Restriction ನಡುವೆಯೂ ದೂಧ್ ಸಾಗರ್ ಜಲಪಾತದತ್ತ ಪ್ರವಾಸಿಗರ ದಂಡು ; ವಿಡಿಯೋ ವೈರಲ್
ರೈಲ್ವೆ ಇಲಾಖೆ ಎಚ್ಚರಿಕೆ... ಅಪಾಯದ ಎಚ್ಚರಿಕೆ ನೀಡಿ ವಾಪಸ್ ಕಳುಹಿಸಿದ ಪೊಲೀಸರು
Team Udayavani, Jul 16, 2023, 3:44 PM IST
ಪಣಜಿ : ಭಾರೀ ಮಳೆಯ ಕಾರಣಕ್ಕಾಗಿ ಬೆಳಗಾವಿ ಮತ್ತು ಗೋವಾ ಗಡಿಯಲ್ಲಿರುವ ಭಾರತದ ಅತಿ ಎತ್ತರದ ಜಲಪಾತಗಳಲ್ಲಿ ಒಂದಾದ ದೂಧ್ ಸಾಗರ್ ಜಲಪಾತಕ್ಕೆ ಚಾರಣಿಗರ ಭೇಟಿ ನೀಡುವುದಕ್ಕೆ ಗೋವಾ ಸರಕಾರ ನಿರ್ಬಂಧ ಹೇರಿದ ಹೊರತಾಗಿಯೂ ಭಾನುವಾರ (ಜುಲೈ 16 ) ಭಾರಿ ಸಂಖ್ಯೆಯ ಪ್ರವಾಸಿಗರು ಬಂದಿದ್ದು ವಿಡಿಯೋ ವೈರಲ್ ಆಗಿದೆ.
ಟ್ರೆಕ್ಕಿಂಗ್ ಮಾಡುವವರ ಸುರಕ್ಷತೆಗಾಗಿ ಜಲಪಾತದ ಪ್ರವೇಶವನ್ನು ನಿರ್ಬಂಧಿಸಲು ರೈಲ್ವೆ ಅಧಿಕಾರಿಗಳು ನಿರ್ಧರಿಸಿದ್ದಾರೆ.ರೈಲ್ವೆ ರಕ್ಷಣಾ ಪಡೆ (ಆರ್ಪಿಎಫ್) ಸಿಬಂದಿ ಅತಿಕ್ರಮಣಕ್ಕೆ ಯತ್ನಿಸಿದ ಚಾರಣಿಗರಿಗೆ ದಂಡವನ್ನೂ ವಿಧಿಸಿದ್ದಾರೆ. ಭಾರೀ ಮಳೆಯಿಂದ ಉಂಟಾದ ಅಪಾಯಕಾರಿ ಪರಿಸ್ಥಿತಿಯಿಂದಾಗಿ ಜಲಪಾತದ ಕಡೆಗೆ ಚಾರಣಕ್ಕೆ ನಿಷೇಧ ಹೇರಲಾಗಿದೆ.
ಬೆಳಗಾವಿ, ಬಾಗಲಕೋಟೆ ಸೇರಿ ವಿವಿಧೆಡೆಯಿಂದ ಗೋವಾ ಗಡಿಯ ಮೂಲಕ ರೈಲ್ವೇ ಹಳಿಯ ಮೇಲೆ ನಡೆದುಕೊಂಡು ಬಂದಿದ್ದ ನೂರಾರು ಯುವಕರನ್ನು ಮಾರ್ಗ ಮಧ್ಯದಲ್ಲೇ ತಡೆದು ಪೊಲೀಸರು ಬಸ್ಕಿ ಹೊಡೆಸಿ ವಾಪಾಸ್ ಕಳುಹಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
End this Herd Mentality 🙏
📍Dudhsagar Falls trek today 😭🚫 pic.twitter.com/Ldk93RN5dQ
— Visit Udupi (@VisitUdupi) July 16, 2023
50ಕ್ಕೂ ಹೆಚ್ಚು ಪೊಲೀಸರು, ಅರಣ್ಯ ಸಿಬಂದಿಗಳು ಮತ್ತು ರೈಲ್ವೇ ಸಿಬಂದಿಗಳನ್ನು ಗೋವಾ ಸರಕಾರ ಸ್ಥಳದಲ್ಲಿ ನಿಯೋಜಿಸಿದೆ. ಹಲವರನ್ನು ಲೋಂಡಾ ಮೂಲಕ ವಾಪಾಸ್ ಹೋಗುವಂತೆ ಸೂಚನೆ ನೀಡಿದ್ದಾರೆ. ಗೋವಾ ಸರಕಾರ ಅನುಮತಿ ನೀಡಿದಾಗ ಮಾತ್ರ ಜಲಪಾತಕ್ಕೆ ಟ್ರೆಕ್ಕಿಂಗ್ ಹೋಗಿರಲು ಅನುಮತಿ ದೊರೆಯಲಿದೆ.
ರೈಲ್ವೆ ಇಲಾಖೆ ಎಚ್ಚರಿಕೆ
ಬ್ರಗಾಂಜಾ ಘಾಟ್ನ ಉದ್ದಕ್ಕೂ ದೂಧ್ಸಾಗರ್ ಅಥವಾ ಇನ್ನಾವುದೇ ನಿಲ್ದಾಣದಲ್ಲಿ ಡಿ-ಬೋರ್ಡಿಂಗ್ ಅನ್ನು ನಿಷೇಧಿಸಲಾಗಿದೆ. ಎಲ್ಲಾ ಪ್ರಯಾಣಿಕರು ಸಹಕರಿಸಲು ಮತ್ತು ನಿಮ್ಮ ಸ್ವಂತ ಸುರಕ್ಷತೆಗಾಗಿ ನಿಗದಿಪಡಿಸಿದ ನಿಯಮಗಳನ್ನು ಅನುಸರಿಸಲು ವಿನಂತಿಸಲಾಗಿದೆ ಎಂದು ನೈಋತ್ಯ ರೈಲ್ವೆ ಎಚ್ಚರಿಕೆ ನೀಡಿದೆ.
ನಿಮ್ಮ ಕೋಚ್ನಲ್ಲಿಯೇ ಕುಳಿತು ದೂಧ್ ಸಾಗರ ಜಲಪಾತದ ಸೌಂದರ್ಯವನ್ನು ಸವಿಯಲು ನಾವು ನಿಮ್ಮನ್ನು ಒತ್ತಾಯಿಸುತ್ತೇವೆ. ಹಳಿಗಳ ಮೇಲೆ ನಡೆಯುವುದು ನಿಮ್ಮ ಸ್ವಂತ ಸುರಕ್ಷತೆಗೆ ಅಪಾಯವನ್ನುಂಟುಮಾಡುತ್ತದೆ. ಇದು ರೈಲ್ವೆ ಕಾಯಿದೆಯ ಸೆಕ್ಷನ್ 147, 159 ರ ಅಡಿಯಲ್ಲಿ ಅಪರಾಧವಾಗಿದೆ. ಇದು ರೈಲುಗಳ ಸುರಕ್ಷತೆಗೂ ಅಪಾಯ ತಂದೊಡ್ಡಬಹುದು” ಎಂದು ರೈಲ್ವೆ ಇಲಾಖೆ ಸೂಚನೆ ನೀಡಿದೆ.