ಹಲವೆಡೆ ಕೋವಿಡ್ ದೇವಿಗೆ ಪೂಜೆ ; ಭೀತಿ ನಿವಾರಿಸಲು ಮಹಿಳೆಯರಿಂದ ಅರ್ಚನೆ, ಅರಿಕೆ
Team Udayavani, Jun 10, 2020, 12:07 AM IST
ಗುವಾಹಟಿ: ದೇವರಿಗೆ ಕೋಪ ಬಂದರೆ ಸಾಂಕ್ರಾಮಿಕ ರೋಗ ಬರುತ್ತದೆ ಎನ್ನುವುದು ದೇಶದ ಗ್ರಾಮೀಣ ಭಾಗಗಳಲ್ಲಿ ಇರುವ ನಂಬಿಕೆ.
ಹಿಂದಿನ ಸಂದರ್ಭಗಳಲ್ಲಿ ಕಾಡಿದ್ದ ಪ್ಲೇಗ್, ಸಿಡುಬು ರೋಗ ಕೂಡ ದೇವರ ಕೋಪದಿಂದಲೇ ಉಂಟಾಗಿತ್ತು ಎನ್ನುವುದು ಹಲವರ ನಂಬಿಕೆ ಮತ್ತು ವಾದ.
ಅದಕ್ಕಾಗಿ ಆಯಾ ರೋಗಗಳನ್ನು ಪರಿಹರಿಸಲೋಸುಗ ದೇವಿಯರ ಆರಾಧನೆಗಾಗಿ ದೇವಸ್ಥಾನವನ್ನೂ ಕಟ್ಟಿಸಲಾಗಿದೆ.
ಇದೀಗ ಜಗತ್ತಿಗೇ ಸವಾಲಾಗಿರುವ ಕೋವಿಡ್ ಸರದಿ. ಈಶಾನ್ಯ ರಾಜ್ಯ ಅಸ್ಸಾಂನ ಕೆಲ ಭಾಗಗಳು, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಲಗಳಲ್ಲಿ ಸೋಂಕು ನಿಯಂತ್ರಣಕ್ಕೆ ಬರುವ ನಿಟ್ಟಿನಲ್ಲಿ ಮಹಿಳೆಯರು ನದಿ ತಟಕ್ಕೆ ತೆರಳಿ ಪ್ರಾರ್ಥನೆಯನ್ನೂ ಸಲ್ಲಿಸಿದ್ದಾರೆ.
ಅಸ್ಸಾಂನ ಉತ್ತರ ಭಾಗದಲ್ಲಿರುವ ಬಿಸ್ವನಾಥ ಜಿಲ್ಲೆಯ ಹಲವು ಭಾಗಗಳಲ್ಲಿ ಮಹಿಳೆಯರು ನದಿ ತೀರಕ್ಕೆ ತೆರಳಿ ಶೀಘ್ರವೇ ಜಗತ್ತಿಗೆ ಬಂದಿರುವ ಕೋವಿಡ್ ಸಂಕಷ್ಟ ದೂರವಾಗಲಿ ಎಂದು ಪ್ರಾರ್ಥಿಸಿದ್ದಾರೆ.
‘ಕೋವಿಡ್ ಮಾತೆಗೆ ಶಾಂತಳಾಗುವಂತೆ ಪೂಜೆ ಸಲ್ಲಿಸಿದ್ದೇವೆ. ಪೂಜೆ ಮುಗಿದ ಕೂಡಲೇ ಬಲವಾಗಿ ಗಾಳಿ ಬೀಸುತ್ತದೆ. ಅದರ ಜತೆಗೆ ವೈರಸ್ ಕೂಡ ಹೊರಟು ಹೋಗುತ್ತದೆ’ ಎಂದು ಪೂಜೆ ಸಲ್ಲಿಸಿದ ಕೆಲ ಮಹಿಳೆಯರು ಮಾಧ್ಯಮದವರಿಗೆ ತಿಳಿಸಿದ್ದಾರೆ.
ಅವರು ಹೇಳುವ ಪ್ರಕಾರ ‘ಸೀತಾಳ’ದಿಂದ ಕೋವಿಡ್ ಸೃಷ್ಟಿಯಾಗಿದೆ ಎಂದು ಪ್ರತಿಪಾದಿಸುತ್ತಾರೆ. ಟ್ವಿಟರ್ ನಲ್ಲಿಯೂ ಕೂಡ ಬಿಹಾರ, ಪಶ್ಚಿಮ ಬಂಗಾಳ, ಜಾರ್ಖಂಡ್ನ ಹಲವು ಪ್ರದೇಶಗಳಲ್ಲಿ ಕೋವಿಡ್ ಸೋಂಕು ಜಗತ್ತಿನಿಂದ ತೊಲಗಲಿ ಎಂದು ಪೂಜೆ ಸಲ್ಲಿಸಿರುವ ಬಗ್ಗೆ ಹಲವರು ಫೋಟೋ, ವಿಡಿಯೋ ಟ್ವೀಟ್ ಮಾಡಿದ್ದಾರೆ. ಜತೆಗೆ ಇದೊಂದು ಮೂಢನಂಬಿಕೆ ಎಂದೂ ಬರೆದುಕೊಂಡಿದ್ದಾರೆ.