ತೀರ್ಪು ಜಾರಿ ಬಗ್ಗೆ ಟಿಡಿಬಿ ಯು ಟರ್ನ್
Team Udayavani, Feb 7, 2019, 12:30 AM IST
ಹೊಸದಿಲ್ಲಿ: ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ 10-50 ವಯೋಮಿತಿಯ ಮಹಿಳೆಯರು ಪ್ರವೇಶಿಸಬಹುದು ಎಂದು 2018ರ
ಸೆ. 28ರಂದು ನೀಡಿದ ತೀರ್ಪು ಬದಲು ಮಾಡಬಾರದು ಎಂದು ಕೇರಳ ಸರಕಾರ, ತಿರುವಾಂಕೂರು ದೇವಸ್ವಂ ಮಂಡಳಿ ಸುಪ್ರೀಂ ಕೋರ್ಟ್ಗೆ ಅರಿಕೆ ಮಾಡಿವೆ.
ಈ ಬಗ್ಗೆ ಸಲ್ಲಿಕೆಯಾಗಿರುವ 65 ಮೇಲ್ಮನವಿ ಅರ್ಜಿಗಳನ್ನು ಪರಿಶೀಲಿಸಿದ ಮುಖ್ಯ ನ್ಯಾಯ ಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಸಾಂವಿಧಾನಿಕ ಪೀಠ ತೀರ್ಪನ್ನು ಕಾಯ್ದಿರಿಸಿದೆ. ಬುಧವಾರದ ವಿಚಾರಣೆಯಲ್ಲಿನ ಮಹತ್ವದ ಅಂಶವೆಂದರೆ ಅಯ್ಯಪ್ಪ ದೇಗುಲದ ಆಡಳಿತದ ಹೊಣೆ ಹೊತ್ತಿರುವ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಮಹಿಳೆಯರಿಗೆ ಪ್ರವೇಶಕ್ಕೆ ಅನುಮತಿ ನೀಡುವ ತೀರ್ಪು ಜಾರಿಗೆ ಬೆಂಬಲ ನೀಡುವುದಾಗಿ ಬದಲಾಗಿರುವ ನಿಲುವನ್ನು ಪ್ರಕಟಿಸಿದೆ. ಮಂಡಳಿ ಪರ ವಾದಿಸಿದ ರಾಕೇಶ್ ದ್ವಿವೇದಿ ಈ ನಿಲುವು ತಿಳಿಸಿದ್ದಾರೆ. ಸಂವಿಧಾನದ 25 (1)ರ ಪ್ರಕಾರ ಸಮಾನ ಹಕ್ಕಿನ ರೂಪದಲ್ಲಿ ಧರ್ಮವನ್ನು ಪಾಲನೆ ಮಾಡುವ ಅವಕಾಶ ನೀಡುತ್ತದೆ ಎಂದು ದ್ವಿವೇದಿ ಹೇಳಿದ್ದಾರೆ. ಹೀಗಾಗಿ ನಿಲುವಿನಲ್ಲಿ ಬದಲಾವಣೆ ಎಂದಿದ್ದಾರೆ. ಅವರ ಜತೆಗೆ, ಮಹಿಳೆಯರ ಪ್ರವೇಶದ ಬಗ್ಗೆ ಹಲವು ನಿಲುವುಗಳನ್ನು ಪ್ರಕಟಿಸಿದ ಕೇರಳ ಸರಕಾರ ಕೂಡ ತೀರ್ಪಿನಲ್ಲಿ ಬದಲಾವಣೆ ಬೇಡ ಎಂದು ವಾದಿಸಿತು. ನಾಯರ್ ಸರ್ವಿಸ್ ಸೊಸೈಟಿ ಪರವಾಗಿ ನ್ಯಾಯ ವಾದಿ ಕೆ. ಪರಾಶರನ್ ವಾದ ಮಂಡಿಸಿದರು.
ಮತ್ತೂಮ್ಮೆ ಪ್ರವೇಶಿಸುವೆವು: ಈಗಾಗಲೇ ದೇಗುಲ ಪ್ರವೇಶ ಮಾಡಿದ ಬಿಂದು ಮತ್ತು ಕನಕದುರ್ಗಾ ಮತ್ತೂಮ್ಮೆ ದೇಗುಲವನ್ನು ಪ್ರವೇಶಿಸಿ ಅಯ್ಯಪ್ಪ ದೇವರ ದರ್ಶನ ಮಾಡುವ ಇರಾದೆಯನ್ನು ನ್ಯಾಯಪೀಠದ ಮುಂದೆ ವ್ಯಕ್ತಪಡಿಸಿದ್ದಾರೆ. ಫೆ.12ರಂದು ದೇಗುಲ ಮತ್ತೂಮ್ಮೆ ತೆರೆಯಲಿರುವುದರಿಂದ ಅವರ ಹೇಳಿಕೆ ಮಹತ್ವ ಪಡೆದಿದೆ. ಹಿರಿಯ ನ್ಯಾಯವಾದಿ ಇಂದಿರಾ ಜೈಸಿಂಗ್ ಮಹಿಳೆಯರ ಪರ ವಾದಿಸಿದರು. “ಪ್ರಾರ್ಥನೆ ಸಲ್ಲಿಸುವುದು ನನ್ನ ಕಕ್ಷಿದಾರರ ಸಾಂವಿಧಾನಿಕ ಹಕ್ಕು. ಅದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ’ ಎಂದು ವಾದಿಸಿದರು. ಅವರಿಬ್ಬರು ಮುಖ್ಯ ತಂತ್ರಿ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡಿದ್ದಾರೆ.
ತೀರ್ಪಿನ ಬಗ್ಗೆ ಬೆಂಬಲ ಕೊಟ್ಟದ್ದು ಎಲ್ಡಿಎಫ್ ಸರಕಾರದ ಒತ್ತಡದಿಂದ ಅಲ್ಲ. ಮಂಡಳಿ ಪುನರ್ಪರಿಶೀಲನಾ ಅರ್ಜಿ ಸಲ್ಲಿಸಿರಲಿಲ್ಲ.
ಎ.ಪದ್ಮಕುಮಾರ್, ಟಿಡಿಬಿ ಅಧ್ಯಕ್ಷ
ಸುಪ್ರೀಂಕೋರ್ಟಲ್ಲಿ 65 ಅರ್ಜಿಗಳ ವಿಚಾರಣೆ
ತೀರ್ಪು ಕಾಯ್ದಿರಿಸಿದ ಸಿಜೆಐ ನೇತೃತ್ವದ ಪೀಠ