ಚಿಣ್ಣರ ಬಿಂಬ :ಪ್ರತಿಭಾ ಸ್ಪರ್ಧೆ ಬಹುಮಾನ ವಿತರಣೆ
Team Udayavani, Nov 9, 2017, 3:16 PM IST
ಮುಂಬಯಿ: ಚಿಣ್ಣರ ಬಿಂಬ 15 ವರ್ಷವನ್ನು ಕ್ರಮಿಸಿ ಮುಂದಡಿಯಿಡುತ್ತಿದೆ. ಅದರ ಹಿಂದಿನ ಶ್ರಮಕ್ಕೆ ನಾನು ವಂದಿಸುವೆ. ಇಲ್ಲಿ ಮಕ್ಕಳಿಗೆ ವಿಶೇಷವಾದ ತರಬೇತಿ ದೊರೆಯು ತ್ತಿದೆ. ನಾವು ಸಣ್ಣವರಿರುವಾಗ ಮನೆಯಲ್ಲಿ ಭಜನೆ ಕಡ್ಡಾಯವಾಗಿತ್ತು. ಆಗ ಈಗಿನ ಮಕ್ಕಳು ಅದೆಲ್ಲವನ್ನು ಮರೆಯುತ್ತಿದ್ದಾರೆ. ಮರೆಯುವ ಸಂಸ್ಕೃತಿಯನ್ನು ಮರೆಯದಂತೆ ಚಿಣ್ಣರ ಬಿಂಬದಲ್ಲಿ ಮಕ್ಕಳಿಗೆ ಭಜನೆಯನ್ನು ಕಲಿಸು ತ್ತಿರುವುದು ನನಗೆ ತುಂಬಾ ಇಷ್ಟವಾಯಿತು ಎಂದು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಮುಂಬಯಿ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಅವರು ನುಡಿದರು.
ನ. 5ರಂದು ಪೇಜಾವರ ಮಠ ಸಾಂತಾಕ್ರೂಜ್ ಇಲ್ಲಿ ನಡೆದ ಕಾಂದಿವಲಿ, ಮಲಾಡ್ ಹಾಗೂ ಪೇಜಾವರ ಶಿಬಿರದ ವಲಯ ಮಟ್ಟದ ಚಿಣ್ಣರ ಪ್ರತಿಭಾ ಸ್ಪರ್ಧೆಯ ಬಹುಮಾನ ವಿತರಣ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂತಹ ತರಬೇತಿಗಳು ಮಕ್ಕಳ ಮುಂದಿನ ಜೀವನಕ್ಕೆ ಉತ್ತಮ ತಳಹದಿಯನ್ನು ನೀಡುತ್ತದೆ
ಅತಿಥಿಯಾಗಿ ಪಾಲ್ಗೊಂಡ ಪ್ರಭಾ ನ್ಯಾಚುರಲ್ ರಿಸೋರ್ಸ್ ಪ್ರೈವೇಟ್ ಲಿಮಿಟೆಡ್ನ ಅಂತಿಮ್ ಮಹೇಶ್ವರಿ ಅವರು ಮಾತನಾಡಿ, ನಮ್ಮ ಮಾತೃಭಾಷೆಯನ್ನು ನಾವು ಯಾವತ್ತೂ ಮರೆಯಬಾರದು. ಕಲಿಯಲು ಯಾವ ಭಾಷೆಯಾದರೂ ನಮ್ಮ ತಾಯಿ ಭಾಷೆಯ ಮೇಲೆ ವ್ಯಾಮೋಹವನ್ನು ಬಿಡಬಾರದು. ಚಿಣ್ಣರ ಬಿಂಬ ಒಂದು ವಿಶಿಷ್ಟವಾದ ಸಂಸ್ಥೆ. ಇಲ್ಲಿ ಇನ್ನಷ್ಟುಮಕ್ಕಳು ಬಂದು ಕಲಿಯಬೇಕು ಎಂದು ಹೇಳಿದರು.
ಇನ್ನೋರ್ವ ಸಿಎ ಜಗದೀಶ್ ಶೆಟ್ಟಿ ಅವರು ಮಾತನಾಡಿ, ಇಲ್ಲಿನ ಮಕ್ಕಳಿಗೆ ಪ್ರಕಾಶ್ ಭಂಡಾರಿಯವರು ಒಂದು ಉತ್ತಮ ವೇದಿಕೆಯನ್ನು ಕಲ್ಪಿಸಿಕೊಡುತ್ತಿದ್ದಾರೆ. ಆ ವೇದಿಕೆಯನ್ನು ದೊರಕಿಸಿಕೊಡಬೇಕಾದರೂ ಅದರ ಹಿಂದೆ ಬಹಳ ಪರಿಶ್ರಮವಿದೆ. ತಾವೆಲ್ಲರೂ ಅದರ ಸದುಪಯೋಗವನ್ನು ಪಡೆದುಕೊಳ್ಳುತ್ತಿದ್ದೀರಿ. ಅದು ಸಂತೋಷದ ವಿಷಯ. ಇಲ್ಲಿ ಭಾಗವಹಿಸಿದ ಎಲ್ಲರೂ ವಿಜೇತರು. ಪ್ರತಿ ಸ್ಪರ್ಧಿಗಳಿರುವುದರಿಂದಲೇ ನೀವು ಗೆಲ್ಲುವುದು ಸಾಧ್ಯ. ಅವರು ಕೂಡಾ ಕಷ್ಟಪಟ್ಟಿದ್ದಾರೆ. ಆದ್ದರಿಂದ ಇಲ್ಲಿಸೋಲು ಗೆಲುವು ಮುಖ್ಯ ವಾಗುವುದಿಲ್ಲ. ಭಾಗವಹಿಸುವುದು ಮುಖ್ಯ ಎಂದು ನುಡಿದರು.
ಚಿಣ್ಣರ ಬಿಂಬದ ರೂವಾರಿ ಪ್ರಕಾಶ್ ಭಂಡಾರಿ ಅವರು ಮಾತನಾಡಿ, ಮಕ್ಕಳ ಪ್ರತಿಭೆಯನ್ನು ನೋಡಿ ತಾವೆಲ್ಲರೂ ಆನಂದಿಸಿದ್ದೀರಿ. ಇದುವರೆಗೆ 5 ವಲಯಗಳಲ್ಲಿ ಯಶಸ್ವಿಯಾಗಿ ಸ್ಪರ್ಧೆಗಳು ನಡೆದಿವೆ. ಇನ್ನು ಹಲವು ಕಡೆಯ ಸ್ಪರ್ಧೆಗೆ ದಿನಾಂಕ ನಿಗದಿಯಾಗಿದೆ. ಚಿಣ್ಣರ ಬಿಂಬದ ಮಕ್ಕಳು ಎಷ್ಟೇ ದೊಡ್ಡ ವೇದಿಕೆಯನ್ನು ಹತ್ತಿದರೂ ಅವರು ಸಭಾ ಕಂಪನವಿಲ್ಲದೆ ಮಾತನಾಡಬಲ್ಲರು. ಆ ಮಟ್ಟಿಗೆ ಅವರನ್ನು ತರಬೇತುಗೊಳಿಸುತ್ತಿದ್ದೇವೆ ಎಂದು ನುಡಿದು ಮಕ್ಕಳಿಗೆ ಶುಭ ಹಾರೈಸಿದರು.
ಸುರೇಂದ್ರ ಕುಮಾರ್ ಹೆಗ್ಡೆ ಅವರು ಮಾತನಾಡಿ, ಚಿಣ್ಣರ ಬಿಂಬದ ಸ್ಪರ್ಧೆಯ ಮುಖ್ಯ ಉದ್ದೇಶ ಮಕ್ಕಳಲ್ಲಿ ಧೈರ್ಯವನ್ನು ಉಂಟುಮಾಡುವುದು. ವಿಜೇತರ ಘೋಷಣೆ ಕೇವಲ ನೆಪಮಾತ್ರ. ನಮ್ಮ ಮಟ್ಟಿಗೆ ಎಲ್ಲ ಮಕ್ಕಳು ವಿಜೇತರು. ಆದರೆ ಪ್ರತಿಯೊಬ್ಬರು ಕಠಿನ ಪರಿಶ್ರಮ ಮಾಡಬೇಕು. ನಿಮ್ಮನ್ನು ಸೋಲಿಸಿದವರನ್ನು ಮುಂದೆ ನೀವು ಸೋಲಿಸಬೇಕು. ಇದೆಲ್ಲ ನಿಮ್ಮ ಜೀವನಕ್ಕೆ ಬಹಳ ಮುಖ್ಯವಾದ ಪಾಠಗಳು. ಸೋಲು-ಗೆಲುವನ್ನು ಸ್ಪರ್ಧಾತ್ಮಕವಾಗಿ ಸ್ವೀಕರಿಸಬೇಕು ಎಂದು ಮಕ್ಕಳಿಗೆ ಹಿತನುಡಿಯನ್ನು ಹೇಳಿದರು.
ಶೈಲಜಾ ಹೆಗ್ಡೆ, ರಾಜಕುಮಾರ್ ಕಾರ್ನಾಡ್, ಗೋಪಾಲ ತ್ರಾಸಿ, ಆರ್. ವಿ. ಶೆಟ್ಟಿ ಅವರು ತೀರ್ಪುಗಾರರಾಗಿ ಸಹಕರಿಸಿದರು. ಮಕ್ಕಳಿಂದ ವಿವಿಧ ಸ್ಪರ್ಧೆ, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿತು. ಮೂರೂ ಶಿಬಿರದ ಕಾರ್ಯಕರ್ತರು, ಪಾಲಕರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಸತೀಶ್ ಸಾಲ್ಯಾನ್ ಅವರು ಬಹುಮಾನ ವಿಜೇತರ ಯಾದಿಯನ್ನು ಓದಿ ವಂದಿಸಿದರು. ವೇದಿಕೆಯಲ್ಲಿ ರೇಣುಕಾ ಪ್ರಕಾಶ್ ಭಂಡಾರಿ, ವನಿತಾ ನೋಂಡಾ, ರಮೇಶ್ ರೈ, ಸುಮಿತ್ರಾ ದೇವಾಡಿಗ, ವಿಜಯ ಕೋಟ್ಯಾನ್ ಉಪಸ್ಥಿತರಿದ್ದರು. ಕುಮಾರಿ ಪವಿತ್ರಾ ದೇವಾಡಿಗ ಹಾಗೂ ವಿಕ್ರಮ್ ಪಾಟ್ಕರ್ ಕಾರ್ಯಕ್ರಮ ನಿರೂಪಿಸಿದರು.
ಈ ಹಿಂದೆ ನಾನು ಚಿಣ್ಣರ ಬಿಂಬದ ಕಾರ್ಯಕ್ರಮಕ್ಕೆ ಬಂದಾಗ ಇಲ್ಲಿನ ಮಕ್ಕಳು ಕನ್ನಡ ಮಾತನಾಡುವುದನ್ನು ನೋಡಿ ನಾನು ಕನ್ನಡ ಕಲಿಯಬೇಕೆಂಬ ನಿರ್ಧಾರವನ್ನು ಮಾಡಿದ್ದೆ. ಅದರ ಪರಿಣಾಮವಾಗಿ ಈಗ ಅಲ್ಪಸ್ವಲ್ಪ ಕನ್ನಡ ಮಾತನಾಡುತ್ತಿದ್ದೇನೆ ಅಂದರೆ ಅದರ ಶ್ರೇಯಸ್ಸು ಚಿಣ್ಣರ ಬಿಂಬಕ್ಕೆ ಸಲ್ಲಬೇಕು
– ಸಿಎ ಸುನಿಲ್ ಶೆಟ್ಟಿ (ಸಮಾಜ ಸೇವಕರು).
ಇಲ್ಲಿನ ಮಕ್ಕಳು ಅದೃಷ್ಟವಂತರು. ಜವಾಬ್ದಾರಿಯುತ ಜನರ ಮಾರ್ಗದರ್ಶನ ನಿಮ್ಮೊಂದಿಗಿದೆ. ಆ ಮಾರ್ಗದರ್ಶನದಿಂದ ನಿಮ್ಮ ಭವ್ಯ ಭವಿಷ್ಯದ ನಿರ್ಮಾಣ ಸಾಧ್ಯ -ಶಿವರಾಮ ಭಂಡಾರಿ (ನಿರ್ದೇಶಕರು: ಶಿವಾಸ್ ಹೇರ್ ಡಿಸೈನರ್ ಪ್ರೈವೇಟ್ ಲಿಮಿಟೆಡ್).
ಚಿಣ್ಣರ ಬಿಂಬ ಆರಂಭವಾದಂದಿನಿಂದ ನಾನು ಬಹಳ ಹತ್ತಿರದಿಂದ ನೋಡುತ್ತಿದ್ದೇನೆ. ಒಂದು ಸಂಸ್ಥೆ ಕಟ್ಟುವುದು ಸುಲಭ. ಆದರೆ ಅದನ್ನು ಬೆಳೆಸುವುದು ದೊಡ್ಡ ಮಾತು ಮತ್ತು ಬಹಳ ಕಷ್ಟ. ಇಲ್ಲಿ ನಿಮಗೆ ಒಳ್ಳೆಯ ಮಾರ್ಗದರ್ಶನ ದೊರೆಯುತ್ತಿದೆ. ಇದರ ಜೊತೆಯಲ್ಲಿ ಯೋಗ, ಅಡುಗೆ, ಕರಾಟೆಯನ್ನೂ ಕಲಿಯಬೇಕು. ಚಿಣ್ಣರ ಬಿಂಬವೆಂದರೆ ಕಲ್ಲಿನ್ನು ಕೆತ್ತಿ ವಜ್ರವಾಗಿಸುವುದು. ಇದು ಕಷ್ಟವಾದರೂ ಹೊಳೆಯುವ ಚಿಣ್ಣರು ಇಲ್ಲಿದ್ದಾರೆ ಎನ್ನುವುದು ಸಂತೋಷದ ವಿಷಯ. ಮಹಾರಾಷ್ಟ್ರದಾದ್ಯಂತ ಈ ಸಂಸ್ಥೆ ಹಬ್ಬಲಿ
– ಜಯರಾಮ ಶೆಟ್ಟಿ (ಅಜಂತಾ ಕ್ಯಾಟರರ್ಸ್).