ಒಡಿಯೂರು ಕ್ಷೇತ್ರದ ಅಭಿವೃದ್ಧಿಯಲ್ಲಿ ಮುಂಬಯಿ ಭಕ್ತರ ಪಾತ್ರ ಅಪಾರ
Team Udayavani, Aug 13, 2017, 2:41 PM IST
ಮುಂಬಯಿ: ಭಾಷೆಯ ಹಿಂದೆ ಸಂಸ್ಕೃತಿ-ಸಂಸ್ಕಾರ ಅಡಗಿದೆ. ನಮ್ಮಲ್ಲಿ ಸಂಸ್ಕೃತಿ-ಸಂಸ್ಕಾರಗಳು ಜಾಗೃತಗೊಳ್ಳಬೇಕಾದರೆ ಸಮರ್ಪಣ ಭಾವ ಇರಬೇಕು. ಮಾತೃಭಾಷೆಯಲ್ಲಿಯೇ ಮನೆಯಲ್ಲಿ ವ್ಯವಹರಿಸಿದಾಗ ಮಕ್ಕಳಲ್ಲಿ ಭಾಷಾಭಿಮಾನದೊಂದಿಗೆ ಸಂಸ್ಕೃತಿ, ಸಂಸ್ಕಾರಗಳ ಅರಿವು ಬೆಳೆಯುತ್ತದೆ. ದಾನ, ಧರ್ಮದ ಮುಖಾಂತರ ಮನಃಶಾಂತಿ ದೊರೆಯುತ್ತದೆ. ನಾವು ಗಳಿಸುವ ಸ್ವಲ್ಪಾಂಶವನ್ನು ನಿರ್ಗತಿಕರ ಕಲ್ಯಾಣಕ್ಕಾಗಿ ನೀಡಿದಾಗ ಬದುಕು ಪಾವನವಾಗುತ್ತದೆ. ದಾನ-ಧರ್ಮದ ಮೂಲಕ ಸಮಾಜದಿಂದ ಪಡೆದ ಅಂಶವನ್ನು ಸಮಾಜಕ್ಕಾಗಿಯೇ ವಿನಿಯೋಗಿಸುವ ಮಹಾನ್ ಕಾರ್ಯ ಒಡಿಯೂರು ಕ್ಷೇತ್ರದಲ್ಲಿ ನಡೆಯುತ್ತಿದೆ. ಭಕ್ತರು ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿ ಶ್ರೀಕ್ಷೇತ್ರದ, ಗ್ರಾಮದ ಅಭಿವೃದ್ಧಿಯನ್ನು ಕಣ್ಣಾರೆ ಕಾಣಬಹುದು. ರಾಷ್ಟ್ರದ ಅಭಿವೃದ್ಧಿಯಲ್ಲಿ ಯುವಶಕ್ತಿಯ ಪ್ರಭಾವ ಅಧಿಕವಾಗಿದ್ದು, 18 ವರ್ಷಗಳ ಬಳಿಕ ಗುರುದೇವರ ಸೇವಾ ಬಳಗ ಮುಂಬಯಿಯಲ್ಲಿ ಯುವ ಬಳಗವು ಉದ್ಘಾಟನೆಗೊಳ್ಳುತ್ತಿರುವುದು ಸಂತೋಷದ ಸಂಗತಿಯಾಗಿದೆ. ಧಾರ್ಮಿಕ ಪ್ರಜ್ಞೆಯನ್ನು ಮಕ್ಕಳಿಗೆ ಎಳವೆಯಲ್ಲಿಯೇ ಮೂಡಿಸುವಲ್ಲೂ ಬಳಗ ಮುಂದಾಗಿರುವುದು ಅಭಿಮಾನದ ಸಂಗತಿಯಾಗಿದೆ ಎಂದು ಶ್ರೀ ಕ್ಷೇತ್ರ ಒಡಿಯೂರಿನ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ನುಡಿದರು.
ಆ. 6ರಂದು ಕುರ್ಲಾ ಪೂರ್ವದ ಬಂಟರ ಭವನದ ಸಭಾಗೃಹದಲ್ಲಿ ನಡೆದ ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಮುಂಬಯಿ ಇದರ 18ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಗುರುವಂದನೆ ಸ್ವೀಕರಿಸಿ, ಬಳಗ ಯುವ ವಿಭಾಗಕ್ಕೆ ಚಾಲನೆ ನೀಡಿ ಆಶೀರ್ವದಿಸಿದ ಶ್ರೀಗಳು, ಮಹಾರಾಷ್ಟ್ರದ ಸೇವಾ ಬಳಗ ಮತ್ತು ವಜ್ರಮಾತಾ ಮಹಿಳಾ ವಿಕಾಸ ಕೇಂದ್ರವು ಒಡಿಯೂರು ಕ್ಷೇತ್ರದ ಎರಡು ಕಣ್ಣುಗಳಿದ್ದಂತೆ. ಒಡಿಯೂರಿನ ಪ್ರಗತಿಯಲ್ಲಿ ಮುಂಬಯಿಯ ಬಳಗ ಮತ್ತು ಕೇಂದ್ರದ ಹಾಗೂ ಇಲ್ಲಿನ ತುಳು-ಕನ್ನಡಿಗರು, ಭಕ್ತರ ಪಾಲು ಅಪಾರವಾಗಿದೆ. ಬದುಕು ಸುಂದರವಾಗಲು ಬದಲಾವಣೆಯ ಅಗತ್ಯವಿದೆ. ಇಂದು ಚಾಲನೆಗೊಂಡ ಯುವ ವಿಭಾಗವು ಭವಿಷ್ಯದಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆದು ನಿಲ್ಲಲಿ ಎಂದು ಶುಭ ಹಾರೈಸಿದರು.
ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರಭಾಕರ ಎಲ್. ಶೆಟ್ಟಿ ಅವರು ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಒಡಿಯೂರಿನಲ್ಲಿ ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ, ಸಾಮಾಜಿಕ ಕಾರ್ಯಕ್ರಮಗಳು ಕಳೆದ 18 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿವೆ. ಸ್ವಾಮೀಜಿ ಅವರ ಮಾರ್ಗದರ್ಶನದಿಂದ ಭಕ್ತಿಯ ಜೊತೆಗೆ ಜ್ಞಾನಾರ್ಜನೆಯು ಹೆಚ್ಚುತ್ತದೆ. ಯುವ ಪೀಳಿಗೆಯನ್ನು ಇಂತಹ ಕಾರ್ಯಕ್ರಮಗಳಿಗೆ ಬರುವಂತೆ ಪಾಲಕರು ಪ್ರೇರೇಪಿಸಬೇಕು ಎಂದು ನುಡಿದರು.
ಶಿವಾನಿ ಶಿಪ್ಪಿಂಗ್ ಸಂಸ್ಥೆಯ ಸಿಎಂಡಿ ಕೆ. ಡಿ. ಶೆಟ್ಟಿ ಅವರು ಮಾತನಾಡಿ, ನಾನೋರ್ವ ಸೇವಾ ಬಳಗದ ಸದಸ್ಯ, ಒಡಿಯೂರಿಗೆ ನಾವು ಹತ್ತಿರವರಾದ್ದರಿಂದ ಪ್ರತೀ ಶನಿವಾರ ನನ್ನ ಮಾತೃಶ್ರೀಯೊಂದಿಗೆ ಹೋಗಿ ದೇವರ ದರ್ಶನವನ್ನು ಪಡೆಯುತ್ತಿದ್ದೆ. ಸ್ವಾಮೀಜಿ ಅವರ ಹಸ್ತದಿಂದ ಪ್ರಾರಂಭಗೊಳಿಸಿದ ಯಾವುದೇ ಕಾರ್ಯವು ಯಶಸ್ವಿಯಾಗುತ್ತದೆ ಎನ್ನುವುದಕ್ಕೆ ಹಲವಾರು ನಿದರ್ಶನಗಳಿವೆ. ಬಳಗವು ಯುವ ವಿಭಾಗಕ್ಕೆ ಚಾಲನೆ ನೀಡಿ, ಯುವ ವಿಭಾಗಕ್ಕೆ ಜವಾಬ್ದಾರಿಯನ್ನು ನೀಡಿರುವುದು ಸಂತೋಷದ ಸಂಗತಿಯಾಗಿದೆ ಎಂದರು.
ಒಡಿಯೂರು ಗುರುದೇವಾ ಸೇವಾ ಬಳಗ ಪುಣೆ ಘಟಕದ ಅಧ್ಯಕ್ಷ ಸದಾನಂದ ಶೆಟ್ಟಿ ಅವರು ಮಾತನಾಡಿ, ನಾವು ಧರ್ಮವನ್ನು ರಕ್ಷಿಸಿದರೆ, ಧರ್ಮ ನಮ್ಮನ್ನು ರಕ್ಷಿಸುತ್ತದೆ. ಒಡಿಯೂರಿನಲ್ಲಿ ಜಾತಿ, ಮತ, ಧರ್ಮ ಭೇದವಿಲ್ಲದೆ ಸಮಾಜಪರ ಕಾರ್ಯಗಳು ನಡೆಯುತ್ತಿವೆ. ಹೆತ್ತವರ ಸೇವೆ ಮಾಡಿದಾಗ ಭಗವಂತನನ್ನು ಕಾಣಬಹುದು. ಪಾಲಕರು ಮಕ್ಕಳಲ್ಲಿ ಮಾತೃಭಾಷೆಯಲ್ಲೇ ಮಾತನಾಡಿ ಭಾಷೆ, ಸಂಸ್ಕೃತಿಯನ್ನು ಬೆಳೆಸಬೇಕು ಎಂದು ಹೇಳಿದರು.
ಬಳಗದ ಉಪಾಧ್ಯಕ್ಷ ಬೋಲಾ°ಡುಗುತ್ತು ಚಂದ್ರಹಾಸ್ ಎಂ. ರೈ, ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷ ರೇವತಿ ವಾಮಯ್ಯ ಶೆಟ್ಟಿ, ಉದ್ಯಮಿ ಜಯಂತ್ ಶೆಟ್ಟಿ, ಸಾಧ್ವಿ ಮಾತಾನಂದಮಯಿ ಉಪಸ್ಥಿತರಿದ್ದರು. ಉದ್ಯಮಿ ಸತೀಶ್ ಶೆಟ್ಟಿ ಮತ್ತು ಸುಚಿತ್ರಾ ಎಸ್. ಶೆಟ್ಟಿ ದಂಪತಿ ಶ್ರೀಗಳ ಪಾದಪೂಜೆ ನೆರವೇರಿಸಿದರು. ಸಾಧ್ವಿ ಮಾತಾನಂದಮಯಿ ಸ್ತೋತ್ರ ಪಠಿಸಿದರು. ಕವಿತಾ ಪ್ರಕಾಶ್ ಶೆಟ್ಟಿ ಶ್ರೀಗಳ ಬಗ್ಗೆ ಕವಿತೆ ಪ್ರಸ್ತುತಪಡಿಸಿದರು. ಪ್ರಕಾಶ್ ಶೆಟ್ಟಿ ನೆರೂಲ್, ಡಾ| ಅದೀಪ್ ಕೆ. ಶೆಟ್ಟಿ ಅವರ ನೇತೃತ್ವದಲ್ಲಿ ಯುವ ವಿಭಾಗಕ್ಕೆ ಚಾಲನೆ ನೀಡಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಶ್ರೀಗಳು ಗೌರವಿಸಿದರು. ಪ್ರಾರಂಭದಲ್ಲಿ ಕಲ್ಲಡ್ಕ ವಿಠಲ ನಾಯಕ್ ಬಳಗದಿಂದ ಗೀತ ಸಾಹಿತ್ಯ ಸಂಭ್ರಮ ನಡೆಯಿತು. ಬಳಗದ ಗೌರವ ಪ್ರಧಾನ ಕಾರ್ಯದರ್ಶಿ ಪೇಟೆಮನೆ ಪ್ರಕಾಶ್ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಉದ್ಯಮಿ ದಾಮೋದರ ಶೆಟ್ಟಿ ನೆರೂಲ್, ಸಂತೋಷ್ ರಾಘು ಶೆಟ್ಟಿ ಅವರ ಸೇವಾರ್ಥವಾಗಿ ಅನ್ನಪ್ರಸಾದ ನಡೆಯಿತು. ಗುರುಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ ನಮ್ಮನ್ನು ಹೆಚ್ಚಾಗಿ ಸೆಳೆಯುತ್ತಿರುವ ಪ್ರಸ್ತುತ ದಿನಗಳಲ್ಲಿ ಶ್ರೀಗಳಿಂದ ಧರ್ಮದ ಪ್ರಚಾರ ನಡೆಯುತ್ತಿರುವುದು ಸಂತೋಷದ ಸಂಗತಿ. ಜನಪರ ಕಾರ್ಯಕ್ರಮಗಳು ನಡೆದಾಗ ದೇಶದ ಪ್ರಗತಿಯಾಗುತ್ತದೆ
-ಖಾಂದೇಶ್ ಭಾಸ್ಕರ್ ಶೆಟ್ಟಿ, ಕಾರ್ಯಾಧ್ಯಕ್ಷರು
ಬಂಟರ ಸಂಘ ನವಿಮುಂಬಯಿ ಸಮಿತಿ.
ಸ್ವಾಮೀಜಿ ಅವರ ಈ ಧಾರ್ಮಿಕ ಕಾರ್ಯಕ್ರಮವನ್ನು ಕಂಡು ಬಹಳ ಸಂತೋಷವಾಗುತ್ತಿದೆ. ಹಿರಿಯರ ಉತ್ತಮ ಮಾರ್ಗದರ್ಶನದೊಂದಿಗೆ ಯುವ ಪೀಳಿಗೆ ಮುಂದುವರಿದರೆ ಪ್ರಗತಿ ಸಾಧ್ಯವಾಗುತ್ತದೆ
– ಡಾ| ಶ್ರೀಕಾಂತ್ ಶಿಂಧೆ ಸಂಸದರು.
ಗುರುವಿನಿಂದ ಅಜ್ಞಾನ ದೂರವಾಗುತ್ತದೆ. ಮನುಷ್ಯ ಎಷ್ಟೇ ದೊಡ್ಡವನಾಗಿರಲಿ, ನಯ, ವಿನಯವನ್ನು ಗುರುವಿನಿಂದ ಕಲಿಯಬೇಕು. ಯುವ ವಿಭಾಗವನ್ನು ಪ್ರಾರಂಭಿಸಿ ಬಳಗವು ಉತ್ತಮ ಕೆಲಸವನ್ನು ಮಾಡಿದೆ. ಒಡಿಯೂರಿನ ಜನಪರ ಕಾರ್ಯಗಳಿಗೆ ಎಲ್ಲರ ಸಹಕಾರವಿರಲಿ.
– ಲತಾ ಜೆ. ಶೆಟ್ಟಿ ,ಕಾರ್ಯಾಧ್ಯಕ್ಷೆ
ಬಂಟರ ಸಂಘ ಮಹಿಳಾ ವಿಭಾಗ.
ಗುರುಸೇವೆಯಿಂದ ಪರಮಾತ್ಮನ ಸಾನ್ನಿಧ್ಯ ಪ್ರಾಪ್ತಿಯಾಗುತ್ತದೆ. ಒಡಿಯೂರಿಗೆ ಹೋದಾಗ ನನಗೆ ಸಾಕ್ಷಾತ್ ಭಗವಂತನನ್ನು ಕಂಡ ಅನುಭೂತಿಯಾಗಿದೆ. ನಾನು, ನನ್ನದು, ನನ್ನಿಂದಲೇ ಎಂಬ ಮಾತುಗಳು ಶೂನ್ಯ. ಗುರುವಿನ ಆರಾಧನೆಯಿಂದ ನಮ್ಮ ದೇಹ ಸತ್ತರೂ ಸದ್ಗತಿ ಪ್ರಾಪ್ತಿಯಾಗುತ್ತದೆ. ಬಳಗದ ಕಾರ್ಯಕ್ರಮಗಳಿಗೆ ಎಲ್ಲರ ಸಹಕಾರವಿರಲಿ .
– ನ್ಯಾಯವಾದಿ ಕೃಷ್ಣ ಎಲ್. ಶೆಟ್ಟಿ ಅಧ್ಯಕ್ಷರು,
ಗುರುದೇವ ಸೇವಾ ಬಳಗ ಮುಂಬಯಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ