ಮೇ 30, 31ರಂದು ದೇಶವ್ಯಾಪಿ ಬ್ಯಾಂಕ್ ಮುಷ್ಕರ: ಗ್ರಾಹಕರಿಗೆ ಸಂಕಷ್ಟ
Team Udayavani, May 29, 2018, 7:14 PM IST
ಹೊಸದಿಲ್ಲಿ : ನಾಳೆ ಬುಧವಾರ (ಮೇ 30) ಮತ್ತು ನಾಡಿದ್ದು ಗುರುವಾರ (ಮೇ 31) ನಡೆಯಲಿರುವ ಎರಡು ದಿನಗಳ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರದಿಂದಾಗಿ ಗ್ರಾಹಕರಿಗೆ ವೇತನ ಮತ್ತು ಎಟಿಎಂ ವಹಿವಾಟಿಗೆ ಅಡಚಣೆ ಉಂಟಾಗುವ ಸಾಧ್ಯತೆಗಳಿವೆ.
ಭಾರತೀಯ ಬಾಯಂಕುಗಳ ಸಂಘ (ಐಬಿಎ) ಮುಂದಿಟ್ಟಿರುವ ವೇತನ ಪರಿಷ್ಕರಣೆ ಪ್ರಸ್ತಾವ ವಿರೋಧಿಸಿ ಬ್ಯಾಂಕ್ ನೌಕರರ ಸಂಘಟನೆಗಳ ಸಂಯುಕ್ತ ವೇದಿಕೆ (ಯುಎಫ್ಬಿಯು) ಮೇ 30 ಮತ್ತು 31ರಂದು ಎರಡು ದಿನಗಳ ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ.
ಆನ್ಲೈನ್ನಲ್ಲಿ ಬ್ಯಾಂಕಿಂಗ್ ವಹಿವಾಟು ನಡೆಸುವವರಿಗೆ ಈ ಮುಷ್ಕರದಿಂದ ಯಾವುದೇ ತೊಂದರೆಯಾಗದು; ಆದರೆ ನಗದು ಪಡೆದು ವ್ಯವಹಾರ ನಡೆಸುವವರಿಗೆ ತೊಂದರೆ ಆಗಲಿದೆ. ಎರಡು ದಿನಗಳ ಕಾಲ ಗ್ರಾಹಕರು ಅತ್ಯಧಿಕ ಪ್ರಮಾಣದಲ್ಲಿ ಎಟಿಎಂ ಬಳಸುವುದರಿಂದ ಅವುಗಳು ಬೇಗನೆ ಖಾಲಿಯಾಗುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.
ಅಖೀಲ ಭಾರತ ಬ್ಯಾಂಕ್ ನೌಕರರ ಸಂಘಟನೆಯ (ಐಎನ್ಬಿಇಎಫ್) ಕರ್ನಾಟಕ ಘಟಕದ ಪ್ರಧಾನ ಕಾರ್ಯದರ್ಶಿ ಎಂ ಕೆ ನರಸಿಂಹ ಮೂರ್ತಿ ಅವರು “2017ರ ಮೇ ತಿಂಗಳಿಂದಲೂ ವೇತನ ಪರಿಷ್ಕರಣೆ ಸಂಬಂಧಿಸಿ ಐಬಿಎ ಜತೆಗೆ ನಡೆಸಲಾದ ಹಲವು ಸುತ್ತಿನ ಮಾತುಕತೆಗಳು ಫಲಪ್ರದವಾಗಿಲ್ಲ; ಹಾಗಾಗಿ ಅನಿವಾರ್ಯವಾಗಿ ಎರಡು ದಿನಗಳ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದು ತಿಳಿಸಿದರು.