ಪುಣೆ ಮಹಾಸ್ವರಾಜ್ ಕ್ರೆಡಿಟ್ ಕೋ ಆಪರೇಟಿವ್ ಲಿ. ಷೇರು ಅಪ್ಲಿಕೇಶನ್
Team Udayavani, Jul 15, 2018, 5:08 PM IST
ಪುಣೆ: ಪುಣೆಯಲ್ಲಿ ನಮ್ಮ ಕಣ್ಣೆದುರಿಗೆ ಹೊಟೇಲ್ ವ್ಯವಸ್ಥಾಪಕ ನಾಗಿ ದುಡಿಯುತ್ತಿದ್ದ ಹುಡುಗ ಆನಂತರ ಉಡುಪಿಗೆ ಹೋಗಿ ಸಣ್ಣ ಕಚೇರಿಯೊಂದನ್ನು ತೆರೆದು ಆರ್ಥಿಕ ಸಂಸ್ಥೆಯನ್ನು ಹುಟ್ಟುಹಾಕಿ ಕಠಿನ ಪರಿಶ್ರಮದೊಂದಿಗೆ ಮುನ್ನಡೆದು ಇಂದು ತನ್ನ ಸ್ವರಾಜ್ ಸಂಸ್ಥೆಯನ್ನು ಸಹಕಾರ ಕ್ಷೇತ್ರದಲ್ಲಿ ಬೆಳೆಸುವತ್ತ ಹೆಜ್ಜೆಯಿಟ್ಟುರುವುದು ನಿಜವಾಗಿಯೂ ಶ್ಲಾಘನೀಯವಾಗಿದೆ. ಇಂದು ಪುಣೆಯ ಅಯ್ಯಪ್ಪ ಕ್ಷೇತ್ರದಲ್ಲಿ ಪುರಂದರ ಶೆಟ್ಟಿಯವರ ಸಂಸ್ಥೆಯ ಷೇರುಗಳ ಅಪ್ಲಿಕೇಶನ್ ಬಿಡುಗಡೆಗೊಳಿಸಲು ಆನಂದವಾಗುತ್ತಿದೆ. ಭವಿಷ್ಯದಲ್ಲಿ ಈ ಸಂಸ್ಥೆ ಹೆಮ್ಮರವಾಗಿ ಬೆಳೆದು ನೂರಾರು ಶಾಖೆಗಳನ್ನು ಹೊಂದುವಂತಾಗಿ ಗ್ರಾಹಕರಿಗೆ ಉತ್ತಮ ಆರ್ಥಿಕ ಸೇವೆ ಯನ್ನು ನೀಡುವಂತಾಗಲಿ ಎಂದು ಪುಣೆ ಯಾತ್ರಿಕ್ ಹೊಟೇಲಿನ ಮಾಲಕರಾದ ಶೇಖರ್ ಶೆಟ್ಟಿ ನುಡಿದರು.
ಜು. 12ರಂದು ಪುಣೆ ಕಾತ್ರಜ್ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ದೀಪ ಪ್ರಜ್ವಲಿಸಿ ಮಹಾಸ್ವರಾಜ್ ಕ್ರೆಡಿಟ್ ಕೋ ಆಪರೇಟಿವ್ ಲಿಮಿಟೆಡ್ನ ಮುಂಬಯಿ ಇದರ ಷೇರು ಅಪ್ಲಿಕೇಶನ್ ಬಿಡುಗಡೆಗೊಳಿಸಿ ಮಾತನಾಡಿ ಸಂಸ್ಥೆಗೆ ಶುಭ ಹಾರೈಸಿದರು.
ಈ ಸಂದರ್ಭ ಉದ್ಯಮಿಗಳಾದ ವಿಟuಲ್ ಶೆಟ್ಟಿ ಪೂನಾಕೆಫೆ, ಐಶ್ವರ್ಯಾ ಕ್ಯಾಟರರ್ಸ್ನ ಸುಧಾಕರ ಶೆಟ್ಟಿ, ಅಕ್ಷತ್ ಶೆಟ್ಟಿ, ಯಕ್ಷಗಾನ ಕಲಾವಿದ ನಾರಾಯಣ ಗೌಡ ಮತ್ತಿತರರು ಈಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷ ಬಿ. ಪುರಂದರ ಶೆಟ್ಟಿ, ಆಡಳಿತ ನಿರ್ದೇಶಕ ಕಾರ್ತಿಕ್ ಶೆಟ್ಟಿ ಅತಿಥಿಗಳನ್ನು ಸತ್ಕರಿಸಿದರು.
ಮಹಾಸ್ವರಾಜ್ ಕ್ರೆಡಿಟ್ ಕೋ ಆಪರೇಟಿವ್ ಲಿಮಿಟೆಡ್ ಮುಂಬಯಿ ಇದರ ಅಧ್ಯಕ್ಷ ಬಿ. ಪುರಂದರ ಶೆಟ್ಟಿ ಅವರು ಮಾತನಾಡಿ, ಕಳೆದ 35 ವರ್ಷಗಳಿಂದ ಪುಣೆಯಲ್ಲಿದ್ದುಕೊಂಡು ಇಲ್ಲಿನ ಸಹೃದಯ ಬಂಧುಗಳ ಸಹಕಾರದೊಂದಿಗೆ ಸಂಸ್ಥೆಯನ್ನು ಬೆಳೆಸಿದ್ದೇನೆ. ಗ್ರಾಹಕರಿಗೆ ಉತ್ತಮವಾದ ಆರ್ಥಿಕ ಸೇವೆಯೊಂದಿಗೆ ಸಂಸ್ಥೆಯನ್ನು ಮುನ್ನಡೆಸುವ ಜವಾಬ್ದಾರಿ ನನಗಿದೆ ಎಂದು ಭಾವಿಸಿದ್ದೇನೆ. ಈಗಾಗಲೇ ಮುಂಬಯಿಯಲ್ಲಿ ನಮ್ಮ ಸಂಸ್ಥೆಯ ಷೇರುಗಳನ್ನು ಗಣ್ಯರ ಹಸ್ತದಿಂದ ಬಿಡುಗಡೆಗೊಳಿಸಿದ್ದೇವೆ. ಸಂಸ್ಥೆಯನ್ನು ಯಶಸ್ವಿಯಾಗಿ ಬೆಳೆಸಲು ನಿಮ್ಮೆಲ್ಲರ ಸಹಕಾರ ಅಗತ್ಯ. ಇಂದಿನ ಕಾರ್ಯಕ್ರಮದಲ್ಲಿ ಪ್ರೀತಿಯಿಂದ ಆಗಮಿಸಿ ಪ್ರೋತ್ಸಾಹಿಸಿರುವುದಕ್ಕೆ ವಂದನೆಗಳು ಎಂದರು.