ಚಿಣ್ಣರ ಬಿಂಬ:26ನೇ ನೂತನ ಕಲ್ವಾದ ನ್ಯೂಇಂಗ್ಲಿಷ್ ಶಾಲೆ ಶಿಬಿರ
Team Udayavani, Jul 18, 2018, 4:33 PM IST
ಮುಂಬಯಿ: ಚಿಣ್ಣರ ಬಿಂಬದ ಪ್ರತಿಭೆಗಳನ್ನು ಕಂಡಾಗ ಆಶ್ಚರ್ಯವಾಗುತ್ತಿದೆ. ಆದರ್ಶತೆ ಯನ್ನು ಮೈಗೂಡಿಸಿ ಕೊಳ್ಳುವಂತಹ ಎಲ್ಲಾ ಗುಣಗಳು ಚಿಣ್ಣರ ಬಿಂಬದಲ್ಲಿ ದೊರೆಯುತ್ತವೆೆ. ಚಿಣ್ಣರ ಪ್ರತಿಭೆಯು ನಮ್ಮ ಶಾಲಾ ಮಕ್ಕಳಲ್ಲೂ ಬೆಳೆದು ಬರುವಂತಾಗಬೇಕು. ಕನ್ನಡಿಗರ ಸಾಧನೆಗೆ ಇದೊಂದು ನೂತನ ಮೈಲುಗಲ್ಲಾಗಿದೆ ಎಂದು ಕಲ್ವಾ ಜ್ಞಾನ ವಿಕಾಸ್ ಮಂಡಳದ ಅಧ್ಯಕ್ಷ ಭೂಮ ರೆಡ್ಡಿ ನುಡಿದರು.
ಜು. 15ರಂದು ಐರೋಲಿಯ ಸೆಕ್ಟರ್-19ರಲ್ಲಿರುವ ಜ್ಞಾನ ವಿಕಾಸ ಮಂಡಳದ ಆಡಳಿತದಲ್ಲಿರುವ ಮೆಹ್ತಾ ಡಿಗ್ರಿ ಕಾಲೇಜ್ ಆಫ್ ಆರ್ಟ್ಸ್ ಮತ್ತು ಕಾಮರ್ಸ್ನ ಶಿಕ್ಷಣ ಸಂಕುಲದಲ್ಲಿ ನಡೆದ ಚಿಣ್ಣರ ಬಿಂಬ ಮುಂಬಯಿ ಇದರ 26 ನೇ ಕಲ್ವಾ ನ್ಯೂ ಇಂಗ್ಲಿಷ್ ಸ್ಕೂಲ್ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ನೂತನ ಶಿಬಿರದಲ್ಲಿ ಕನ್ನಡಿಗರ ಮಕ್ಕಳಲ್ಲದೆ, ಕನ್ನಡೇತರ ಮಕ್ಕಳು ಪಾಲ್ಗೊಂಡು ಚಿಣ್ಣರ ಬಿಂಬದ ಖ್ಯಾತಿ ಲೋಕ ವಿಖ್ಯಾತಗೊಳ್ಳಲಿ ಎಂದು ನುಡಿದು, ಮಕ್ಕಳಿಗೆ ಶುಭಹಾರೈಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ಇವರು ಮಾತನಾಡಿ, ಮುಂಬಯಿ ಮಕ್ಕಳಿಗೆ ಸಂಸ್ಕೃತಿಯನ್ನು ಯಾರು ಕಲಿಸುವುದು ಎಂಬ ಚಿಂತೆಯಲ್ಲಿದ್ದಾಗ ಚಿಣ್ಣರ ಬಿಂಬ ಸಂಪನ್ಮೂಲ ವ್ಯಕ್ತಿಗಳಿಂದ ಕನ್ನಡ ಭಾಷೆ, ಸಂಸ್ಕೃತಿ, ಸಂಸ್ಕಾರವನ್ನು ನೀಡುವ ತಾಣವಾಗಿ ಪರಿಣಮಿಸಿದೆ. ಚಿಣ್ಣರ ಬಿಂಬ ಇನ್ನಷ್ಟು ಬೆಳೆಯಲು ಈ ಶಾಲೆ ಸೂಕ್ತವಾಗಿದೆ. ನಾವು ಎಷ್ಟು ಭಾಷೆಯನ್ನು ಕಲಿತರೂ ಕೂಡ ಅದು ಬದುಕಿನುದ್ದಕ್ಕೂ ನಮಗೆ ಸಹಕಾರಿಯಾಗಬಲ್ಲದು ಎಂದು ನುಡಿದರು.
ಮುಂಬಯಿ ವಿವಿ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ. ಎನ್. ಉಪಾಧ್ಯ ಇವರು ಮಾತನಾಡಿ, ಕರ್ನಾಟಕ ರಾಜಧಾನಿ ಬೆಂಗಳೂರು ಬಿಟ್ಟರೆ ಅತೀ ಹೆಚ್ಚು ತುಳು-ಕನ್ನಡಿಗರು ಇರುವುದು ಮುಂಬಯಿ ನಗರದಲ್ಲಿ. ಈ ನಗರದಲ್ಲಿ ಕನ್ನಡ ಕಟ್ಟುವ ಕೆಲಸವನ್ನು ಚಿಣ್ಣರ ಬಿಂಬ ಮಾಡುತ್ತಿದೆ. ದೇಶದ ಯಾವುದೇ ಮೂಲೆಯಲ್ಲೂ ಚಿಣ್ಣರ ಬಿಂಬದಂತಹ ಸಂಸ್ಥೆ ಕಾಣಸಿಗದು. ಮುಂದಿನ ತಲೆಮಾರಿಗೆ ಚಿಣ್ಣರ ಬಿಂಬದ ಸಾಧನೆಯ ಬೆಳಕಾಗಲಿದೆ. ಈ ಸಂಸ್ಥೆಯ ಕುಲಪತಿಯಾಗಿ ಪ್ರಕಾಶ್ ಭಂಡಾರಿ ಇವರು ಬೆಳೆದಿದ್ದಾರೆ. ಸೆ. 1 ರಂದು ಮುಂಬಯಿ ವಿಶ್ವವಿದ್ಯಾಲಯದಲ್ಲಿ ಚಿಣ್ಣರ ಬಿಂಬದ ಕಾರ್ಯಕ್ರಮ ನಡೆಯಲಿದ್ದು, ಅದಕ್ಕೆ ನಾವೆಲ್ಲರೂ ಸಾಕ್ಷಿಯಾಗಬೇಕು ಎಂದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಜ್ಞಾನ ವಿಕಾಸ ಮಂಡಳಿಯ ಅಧ್ಯಕ್ಷ ಎಂ. ಎಸ್. ಭೂಮ ರೆಡ್ಡಿ ದೀಪಪ್ರಜ್ವಲಿಸಿ ಸಮಾರಂಭಕ್ಕೆ ಚಾಲನೆ ನೀಡಿದರು. ಜ್ಞಾನ ವಿಕಾಸ ಮಂಡಳಿಯ ಉಪಾಧ್ಯಕ್ಷ ವಿ. ಎನ್. ಹೆಗ್ಡೆ ಅವರು ಮಾತನಾಡಿ, ಕತ್ತಲೆಯಿಂದ ಬೆಳಕಿನೆಡೆಗೆ ಮಕ್ಕಳನ್ನು ಕೊಂಡೊಯ್ಯುತ್ತಿರುವ ಚಿಣ್ಣರ ಬಿಂಬದ ಶಾಖೆ ನಮ್ಮ ಶಾಲೆಯಲ್ಲಿ ಪ್ರಾರಂಭಿಸುತ್ತಿರುವುದು ನಮಗೆ ಹೆಮ್ಮೆ ತಂದಿದೆ. ಕನ್ನಡೇತರ ಮಕ್ಕಳು ಕನ್ನಡ ಕಲಿಕೆಗೆ ಇದು ಉತ್ತಮ ಅವಕಾಶವಾಗಿದೆ ಎಂದು ಹೇಳಿದರು.
ಸಂಸ್ಥೆಯ ಗೌರವ ಪ್ರಧಾನ ಕಾರ್ಯದರ್ಶಿ ವಸಂತ್ ಹೊನ್ನೂರು ಇವರು ಮಾತನಾಡಿ, ಚಿಣ್ಣರ ಬಿಂಬ ಭಾಷೆ, ಸಂಸ್ಕೃತಿಯನ್ನು ಉಳಿಸುತ್ತದೆ ಎನ್ನುವುದನ್ನು ಅರಿತಿರುವ ನಮ್ಮ ಶಾಲಾಡಳಿತ ಮಂಡಳಿ ಕಲ್ವಾದ ಶಾಲೆಯಲ್ಲಿ ಶಿಬಿರ ಆರಂಭಿಸಲು ಮುಂದಾಗಿದೆ. ಎಲ್ಲಾ ವಿದ್ಯಾರ್ಥಿಗಳಿಗೆ ಸಂಸ್ಕೃತಿ ಮತ್ತು ಸಂಸ್ಕಾರಕ್ಕೆ ಈ ಶಿಬಿರ ಪೂರಕವಾಗಿರಲಿ. ಈ ಕಾಲೇಜಿನಲ್ಲಿ ಶೇ. 50 ರಷ್ಟು ಕನ್ನಡಿಗರಿಗೆ ಮೀಸಲಾತಿಯಿದೆ ಎಂದರು.
ಸಂಸ್ಥೆಯ ಕೋಶಾಧಿಕಾರಿ ಬಿ. ಎನ್. ಹರಗಬಲ್ ಇವರು ಮಾತನಾಡಿ, ಮಕ್ಕಳಿಗೆ ಸಂಸ್ಕೃತಿ -ಸಂಸ್ಕಾರ ಕಲಿಸುವ ಚಿಣ್ಣರ ಬಿಂಬದ ಕಾರ್ಯ ಅಭಿನಂದನೀಯವಾಗಿದೆ ಎಂದರು. ಚಿಣ್ಣರ ಬಿಂಬದ ಮುಖ್ಯಸ್ಥರುಗಳಾದ ತಾಳಿಪಾಡಿಗುತ್ತು ಭಾಸ್ಕರ ಶೆಟ್ಟಿ, ಕಯ್ನಾರು ರಮೇಶ್ ರೈ, ವಿಜಯ ಕೋಟ್ಯಾನ್, ಉಷಾ ಬಿ. ಶೆಟ್ಟಿ, ನೀತಾ ರಮೇಶ್ ಶೆಟ್ಟಿ, ಜಯಪ್ರಕಾಶ್ ಶೆಟ್ಟಿ ಉಪಸ್ಥಿತರಿದ್ದರು.
ಚಿಣ್ಣರ ಬಿಂಬದ ಟ್ರಸ್ಟಿ ಸುರೇಂದ್ರ ಕುಮಾರ್ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿ, 16 ವರ್ಷಗಳ ಹಿಂದೆ ಪ್ರಾರಂಭಗೊಂಡ ಚಿಣ್ಣರ ಬಿಂಬ ಪ್ರಸ್ತುತ ಕಲ್ವಾದ ಕನ್ನಡಿಗರ ಶಾಲೆಯಲ್ಲಿ ಶಿಬಿರವನ್ನು ಆರಂಭಿಸಿದೆ. ಇದು ಚಿಣ್ಣರ ಬಿಂಬಕ್ಕೆ ಸಿಕ್ಕ ಹಿರಿಮೆಯಾಗಿದೆ ಎಂದರು. ಕರ್ನೂರು ಮೋಹನ್ ರೈ ಮತ್ತು ವಿಕ್ರಂ ಪಾಟ್ಕರ್, ಪವಿತ್ರಾ ದೇವಾಡಿಗ ಇವರು ಕಾರ್ಯಕ್ರಮ ನಿರ್ವಹಿಸಿದರು. ಅತಿಥಿಗಳನ್ನು ಶಿಶಿಕಾ ಶೆಟ್ಟಿ, ಭೂಮಿಕಾ ಅಂಚನ್, ಮಿಂಥನ್ ಶೆಟ್ಟಿ, ಋಷಿ ಶೆಟ್ಟಿ ಅವರು ಪರಿಚಯಿಸಿದರು. ನೀತಾ ಆರ್. ಶೆಟ್ಟಿ ವಂದಿಸಿದರು.
ಮಕ್ಕಳಲ್ಲಿರುವ ಪ್ರತಿಭೆ ಅನಾವರಣಗೊಳ್ಳಲು ಮಾತೆಯರು ಮಹತ್ತರವಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಚಿಣ್ಣರಲ್ಲಿರುವ ಅಭೂತಪೂರ್ವ ಪ್ರತಿಭೆ ಹೊರ ಬರಲು ಸಾಧ್ಯವಾಗುತ್ತದೆ. ಚಿಣ್ಣರ ಬಿಂಬವು ಇಷ್ಟೊಂದು ಎತ್ತರಕ್ಕೆ ಬೆಳೆಯಲು ಪಾಲಕರ ಪ್ರೋತ್ಸಾಹ ಕಾರಣವಾಗಿದೆ. 26 ನೇ ಶಿಬಿರ ಕಲ್ವಾದ ಕನ್ನಡಿಗರ ಶಾಲೆಯಲ್ಲಿ ಪ್ರಾರಂಭಿಸಲು ಅವಕಾಶ ದೊರೆತಿರುವುದರಿಂದ ಶಾಲೆಯಲ್ಲಿರುವ ಕನ್ನಡೇತರ ಮಕ್ಕಳಿಗೆ ನಾಡು-ನುಡಿ, ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವಂತಾಗಲು ಸಹಕಾರಿಯಾಗಿದೆ. ಚಿಣ್ಣರ ಬಿಂಬ ಶಿಸ್ತಿನ ಸಂಸ್ಥೆಯಾಗಿದೆ. ಈ ಹೊಸ ಶಿಬಿರದಲ್ಲಿ ಶನಿವಾರ ಮತ್ತು ರವಿವಾರ ಮಕ್ಕಳಿಗೆ ಕನ್ನಡದ ಪಾಠ ಕಲಿಕೆ ಪ್ರಾರಂಭಗೊಳ್ಳಲಿದೆ. ಸಾವಿರಾರು ಮಕ್ಕಳು ಚಿಣ್ಣರ ಬಿಂಬದ ಮಾರ್ಗದರ್ಶನದಿಂದ ಸುಸಂಸ್ಕೃತ ಪ್ರಜೆಗಳಾಗಿ ಉನ್ನತ ಉದ್ಯೋಗದಲ್ಲಿದ್ದು, ಆದರ್ಶ ಬದುಕು ಕಟ್ಟಿಕೊಂಡಿದ್ದಾರೆ
– ಪ್ರಕಾಶ್ ಭಂಡಾರಿ (ಚಿಣ್ಣರ ಬಿಂಬದ ರೂವಾರಿ).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ
Karnataka ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು
Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು
Bidar; ಹಣ ಹಂಚುವ ದೂರು: ನಾಗಮಾರಪಳ್ಳಿ ಮನೆಯಲ್ಲಿ ಪರಿಶೀಲನೆ
Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ