Under construction tunnel ಕಾರ್ಮಿಕರ ರಕ್ಷಣೆಗೆ 2 ದಿನ ಬೇಕು;ಕೊಳವೆ ಮೂಲಕ ಆಹಾರ
ಪರಿಹಾರ ಕಾರ್ಯಾಚರಣೆ ಬಿರುಸು..
Team Udayavani, Nov 14, 2023, 5:45 AM IST
ಉತ್ತರಕಾಶಿ: ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಚಾರ್ಧಾಮ್ ಮಾರ್ಗದಲ್ಲಿ ನಿರ್ಮಾಣ ಹಂತದ ಟನಲ್ ಕುಸಿದು, ಅದರಡಿ ಸಿಲುಕಿರುವ 40 ಮಂದಿ ಕಾರ್ಮಿಕರ ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ. ಅವರನ್ನು ಹೊರಗೆ ತರಲು ಇನ್ನೂ ಎರಡು -ಮೂರು ದಿನಗಳು ಆಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರಿಗೆ ಕೊಳವೆಯ ಮೂಲಕ ಆಮ್ಲಜನಕ, ಆಹಾರ ಮತ್ತು ಇತರ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಲಾಗುತ್ತಿದೆ.
ಯಮುನೋತ್ರಿ-ಬ್ರಹ್ಮಕಾಲ್ ರಾಷ್ಟ್ರೀಯ ಹೆದ್ದಾರಿಯ ಸಿಲ್ಕ್ ಯಾರಾ ಮತ್ತು ದಂಡಲ್ಗಾಂವ್ ನಡುವೆ ನಿರ್ಮಾಣ ಹಂತದಲ್ಲಿದ್ದ ಟನಲ್ನ ಒಂದು ಭಾಗವು ರವಿ ವಾ ರ ಮುಂಜಾನೆ 4 ಗಂಟೆ ಸುಮಾರಿಗೆ ಕುಸಿದಿತ್ತು.
“ಟನಲ್ನಡಿ ಸಿಲುಕಿರುವ ಎಲ್ಲ ಕಾರ್ಮಿಕರು ಸುರಕ್ಷಿತ ರಾಗಿದ್ದಾರೆ. ರವಿ ವಾ ರ ರಾತ್ರಿಯಿಂದ ಅವರನ್ನು ನಾವು ಸಂಪರ್ಕಿಸಿ ದ್ದೇವೆ. ಈಗಾಗಲೇ 15-20 ಮೀಟರ್ನಷ್ಟು ಕಲ್ಲು-ಮಣ್ಣುಗಳನ್ನು ಹೊರಕ್ಕೆ ತೆಗೆದಿದ್ದೇವೆ. ಈ ಕಾರ್ಯ ಮುಂದುವರಿದಿದೆ’ ಎಂದು ಉತ್ತರಾಖಂಡ ವಿಪತ್ತು ನಿರ್ವಹಣಾ ದಳದ ಅಧಿಕಾರಿಗಳು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಸೋಮವಾರ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಭೇಟಿ ನೀಡಿದರು.