Telangana; ರಸ್ತೆ ಅಪಘಾತದಲ್ಲಿ ಬಳ್ಳಾರಿಯ ಐವರ ದಾರುಣ ಸಾವು
Team Udayavani, Mar 4, 2024, 9:31 PM IST
ಬಳ್ಳಾರಿ: ನಗರದ ಬಸವನ ಕುಂಟೆಯ ಏಳು ಜನ ಹೈದರಾಬಾದ್ ಗೆ ಪ್ರಯಾಣ ಮಾಡುವ ವೇಳೆ ರಸ್ತೆ ಅಪಘಾತವಾಗಿದ್ದು, ಐದು ಜನ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ. ತೀವ್ರವಾಗಿ ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೂಲತಃ ದೇವಿನಗರದ ಬಸವನ ಕುಂಟೆ ನಿವಾಸಿಗಳಾದ ಅಬ್ದುಲ್ ರೆಹಮಾನ್ ಅವರ ಕುಟುಂಬ ಸದಸ್ಯರ ಬಳ್ಳಾರಿಯಿಂದ ಹೈದರಾಬಾದ್ ಕಡೆಗೆ ಹೋಗುತ್ತಿದ್ದಾಗ ಮೆಹಬೂಬ್ ನಗರ್ ಜಿಲ್ಲೆಯ ಕೊತಕೋಟ ಬೈಪಾಸ್ನ ತೆಕ್ಕಲಯ್ಯ ದರ್ಗಾ ಬಳಿ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಭೀಕರ ಅವಘಡ ಸಂಭವಿಸಿದೆ. ಮೃತ ದುರ್ದೈವಿಗಳು ವಾಸಿ(01), ಬುಸ್ರಾ (02), ಮಾರಿಯಾ, ಫಾತಿಮಾ (50), ಅಬ್ದುಲ್ ರಹಮಾನ್ (30) ಎಂದು ತಿಳಿದು ಬಂದಿದೆ.
ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಂದು ಮಗು ಆಸ್ಪತ್ರೆಗೆ ಸಾಗಿಸುವ ವೇಳೆ ಸಾವನ್ನಪ್ಪಿದೆ. ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ಮೆಹಬೂಬ್ ನಗರ್ ಜಿಲ್ಲೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.