ಬಳ್ಳಾರಿಗೆ ಪ್ರವೇಶ: ರೆಡ್ಡಿ ಅರ್ಜಿ ತಿರಸ್ಕರಿಸಿದ ಸುಪ್ರೀಂ
Team Udayavani, Sep 5, 2017, 7:30 AM IST
ನವದೆಹಲಿ: ಬಳ್ಳಾರಿಗೆ ತೆರಳಲು ಇರುವ ನಿಷೇಧದಲ್ಲಿ ವಿನಾಯಿತಿ ತೋರಬೇಕೆಂದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಮಾಡಿರುವ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ರೆಡ್ಡಿ ಪರವಾಗಿ ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ವಾದ ಮಂಡಿಸಿದರು. ತಮ್ಮ ಕುಟುಂಬ ಬಳ್ಳಾರಿಯಲ್ಲಿದೆ. ಅಲ್ಲಿ ಮನೆ ಇದ್ದರೂ, ಬೆಂಗಳೂರಿನಲ್ಲಿಯೇ ವಾಸ ಮಾಡುವಂತಾಗಿದೆ. ನ್ಯಾಯಾಲಯದಿಂದ ಕರ್ನಾಟಕದ ರಾಜಧಾನಿಯಲ್ಲಿಯೇ ಇರುವಂತೆಯೇ ಸೂಚಿಸಲಾಗಿದೆ. ಹೀಗಾಗಿ, ಆದೇಶದಲ್ಲಿ ವಿನಾಯಿತಿ ತೋರಿಸಬೇಕೆಂದು ಮನವಿ ಮಾಡಿಕೊಂಡಿದ್ದರು. ನ್ಯಾ.ಎ.ಕೆ.ಸಿಕ್ರಿ ಮತ್ತು ನ್ಯಾ.ಅಶೋಕ್ ಭೂಷಣ್ ನೇತೃತ್ವದ ಪೀಠದ ಮುಂದೆ ವಾದಿಸಿದ ರೋಹಟಗಿ ತಮ್ಮ ಕಕ್ಷಿದಾರರು ಜಾಮೀನಿನ ನಿಯಮಗಳನ್ನು ಪಾಲಿಸುತ್ತಿದ್ದಾರೆ. ಹೀಗಾಗಿ ವಿನಾಯಿತಿ ತೋರಬಹುದು ಎಂದರು.
ಪ್ರತಿ ಬಾರಿ ಬಳ್ಳಾರಿಗೆ ತೆರಳಿದಾಗ ಜಾಮೀನು ನೀಡುವ ಸಂದರ್ಭದಲ್ಲಿ ಕೋರ್ಟ್ ಹೇಳಿದ್ದನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದೇನೆಂದು ರೆಡ್ಡಿ ಪರ ವಕೀಲರು ಹೇಳಿದರು. ಸಿಬಿಐ ಪರ ವಾದಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಮಣೀಂದರ್ ಸಿಂಗ್, ಮಾಜಿ ಸಚಿವ ಜನಾರ್ದನ ರೆಡ್ಡಿಗೆ 2015ರಲ್ಲಿ ಜಾಮೀನು ನೀಡುವ ಸಂದರ್ಭದಲ್ಲಿ ಬಳ್ಳಾರಿ ಮತ್ತು ಕಡಪಾಗೆ ತೆರಳಬಾರದೆಂದು ಷರತ್ತು ವಿಧಿಸಿಯೇ ಜಾಮೀನು ನೀಡಲಾಗಿತ್ತು. ಆ ಆದೇಶಕ್ಕೇ ತಿದ್ದುಪಡಿ ತರಬೇಕೆಂದು ರೆಡ್ಡಿ ಮನವಿ ಮಾಡಿದ್ದಾರೆಂದು ಕೋರ್ಟ್ಗೆ ತಿಳಿಸಿದರು.