ಜಿಎಸ್ಬಿ ಸೇವಾ ಮಂಡಲ ಸಯಾನ್: ಭದ್ರಿನಾಥ ಯಾತ್ರೆ ಸಂಪನ್ನ
Team Udayavani, Jul 1, 2018, 2:34 PM IST
ಮುಂಬಯಿ: ಜಿಎಸ್ಬಿ ಸೇವಾ ಮಂಡಲ ಸಯಾನ್ ವತಿ ಯಿಂದ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಶ್ರೀ ಭದ್ರಿನಾಥ ಯಾತ್ರೆಯು ಜೂ. 17ರಿಂದ ಜೂ. 25ರ ವರೆಗೆ ಆಯೋಜಿಸಲಾಗಿತ್ತು.
ಇದೇ ಸಂದರ್ಭದಲ್ಲಿ ಜಿಎಸ್ಬಿ ಸಮಾಜದ ಗುರುವರ್ಯರಾದ ಶ್ರೀ ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮೀಂದ್ರತೀರ್ಥ ಸ್ವಾಮೀಜಿ ಅವರು ಸ್ವಮಠವಾದ ಭದ್ರಿನಾಥದ ಶ್ರೀ ಕಾಶೀ ಮಠದಲ್ಲಿ ಮೊಕ್ಕಾಂ ಹೂಡಿದ್ದು, ಮೊಕ್ಕಾಂ ಸಮಯದಲ್ಲಿ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು, ಜೂ. 17ರಿಂದ ಜೂ. 23ರವರೆ ಭಾಗವತ ಸಪ್ತಾಹವು ವೇದ ಮೂರ್ತಿ ಸೋಮಕುಮಾರ್ ಭಟ್ ತರವೂರು ಇವರಿಂದ ಜರಗಿತು.
ಭಾಗವತ ಸಪ್ತಾಹದ ಅರ್ಥವಿವರಣೆಯನ್ನು ಮಂಗಳೂರು ಪಂಡಿತ್ ನರಸಿಂಹ ಆಚಾರ್ಯ ಅವರು ನೀಡಿದರು.
ದಶಮ ಸ್ಕಂದ ಹವನವನ್ನು ಪಂಡಿತ್ ನರಸಿಂಹ ಆಚಾರ್ಯ ಮತ್ತು ತಂಡದವರು ನೆರವೇರಿಸಿದರು. ಹವನದ ಪೂರ್ಣಾಹುತಿಯನ್ನು ಜು. 23ರಂದು ಪೂಜ್ಯ ಸ್ವಾಮೀಜಿ ಅವರಿಂದ ನಡೆಯಿತು.
ಜೂ. 22ರಂದು ಪೂಜ್ಯ ಸ್ವಾಮೀಜಿ ಅವರು ಭದ್ರಿನಾಥ ದೇವರ ದರ್ಶನ ಪಡೆದು ಪಾರಾಯಣ ಸಲ್ಲಿಸಿದರು.
ಜೂ. 23ರಂದು ಸ್ವಾಮೀಜಿ ಅವರು ಅಪಾರ ಸಮಾಜ ಬಾಂಧವರೊಂದಿಗೆ ಭದ್ರಿನಾಥ ದೇವರ ದರ್ಶನ ಪಡೆದರು. ಇದೇ ಸಂದರ್ಭದಲ್ಲಿ ಭದ್ರಿನಾಥ ಸ್ಥಳ ವೇದವ್ಯಾಸರು ಮಹಾಭಾರತ ಬರೆದ ಸ್ಥಳವಾಗಿದೆ ಎಂದು ನುಡಿದು, ಇಂತಹ ಪುಣ್ಯ ಸ್ಥಳಕ್ಕೆ ಆಗಮಿಸುವ ಯಾತ್ರಾರ್ಥಿಗಳು ಕೃತಾರ್ಥರು ಎಂದು ನುಡಿದರು.
ಭದ್ರಿನಾಥ ಕ್ಷೇತ್ರದಲ್ಲಿ ಯಾತ್ರೆಯಲ್ಲಿ ಮುಂಬಯಿ ಹಾಗೂ ವಿವಿಧೆಡೆಗಳಿಂದ ಸುಮಾರು 1,500ಕ್ಕೂ ಮಿಕ್ಕಿದ ಸಮಾಜ ಬಾಂಧವರು ಭಾಗವಹಿಸಿದ್ದರು.
ಜಿಎಸ್ಬಿ ಸೇವಾ ಮಂಡಳ ಮುಂಬಯಿ ಅವರು ಸರ್ವ ಯಾತ್ರಿಗಳಿಗೆ ಊಟೋಪಚಾರ ಮತ್ತು ವಸತಿಯ ವ್ಯವಸ್ಥೆಯನ್ನು ಮಾಡಿದ್ದರು. ಭದ್ರಿನಾಥ ಕ್ಷೇತ್ರದ ಯಾತ್ರೆಯ ಹರಿಸೇವೆಯು ಮತ್ತು ಜಿಎಸ್ಬಿ ಸೇವಾ ಮಂಡಲದ 64ನೇ ವಾರ್ಷಿಕ ಗಣೇಶೋತ್ಸವದ ಪೂರ್ವಭಾವಿ ತಯಾರಿಗಾಗಿ ಕಾರ್ಯಕರ್ತರು, ಸ್ವಯಂ ಸೇವಕರ ಮೊದಲ ಪೂರ್ವಭಾವಿ ಸಭೆಯು ಜು. 8ರಂದು ಪೂರ್ವಾಹ್ನ 10ರಿಂದ ಸೇವಾ ಮಂಡಳದ ಶ್ರೀ ಗುರುಗಣೇಶ ಪ್ರಸಾದ ಸಭಾಗೃಹ ಸಯಾನ್ ಇಲ್ಲಿ ಜರಗಲಿದೆ.