ಸಮಾನ ನಾಗರಿಕ ಸಂಹಿತೆ ಜಾರಿಗೆ ಉ.ಖಂಡ ನಿರ್ಧಾರ
Team Udayavani, Mar 25, 2022, 6:50 AM IST
ಹೊಸದಿಲ್ಲಿ: ಈಗಾಗಲೇ ತೀವ್ರ ಚರ್ಚೆಗೆ ಗ್ರಾಸವಾಗಿರುವ ಸಮಾನ ನಾಗರಿಕ ಸಂಹಿತೆಯನ್ನು (ಯುಸಿಸಿ) ಇಡೀ ದೇಶದಲ್ಲೇ ಮೊದಲು ಉತ್ತರಾಖಂಡದಲ್ಲಿ ಜಾರಿಗೊಳಿಸಲು ಅಲ್ಲಿನ ರಾಜ್ಯ ಸರಕಾರ ಕಾರ್ಯೋನ್ಮುಖವಾಗಿದೆ.
ಗುರುವಾರದಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಯುಸಿಸಿ ಜಾರಿಗಾಗಿ ತಜ್ಞರ ಸಮಿತಿಯನ್ನು ನೇಮಿಸುವ ಪ್ರಸ್ತಾವನೆಗೆ ಒಪ್ಪಿಗೆ ನೀಡಿದೆ.
ಸಂಪುಟ ಸಭೆಯ ಅನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಧಾಮಿ, “”ನಾವು ಯುಸಿಸಿಯನ್ನು ನಮ್ಮ ರಾಜ್ಯದಲ್ಲಿ ಜಾರಿಗೊಳಿಸಲು ನಿರ್ಧರಿಸಿದ್ದೇವೆ. ಇದರ ಜಾರಿ ಕುರಿತಂತೆ ತಜ್ಞರ ಸಮಿತಿಯನ್ನು ನೇಮಿಸುವ ಪ್ರಸ್ತಾವನೆಗೆ ರಾಜ್ಯ ಸಂಪುಟ ಸರ್ವಾನುಮತದ ಒಪ್ಪಿಗೆ ನೀಡಿದೆ. ಯುಸಿಸಿ ಜಾರಿ ನಿಟ್ಟಿನಲ್ಲಿ ಮೊದಲ ಹೆಜ್ಜೆಯಿಟ್ಟಿರುವ ರಾಜ್ಯವಾಗಿ ಉತ್ತರಾಖಂಡ ಭಾಜನವಾಗಿದೆ” ಎಂದು ತಿಳಿಸಿದರು.
ಬಿಜೆಪಿಯ ಯುಸಿಸಿ ಪರಿಕಲ್ಪನೆಗೆ ದಶಕಗಳ ಇತಿಹಾಸವಿದೆ. ಸಮಾನ ನಾಗರಿಕ ಸಂಹಿತೆಗೆ ಬಿಜೆಪಿ ಬಲವಾಗಿ ಪ್ರತಿಪಾದಿಸಿದೆ. ಈ ಹಿಂದೆ ಸಂಸತ್ತಿನಲ್ಲಿ ಕೆಲವು ಬಿಜೆಪಿ ಸಂಸದರು ಖಾಸಗಿ ಮಸೂದೆಯ ಮೂಲಕ ಸಮಾನ ನಾಗರಿಕ ಸಂಹಿತೆಯ ಜಾರಿಗಾಗಿ ಒತ್ತಾಯಿಸಿದ್ದರು.