ಯಾರಿಗೆ ಮತ ಹಾಕುವೆನೆಂದು ಹೇಳುವುದಿಲ್ಲ : ಶಂಕರ್ ಸಿಂಗ್ ವಘೇಲಾ
Team Udayavani, Aug 7, 2017, 7:23 PM IST
ಅಹ್ಮದಾಬಾದ್ : “ಗುಜರಾತ್ನಲ್ಲಿ ನಾಳೆ ನಡೆಯಲಿರುವ ರಾಜ್ಯಸಭಾ ಚುನಾವಣೆಯಲ್ಲಿ ನಾನು ಯಾರಿಗೆ ಮತ ಹಾಕುತ್ತೇನೆ ಎಂಬುದನ್ನು ಯಾರಿಗೂ ಹೇಳುವುದಿಲ್ಲ’ ಎಂದು ಮಾಜಿ ಹಿರಿಯ ಕಾಂಗ್ರೆಸ್ ನಾಯಕ ಶಂಕರಸಿಂಗ್ ವಘೇಲಾ ಹೇಳಿದ್ದಾರೆ.
“ನಾನು ಕಾಂಗ್ರೆಸ್ ನಾಯಕತ್ವದ ಸಂಪರ್ಕದಲ್ಲಿದ್ದೇನೆ ಎನ್ನುವ ವರದಿಗಳು ಸುಳ್ಳು; ಹಾಗೆಯೇ ನಾನು ಬಿಜೆಪಿ ಸದಸ್ಯರ ಸಂಪರ್ಕದಲ್ಲೂ ಇಲ್ಲ’ ಎಂದು ವಘೇಲಾ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ಪ್ರತಿಯೋರ್ವ ಮತದಾರನು ತನ್ನ ಮತದ ಮಾಲಕನಾಗಿರುತ್ತಾನೆ. ರಾಜ್ಯಸಭಾ ಚುನಾವಣೆಗೆ ಮತ ಹಾಕುವ ಶಾಸಕನ ಮತವು ಆತನ ಖಾಸಗಿ ಸೊತ್ತಾಗಿರುತ್ತದೆ. ಆದುದರಿಂದ ನಾನು ಯಾರಿಗೆ ಓಟು ಹಾಕುತ್ತೇನೆ ಎಂದು ಬಹಿರಂಗಪಡಿಸುವುದಿಲ್ಲ ಎಂದು ವಘೇಲಾ ಹೇಳಿದರು.
“ನಾನು ಮತ್ತು ಅಹ್ಮದ್ ಪಟೇಲ್ 1977ರಿಂದಲೂ ಸ್ನೇಹಿತರು. ಆ ವರ್ಷ ಅವರು ಜನತಾಪಕ್ಷದ ಟಿಕೆಟ್ನಿಂದ ಮೊದಲ ಬಾರಿಗೆ ಲೋಕಸಭೆಗೆ ಚುನಾಯಿತರಾದರು. ಅಂದಿನಿಂದ ಸ್ನೇಹಿತರಾಗಿರುವ ನಾವು ಇಂದಿಗೂ ಸ್ನೇಹಿತರೇ ಆಗಿದ್ದೇವೆ. ಇವತ್ತು ಕೂಡ ನಾವು ಪರಸ್ಪರ ಫೋನಿನಲ್ಲಿ ಮಾತನಾಡಿಕೊಂಡಿದ್ದೇವೆ. ನಮ್ಮ ಸ್ನೇಹ ಕೇವಲ ರಾಜಕಾರಣಕ್ಕೆ ಸೀಮಿತವಾದುದಲ್ಲ’ ಎಂದು ವಘೇಲಾ ಹೇಳಿದರು.