಡುತ್ತಿವೆ ಹಾಗೂ ಜೆಹಾದ್ ನಡೆಸಲು ಕುಮ್ಮಕ್ಕು ನೀಡುತ್ತಿವೆ. ಈ ಸಂಪರ್ಕ ವ್ಯವಸ್ಥೆಯನ್ನು ಕಡಿದು ಹಾಕುವುದೇ ನಮ್ಮ ಗುರಿ ಎಂದು ಸೋಮವಾರ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಉಗ್ರರನ್ನು ಜೀವಂತವಾಗಿ ಹಿಡಿದು, ಯಾವ ಕಾರಣಕ್ಕಾಗಿ ಅವರು ಅಸಂತೋಷಗೊಂಡಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳ ಲಾಗುತ್ತದೆ.
ಗುಂಡಿನ ಚಕಮಕಿಯಲ್ಲಿ ಅಸು ನೀಗುವ ಬಗ್ಗೆ 15 ಅಥವಾ 16ನೇ ವಯಸ್ಸಿನವರನ್ನು ಮನಃ ಪರಿವರ್ತನೆ ಮಾಡುವುದು ಅಷ್ಟು ಸುಲಭವಲ್ಲ. ಇದರ ಹೊರತಾಗಿಯೂ ಉಗ್ರರ ತಂತ್ರಕ್ಕೆ ಪ್ರತಿತಂತ್ರ ಹೂಡಲೇಬೇಕು ಎಂದು ಉಗ್ರ ನಿಗ್ರಹ ದಳದಲ್ಲಿ ತೊಡಗಿರುವ ಹಿರಿಯ ಅಧಿಕಾರಿ ಹೇಳಿದ್ದಾರೆ.
ತಾತ್ಕಾಲಿಕ ಕದನ ವಿರಾಮ ಜಾರಿ ಮಾಡಿರುವುದು ಉಗ್ರ ಸಂಘಟನೆಗಳಿಗೆ ಈಗಾಗಲೇ ಸೇರಿರುವ ಯುವಕರನ್ನು ಮನವೊಲಿಸಿ ಕರೆಯಿಸಿಕೊಳ್ಳಲು ಕುಟುಂಬ ಸದಸ್ಯರಿಗೆ ಸೂಕ್ತ ಸಂದರ್ಭ ಎನ್ನುವುದು ಹಲವು ಅಧಿಕಾರಿಗಳ ಅಭಿಪ್ರಾಯ.