ಮೂರನೇ ದಿನವೂ ನಡೆಯದ ಕಲಾಪ
Team Udayavani, Mar 8, 2018, 7:30 AM IST
ನವದೆಹಲಿ: ಲೋಕಸಭೆ, ರಾಜ್ಯಸಭೆಯಲ್ಲಿ ಸತತ ಮೂರನೇ ದಿನವೂ ಗದ್ದಲದಿಂದಾಗಿ ಕಲಾಪಗಳು ನಡೆಯಲಿಲ್ಲ. ರಾಜ್ಯಸಭೆಯಲ್ಲಿ ಟಿಡಿಪಿ, ಕಾಂಗ್ರೆಸ್ ಮತ್ತು ಎಐಎಡಿಎಂಕೆ ಸಂಸದರು ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ, ಪಿಎನ್ಬಿ ವಿವಾದ ಸೇರಿದಂತೆ ದಿನದ ಆರಂಭದಿಂದಲೂ ಕಲಾಪಕ್ಕೆ ಅಡ್ಡಿಯುಂಟು ಮಾಡಿದರು. ಎಲ್ಲಾ ವಿಚಾರಗಳ ಬಗ್ಗೆ ಚರ್ಚೆ ನಡೆಸಲು ಸಿದ್ಧವಿರುವುದಾಗಿ ಸರ್ಕಾರ ಹೇಳಿಕೊಂಡರೂ ಪ್ರತಿಪಕ್ಷಗಳ ಸದಸ್ಯರು ಗದ್ದಲ ಮುಂದುವರಿಸಿದರು. ಮಧ್ಯಾಹ್ನದ ನಂತರವೂ ಕಲಾಪಕ್ಕೆ ಅಡ್ಡಿಯುಂಟಾದ್ದರಿಂದ ಬುಧವಾರದ ಮಟ್ಟಿಗೆ ಕಲಾಪ ಮುಂದೂಡಲಾಯಿತು.
ಲೋಕಸಭೆಯಲ್ಲಿ ಲೆನಿನ್ ಪ್ರತಿಮೆ ಧ್ವಂಸ, ಪಿಎನ್ಬಿ ವಿವಾದ ಪ್ರಮುಖವಾಗಿ ಪ್ರಸ್ತಾಪವಾಯಿತು. ಕಾಂಗ್ರೆಸ್ ಸಂಸದರು ಹಗರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ಉತ್ತರಿಸಬೇಕು ಎಂದು ಒತ್ತಾಯಿಸಿದರು. ಶಿವಸೇನೆ ಸದಸ್ಯರು ಕನ್ನಡ, ತೆಲುಗು ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡಿದಂತೆ ಮರಾಠಿಗೂ ನೀಡಬೇಕು ಎಂದು ಒತ್ತಾಯಿಸಿದರು.
ಅಧಿಕಾರಿ ಕೂಗಿ ಹೇಳಿದರು: ಲೋಕಸಭೆಯಲ್ಲಿ ಪ್ರಶ್ನೋತ್ತರ ಅವಧಿಯನ್ನು ಕೈಗೆತ್ತಿಕೊಳ್ಳುತ್ತಿದ್ದಂತೆ ಗದ್ದಲ ಆರಂಭವಾಯಿತು. ಸ್ಪೀಕರ್ ಸದನ ಮುಂದೂಡಲಾಗಿದೆ ಎಂದು ಹೇಳಿದರೂ ಯಾರಿಗೂ ಗೊತ್ತಾಗಲಿಲ್ಲ. ಹೀಗಾಗಿ ಅಲ್ಲಿದ್ದ ಅಧಿಕಾರಿಯೊಬ್ಬರು ಕಲಾಪವನ್ನು 12 ಗಂಟೆಗೆ ಮುಂದೂಡಲಾಗಿದೆ ಎಂದು ಗಟ್ಟಿಯಾಗಿ ಹೇಳಿದರು. ಇದೇ ವೇಳೆ ಸುಗಮ ಕಲಾಪಕ್ಕೆ ಸಂಬಂಧಿಸಿದಂತೆ ಸ್ಪೀಕರ್ ನಡೆಸಿದ ಸಭೆ ಅಪೂರ್ಣವಾಗಿಯೇ ಉಳಿದಿದೆ.