ದ್ವೇಷ – ಬೆದರಿಕೆ ಒಡ್ಡುವಂತಹ ಚಟುವಟಿಕೆಗಳನ್ನು ನಿಲ್ಲಿಸಿ: ರತನ್ ಟಾಟಾ
Team Udayavani, Jun 22, 2020, 12:08 AM IST
ನವದೆಹಲಿ: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮವನ್ನು ಮನಸ್ಸಿಗೆ ಬಂದಂತೆ ಬಳಸುಕೊಳ್ಳುತ್ತಿರುವ ಜನರು, ಅವರವರ ದೃಷ್ಟಿಕೋನದ ಪ್ರಕಾರ ಕೆಲವು ವಿಷಯಗಳ ಬಗ್ಗೆ ಬರೆದುಕೊಳ್ಳುತ್ತಿದ್ದಾರೆ.
ಪರಿಣಾಮವಾಗಿ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ ಹಾಗಾಗಿ ಸಾಮಾಜಿಕ ಜಾಲತಾಣಗಳನ್ನು ಶಾಂತಿ ಕೆಡಿಸುವಂತಹ ಕೆಲಸಗಳಿಗೆ ಬಳಸಿಕೊಳ್ಳಬೇಡಿ ಎಂದು ಟಾಟಾ ಗ್ರೂಪ್ನ ಅಧ್ಯಕ್ಷ ರತನ್ ಟಾಟಾ ನೆಟ್ಟಿಗರಿಗೆ ಕರೆ ನೀಡಿದ್ದಾರೆ.
ಪ್ರಸ್ತುತ ದಿನಗಳಲ್ಲಿ ಸೈಬರ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಹಿಂಸೆಗೆ ಪ್ರಚೋದನೆ ನೀಡುವಂತಹ, ಇತರರ ಬಗ್ಗೆ ದ್ವೇಷ ಹುಟ್ಟಿಸುವಂತಹ ಪೋಸ್ಟ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಅಧಿಕವಾಗಿ ಹರಿದಾಡುತ್ತಿವೆ.
ಇನ್ನು ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ, ಭಾರತ – ಚೀನ ಸಂಘರ್ಷದಂತಹ ವಿಚಾರಗಳು ಇತರೆ ಪ್ರಚಲಿತ ವಿದ್ಯಮಾನಗಳು ಇದಕ್ಕೆ ಹೊರತಾಗಿಲ್ಲ ಎಂದು ಸೋಷಿಯಲ್ ಮೀಡಿಯಾ ದುರ್ಬಲಕ್ಕೆ ಆಗುತ್ತಿರುವುದರ ಕುರಿತು ತಮ್ಮ ಅಸಮಧಾನ ಹೊರ ಹಾಕಿದ್ದಾರೆ.
‘ಈ ವರ್ಷ ಸವಾಲಿನಿಂದ ತುಂಬಿರುವ ವರ್ಷವಾಗಿದ್ದು, ಸದ್ಯ ಆರೋಗ್ಯ ಬಿಕ್ಕಟ್ಟಿನೊಂದಿಗೆ ಆರ್ಥಿಕ ಮತ್ತು ಸಾಮಾಜಿಕ ಅಭದ್ರತೆ ಸಮಾಜವನ್ನು ಕಾಡುತ್ತಿದೆ. ಹಾಗಾಗಿ ಇಂತಹ ಸಂಕಷ್ಟದ ಸಮಯದಲ್ಲಿ ಒಬ್ಬರಿಗೊಬ್ಬರು ಜತೆಯಾಗಿ ನಿಲ್ಲಬೇಕಾಗಿದೆ.
ಇದನ್ನೂ ಓದಿ: ಪುರಿ ಜಗನ್ನಾಥ ರಥಯಾತ್ರೆಗೆ ಅನುಮತಿಗಾಗಿ ಸುಪ್ರೀಂ ಗೆ ಅರ್ಜಿ: ಇಂದು ವಿಚಾರಣೆ
ಆದರೆ ನಾವು ಇದರ ಹೊರತಾಗಿ ಆನ್ಲೈನ್ ಸಮುದಾಯದಲ್ಲಿ ಮತ್ತೊಬ್ಬರನ್ನು ಹೀಯಾಳಿಸುತ್ತಾ, ನೋಯಿಸುತ್ತಾ, ಒಬ್ಬರನ್ನೊಬ್ಬರು ಕುಂದಿಸುವ ಜರಿಯುವ ಕೆಲಸ ಮಾಡುತ್ತಿದ್ದೇವೆ.
ಇದು ಪರಸ್ಪರರನ್ನು ಬಡೆದಡಿಕೊಳ್ಳುವ, ದ್ವೇಷವನ್ನು ಬಿತ್ತುವ ಸಮಯವಲ್ಲ. ವಿಶೇಷವಾಗಿ ಈ ವರ್ಷದಲ್ಲಿ ಎಲ್ಲರೂ ಒಗ್ಗಟ್ಟಾಗಿ ಸಹಬಾಳ್ವೆ ಗುಣಗಳನ್ನು ಬೆಳಸಿಕೊಳ್ಳಬೇಕಿದ್ದು, ದಯೆ, ತಾಳ್ಮೆ, ಅನುಭೂತಿ ಅಗತ್ಯವಾಗಿದೆ.
ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷವನ್ನು ಬಿತ್ತರಿಸುವಂತಹ, ಬೆದರಿಕೆಗಳನ್ನು ಒಡ್ಡುವಂತಹ ಚಟುವಟಿಕೆಗಳನ್ನು ನಿಲ್ಲಿಸಿ ಎಂದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ರತನ್ ಟಾಟಾ ಬರೆದುಕೊಂಡಿದ್ದಾರೆ.