ಕಾತ್ರಜ್ ಅಯ್ಯಪ್ಪ ದೇವಸ್ಥಾನದಲ್ಲಿ ಶಿವರಾತ್ರಿ ಉತ್ಸವ
Team Udayavani, Mar 7, 2019, 12:30 AM IST
ಪುಣೆ: ಕಾತ್ರಜ್ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಮಾ. 4ರಂದು ಶಿವರಾತ್ರಿ ಉತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು. ಧಾರ್ಮಿಕ ಕಾರ್ಯಕ್ರಮವು ಬೆಳಗ್ಗೆ 7ರಿಂದ ಪ್ರಾರಂಭಗೊಂಡು ರಾತ್ರಿ 9ರವರೆಗೆ ಶ್ರೀ ಈಶ್ವರ ದೇವರಿಗೆ ರುದ್ರಾಭಿಷೇಕ ಮತ್ತು ವಿವಿಧ ಪ್ರಕಾರದ ಅಭಿಷೇಕ ಹಾಗೂ ಬೇರೆ ಬೇರೆ ಪೂಜಾ ಕೈಕಂಕರ್ಯಗಳು, ರಂಗಪೂಜೆ ಮಂಗಳಾರತಿಯು ದೇವಸ್ಥಾನದ ಪ್ರಧಾನ ಅರ್ಚಕರಾದ ಹರೀಶ್ ಭಟ್ ಅವರ ನೇತೃತ್ವದಲ್ಲಿ ಜರಗಿತು.
ಈ ಸಂದರ್ಭದಲ್ಲಿ ಈಶ್ವರ ದೇವರಿಗೆ ಬೆಳ್ಳಿಯ ಮುಖವಾಡವನ್ನು ದೇವಸ್ಥಾನದ ಸೇವಾಕರ್ತರಲ್ಲಿ ಒಬ್ಬರಾದ ಹೊಟೇಲ್ ಆಶಾ ಗ್ರೂಪ್ ಇದರ ಭಾಸ್ಕರ ಶೆಟ್ಟಿ ಅವರು ಅರ್ಪಿಸಿದರು. ಶಿವರಾತ್ರಿ ಪ್ರಯುಕ್ತ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಅಪರಾಹ್ನ 3ರಿಂದ ಮೊದಲ್ಗೊಂಡು ಮಧ್ಯರಾತ್ರಿ 12 ಗಂಟೆಯವರೆಗೆ ಪುಣೆಯ ವಿವಿಧ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮವು ಜರಗಿತು.
ಭಜನಾ ಕಾರ್ಯಕ್ರಮದಲ್ಲಿ ಕಾತ್ರಾಜ್ ಶ್ರೀ ಅಯ್ಯಪ್ಪ ಸ್ವಾಮೀ ಭಜನಾ ಮಂಡಳಿ, ಪುಣೆ ಶ್ರೀ ವಜ್ರಮಾತ ಮಹಿಳಾ ವಿಕಾಸ ಕೇಂದ್ರ ಭಜನಾ ಮಂಡಳಿ, ಬಿಲ್ಲವ ಸಮಾಜ ಸೇವಾ ಸಂಘ ಭಜನಾ ಮಂಡಳಿ, ದೇವಾಡಿಗ ಸಂಘ ಭಜನಾ ಮಂಡಳಿ, ತುಳುಕೂಟ ಪುಣೆ ಭಜನಾ ಮಂಡಳಿ, ಚೈತನ್ಯ ಭಜನಾ ಮಂಡಳಿ, ಕಾಪಿ ಹೌಸ್ ಭಜನಾ ಮಂಡಳಿ, ರಾಜಮಹಲ್ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಿತು.
ಶ್ರೀ ಅಯ್ಯಪ್ಪ ಭಜನಾ ಮಂಡಲಿಯವರೊಂದಿಗೆ ವಿವಿಧ ಮಂಡಳಿಯ ಸದಸ್ಯರ ಸಹಕಾರದೊಂದಿಗೆ ಕುಣಿತ ಭಜನೆಯು ಸೇರಿದ ಭಕ್ತಾದಿಗಳನ್ನು ರಂಜಿಸಿತು. ಅಯ್ಯಪ್ಪ ಭಜನಾ ಮಂಡಳಿಯ ಮುಖ್ಯಸ್ಥರಾದ ಭಾಸ್ಕರ ಕೊಟ್ಟಾರಿ ಅವರ ಮುಂದಾಳತ್ವದಲ್ಲಿ ಭಜನಾ ಕಾರ್ಯಕ್ರಮದಲ್ಲಿ ಸೇರಿದ ಎಲ್ಲರೂ ಮಂಗಳ ಹಾಡುವ ಮೂಲಕ ಮುಕ್ತಾಯಗೊಂಡಿತು. ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯ ಭಕ್ತಾದಿಗಳು ಬೆಳಗ್ಗೆಯಿಂದ ರಾತ್ರಿಯವರೆಗೆ ದೇವಸ್ಥಾನಕ್ಕೆ ಭೇಟಿ ನೀಡಿ ಈಶ್ವರ ದೇವರ ದರ್ಶನ ಪಡೆದು ವಿವಿಧ ರೀತಿಯ ಪೂಜೆ ಸಲ್ಲಿಸಿ ಪುನೀತರಾದರು. ರಾತ್ರಿ ದೇವಸ್ಥಾನದ ಆರಾಧ್ಯ ದೇವರಾದ ಅಯ್ಯಪ್ಪ ಸ್ವಾಮಿಗೆ ಮತ್ತು ಶ್ರೀ ಈಶ್ವರ ದೇವರಿಗೆ ಮಂಗಳಾರತಿಯ ಅನಂತರ ಪ್ರಸಾದ ವಿತರಣೆ ಹಾಗೂ ಅನ್ನದಾನ ಸೇವೆ ಜರಗಿತು.
ಈ ದಿನದ ಅನ್ನದಾನ ಸೇವೆಯನ್ನು ರಘುರಾಮ ರೈ ದಂಪತಿ ಸೇವಾ ರೂಪದಲ್ಲಿ ನಡೆಸಿದರು. ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಂಘ ಕಾತ್ರಜ್ ಇದರ ವಿಶ್ವಸ್ತ ಮಂಡಳಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಕಾರ್ಯಾಧ್ಯಕ್ಷರು ಮತ್ತು ಪದಾಧಿಕಾರಿಗಳು, ಮಹಿಳಾ ಮಂಡಳಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಮೇಲ್ವಿಚಾರಣೆಯನ್ನು ನೋಡಿಕೊಂಡರು.
ಚಿತ್ರ-ವರದಿ: ಹರೀಶ್ ಮೂಡಬಿದ್ರಿ