ಆರ್ಬಿಐ ಸ್ವಾಯತ್ತೆ ಎತ್ತಿ ಹಿಡಿಯಲು ಶ್ರಮಿಸುವೆ : ಶಕ್ತಿಕಾಂತ್ ದಾಸ್
Team Udayavani, Dec 12, 2018, 4:50 PM IST
ಹೊಸದಿಲ್ಲಿ : ಇಂದು ಬುಧವಾರ ಭಾರತೀಯ ರಿಸರ್ವ್ ಬ್ಯಾಂಕಿನ ನೂತನ ಗವರ್ನರ್ ಆಗಿ ಅಧಿಕಾರ ವಹಿಸಿಕೊಂಡಿರುವ ಶಕ್ತಿಕಾಂತ ದಾಸ್ ಅವರು, ‘ಆರ್ಬಿಐ ನ ಸ್ವಾಯತ್ತೆ, ಪಾರದರ್ಶಕತೆ, ಪ್ರಧಾನ ಮೌಲ್ಯಗಳು ಮತ್ತು ವೃತ್ತಿಪರತೆಯನ್ನು ಎತ್ತಿ ಹಿಡಿಯಲು ತಾನು ಶಕ್ತಿ ಮೀರಿ ಪ್ರಯತ್ನಿಸುವುದಾಗಿ’ ಹೇಳಿದರು.
“ಆರ್ಬಿಐ ಗವರ್ನರ್ ಆಗಿ ದುಡಿಯುವ ಅವಕಾಶ ನನಗೆ ಸಿಕ್ಕಿರುವುದನ್ನು ನಾನು ಬಲು ದೊಡ್ಡ ಗೌರವವೆಂದು ತಿಳಿಯುತ್ತೇನೆ. ಎಲ್ಲರೊಂದಿಗೂ ಕೊಡಿಕೊಂಡು ಕೆಲಸ ಮಾಡಲು ಮತ್ತು ದೇಶದ ಆರ್ಥಿಕ ಹಿತಾಸಕ್ತಿಗೆ ಅನುಗುಣವಾಗಿ ದುಡಿಯಲು ನಾನು ನನ್ನ ಶಕ್ತಿ ಮೀರಿ ಯತ್ನಿಸುತ್ತೇನೆ” ಎಂದು ಶಕ್ತಿಕಾಂತ್ ಅವರು ಅಧಿಕಾರ ಸ್ವೀಕರಿಸಿದ ಬಳಿಕ ನಡೆಸಿದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ದಾಸ್ ಅವರು 15ನೇ ಹಣಕಾಸು ಆಯೋಗದ ಹಾಲಿ ಸದಸ್ಯರು ಮತ್ತು ಆರ್ಥಿಕ ವ್ಯವಹಾರಗಳ ಸಮಿತಿಯ ಮಾಜಿ ಕಾರ್ಯದರ್ಶಿ ಆಗಿದ್ದಾರೆ. ಊರ್ಜಿತ್ ಪಟೇಲ್ ಅವರ ಉತ್ತರಾಧಿಕಾರಿಯಾಗಿ ಆರ್ಬಿಐ ಗವರ್ನರ್ ಹುದ್ದೆಗೆ ಸರಕಾರದಿಂದ ನಿನ್ನೆ ಮಂಗಳವಾರವಷ್ಟೇ ನೇಮಕಗೊಂಡಿದ್ದಾರೆ.