ಪ್ರವಾಹ ಸಂತ್ರಸ್ತರ ನಿಧಿಯಿಂದ ಕೊಹ್ಲಿಗೆ 47 ಲಕ್ಷ ಪಾವತಿ?ಏನಿದು ವಿವಾದ
Team Udayavani, Feb 25, 2017, 4:14 PM IST
ನವದೆಹಲಿ:ಬಹು ನಿರೀಕ್ಷಿತ ಚುನಾವಣಾ ಫಲಿತಾಂಶ ಹೊರಬೀಳುವ ಮುನ್ನ ಹರೀಶ್ ರಾವತ್ ನೇತೃತ್ವದ ಉತ್ತರಾಖಂಡ್ ಸರ್ಕಾರ ಭಾರೀ ವಿವಾದಕ್ಕೆ ಸಿಲುಕುವಂತಾಗಿದೆ. ಅದಕ್ಕೆ ಕಾರಣ, ಪ್ರವಾಹ ಸಂತ್ರಸ್ತರ ನಿಧಿಯಿಂದ ಟೀಂ ಇಂಡಿಯಾದ ಕ್ಯಾಪ್ಟನ್ ವಿರಾಟ್ ಕೊಹ್ಲಿಗೆ 47.19 ಲಕ್ಷ ರೂಪಾಯಿ ಹಣವನ್ನು ಪಾವತಿಸಿರುವುದು!
ಆರ್ ಟಿಐ ಕಾರ್ಯಕರ್ತರೊಬ್ಬರ ಆರೋಪದ ಪ್ರಕಾರ, 2013ರ ಕೇದಾರನಾಥ ಪ್ರವಾಹ ಸಂತ್ರಸ್ತರ ನಿಧಿಯಿಂದ 47 ಲಕ್ಷ ರೂಪಾಯಿಯಷ್ಟು ಹಣವನ್ನು ಕೊಹ್ಲಿಗೆ 2015ರ ಜೂನ್ ನಲ್ಲಿ ಉತ್ತರಾಖಂಡ್ ಸರ್ಕಾರ ಪಾವತಿಸಿದೆಯಂತೆ.
ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಕ್ರಿಕೆಟಿಗ ಕೊಹ್ಲಿಯನ್ನು ಉತ್ತರಾಖಂಡ್ ಪ್ರವಾಸೋದ್ಯಮದ ರಾಯಭಾರಿಯಾಗಿ ಘೋಷಿಸಿದ ಬಳಿಕ ಉತ್ತರಾಖಂಡ್ ಪ್ರವಾಸೋದ್ಯಮ ಇಲಾಖೆಗಾಗಿ 60ಸೆಕೆಂಡ್ ಗಳ ವಿಡಿಯೋವೊಂದರಲ್ಲಿ ನಟಿಸಿದ್ದರು. ಆದರೆ ಕೊಹ್ಲಿಗೆ 2013ರ ಪ್ರವಾಹ ಸಂತ್ರಸ್ತರ ಪರಿಹಾರ ನಿಧಿಯಿಂದ ಲಕ್ಷಾಂತರ ರೂಪಾಯಿ ಹಣ ಪಾವತಿಸಲಾಗಿದೆ ಎಂದು ತಿಳಿಸಿದೆ.
ಇದು ಸುಳ್ಳು ಮಾಹಿತಿ:ಕಾಂಗ್ರೆಸ್
ಪ್ರವಾಹ ಸಂತ್ರಸ್ತರ ಪರಿಹಾರ ನಿಧಿಯಿಂದ ಕೊಹ್ಲಿಗೆ ಹಣ ಪಾವತಿಸಲಾಗಿದೆ ಎಂಬ ಆರೋಪ ಆಧಾರ ರಹಿತವಾದದ್ದು ಎಂದು ಉತ್ತರಾಖಂಡ್ ಸಿಎಂ ಮಾಧ್ಯಮ ಸಲಹೆಗಾರ ಸುರೇಂದ್ರ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಇದರಲ್ಲಿ ಯಾವುದೇ ಮುಚ್ಚು ಮರೆ ಇಲ್ಲ, ಎಲ್ಲವನ್ನೂ ಕಾನೂನಾತ್ಮಕವಾಗಿಯೇ ಮಾಡಲಾಗಿದೆ. ಕೇದಾರನಾಥವನ್ನು ಯಾವ ರೀತಿ ಮರು ಅಭಿವೃದ್ಧಿ ಮಾಡಲಾಗಿದೆ ಎಂಬುದು ಜನರಿಗೆ ತಿಳಿದಿದೆ. ಆದರೆ ಈ ಚುನಾವಣೆಯಲ್ಲಿ ಸೋಲುವುದು ಖಚಿತ ಎಂದು ಬಿಜೆಪಿಗೆ ಮನವರಿಕೆಯಾಗಿದೆ, ಹಾಗಾಗಿ ಒತ್ತಡದಿಂದ ತಪ್ಪಿಸಿಕೊಂಡು ಜನರ ಗಮನವನ್ನು ಬೇರೆಡೆ ಸೆಳೆಯಲು ಇಂತಹ ಗಿಮಿಕ್ ಮಾಡುತ್ತಿದೆ ಎಂದು ಕುಮಾರ್ ತಿರುಗೇಟು ನೀಡಿದ್ದಾರೆ.