ಶ್ರೀ ಮೂಕಾಂಬಿಕಾ ಧರ್ಮಶಾಸ್ತ ಸೇವಾ ಸಂಸ್ಥೆ:ಮಹಾಪೂಜೆ,ಧರ್ಮ ಸಭೆ
Team Udayavani, Dec 29, 2017, 4:51 PM IST
ನವಿಮುಂಬಯಿ: ತುಳು-ಕನ್ನಡಿಗರು ಹೊಟ್ಟೆಪಾಡಿಗಾಗಿ ಈ ಕರ್ಮಭೂಮಿಯಲ್ಲಿ ನೆಲೆಸಿದ್ದರೂ, ನಮ್ಮ ತುಳುನಾಡಿನ ಸಂಸ್ಕೃತಿ-ಸಂಸ್ಕಾರ, ಆಚಾರ-ವಿಚಾರಗಳನ್ನು ಮರೆತಿಲ್ಲ. ನಮ್ಮ ದೇಶದ ಸಂಸ್ಕೃತಿಯನ್ನು ವಿದೇಶಿಗರು ಮೆಚ್ಚಿ ಕೊಂಡಾಡುತ್ತಾರೆ. ತಾಯಿಗೆ ಸಮಾನವಾದ ಈ ಭೂಮಿಯ ಮಣ್ಣಿಗೆ ಪಾವಿತ್ರÂತೆಯಿದೆ. ಈ ಕಾರಣದಿಂದಲೇ ಸಾಧು-ಸಂತರು, ಸ್ವಾಮಿಗಳು ಪಾದರಕ್ಷೆ ಧರಿಸುವುದಿಲ್ಲ. ಇಂತಹ ಪವಿತ್ರ ಸಂಸ್ಕೃತಿಯನ್ನು ನಮ್ಮ ಮುಂದಿನ ಪೀಳಿಗೆಗೆ ತಿಳಿಯಪಡಿಸುವಂತಹ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರಬೇಕು. ಬಾಲ್ಯದಲ್ಲಿ ನಾವು ಪಟ್ಟ ಕಷ್ಟದ ಜೀವನದ ಬಗ್ಗೆ ಮಕ್ಕಳಿಗೆ ತಿಳಿಹೇಳುವ ಕೆಲಸವನ್ನು ಮಾಡಬೇಕಾಗಿದೆ. ಜಗತ್ತು ಎಂಬುವುದು ಒಂದು ಮನೆಯಿದ್ದಂತೆ. ಆ ಮನೆಯ ದೇವರ ಕೋಣೆ ಪರಶುರಾಮ ಸೃಷ್ಟಿಯ ನಮ್ಮ ತುಳುನಾಡಾಗಿದೆ ಎಂಬುವುದನ್ನು ಮರೆಯುವಂತಿಲ್ಲ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಉಮಾನಾಥ್ ಕೋಟ್ಯಾನ್ ನುಡಿದರು.
ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಾಲಯದ ಸಭಾಂಗಣದಲ್ಲಿ ಶ್ರೀ ಮೂಕಾಂಬಿಕಾ ಧರ್ಮಶಾಸ್ತ ಸೇವಾ ಸಂಸ್ಥೆಯ 15 ನೇ ವಾರ್ಷಿಕ ಮಹಾಪೂಜೆಯ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ದೇವರಲ್ಲಿ ಭಕ್ತಿಯಿಂದ ನಾವು ಬೇಡಿದರೆ ಖಂಡಿತಾವಾಗಿಯೂ ನಮ್ಮನ್ನು ಕೈಬಿಡುವುದಿಲ್ಲ. ಘನ್ಸೋಲಿ ಕ್ಷೇತ್ರಕ್ಕೆ ಬಂದಾಗ ಊರಿನ ಪ್ರಸಿದ್ಧ ದೇವಾಲಯಕ್ಕೆ ಬಂದ ಅನುಭವವಾಗುತ್ತಿದೆ. ಭಕ್ತಿಯು ತನ್ನಿಂದತಾನೆ ಇಲ್ಲಿ ಉದ್ಭವಿಸುತ್ತದೆ. ಮಕ್ಕಳನ್ನು ಇಂತಹ ಆಧ್ಯಾತ್ಮಿಕ, ಧಾರ್ಮಿಕತೆಯತ್ತ ಮುಖಮಾಡುವಂತೆ ಪಾಲಕ-ಪೋಷಕರು ಪ್ರೇರೇಪಿಸಬೇಕು ಎಂದು ನುಡಿದರು.
ಅತಿಥಿ-ಗಣ್ಯರು ದೀಪಪ್ರಜ್ವಲಿಸಿ ಸಮಾರಂಭಕ್ಕೆ ಚಾಲನೆ ನೀಡಿದರು. ಮಹಿಳಾ ವಿಭಾಗದ ಸದಸ್ಯೆಯರು ಪ್ರಾರ್ಥನೆಗೈದರು. ಪದಾಧಿಕಾರಿಗಳು ಅತಿಥಿಗಳನ್ನು ಗೌರವಿಸಿದರು. ಇದೇ ಸಂದರ್ಭದಲ್ಲಿ ಕಳೆದ 18 ವರ್ಷಗಳಿಂದ ಮಂದಿರದ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಸುರೇಶ್ ಎಸ್. ಕೋಟ್ಯಾನ್ ದಂಪತಿ, ಗಾಯಕ ಕಲೈಮಾಮಣಿ ವೀರಮಣಿ ರಾಜು ಮತ್ತು ಕು| ಧನ್ಯಾ ರವಿರಾಜ್ ಮತ್ತು ರವಿರಾಜ್ ದಂಪತಿಯನ್ನು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಗಣ್ಯರ ಸಮ್ಮುಖದಲ್ಲಿ ಸಮ್ಮಾನಿಸಲಾಯಿತು. ಕಳೆದ 25 ವರ್ಷಗಳಿಂದ ಅಯ್ಯಪ್ಪ ಸ್ವಾಮಿ ಮಾಲಾಧಾರಣೆ ಮಾಡಿ ಯಾತ್ರೆಗೈಯತ್ತಿರುವ ವಿ. ಕೆ. ಸುವರ್ಣ ಗುರುಸ್ವಾಮಿ, ಅನಿಲ್ ಹೆಗ್ಡೆ ಗುರುಸ್ವಾಮಿ ಹಾಗೂ 18 ನೇ ವರ್ಷದ ಮಾಲಾಧಾರಣೆ ಮಾಡಿದ ಸೀತಾರಾಮ ಸ್ವಾಮಿ ಅವರನ್ನು ಸಮ್ಮಾನಿಸಲಾಯಿತು.
ಶ್ರೀ ಮೂಕಾಂಬಿಕಾ ಧರ್ಮಶಾಸ್ತ ಸೇವಾ ಸಂಸ್ಥೆಯ ಅಧ್ಯಕ್ಷ ನಂದಿಕೂರು ಜಗದೀಶ್ ಶೆಟ್ಟಿ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, 15 ವರ್ಷಗಳ ಹಿಂದೆ ಪದ್ಮನಾಭ ಗುರುಸ್ವಾಮಿ, ಚಂದ್ರಹಾಸ ಗುರುಸ್ವಾಮಿ ಮತ್ತು ಇನ್ನಿತರ ಸ್ವಾಮಿಗಳ ಜತೆ ಈ ದೇವಾಲಯದಲ್ಲಿ ಮಾಲಾಧಾರಣೆ ಮಾಡಿ ಶಬರಿಮಲೆ ಯಾತ್ರೆ ಮಾಡುತ್ತಾ ಇದ್ದೇವೆ. ನಮ್ಮ ಸಂಸ್ಥೆಯನ್ನು ನೋಂದಣೀಕರಿಸಿ ಅದರ ಮುಖಾಂತರ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದೇವೆ. ಅಣ್ಣಿ ಶೆಟ್ಟಿ ಅವರ ಮುಂದಾಳತ್ವದಲ್ಲಿ ನಮ್ಮ ದೇವಾಲಯ ದಿನದಿಂದ ದಿನಕ್ಕೆ ಪ್ರಗತಿಪಥದತ್ತ ಸಾಗುತ್ತಿದೆ ಎನ್ನಲು ಸಂತೋಷವಾಗುತ್ತಿದೆ. ನಮ್ಮ ಸಂಸ್ಥೆಯ ಮುಖಾಂತರ ಪ್ರತೀ ವರ್ಷ 40-50 ಸ್ವಾಮಿಗಳು ಗುರುಸ್ವಾಮಿಗಳಾದ ಪದ್ಮನಾಭ ಗುರುಸ್ವಾಮಿ, ಚಂದ್ರಹಾಸ ಗುರುಸ್ವಾಮಿಗಳ ಮಾರ್ಗದರ್ಶನದಲ್ಲಿ ಶಬರಿಮಲೆ ಯಾತ್ರೆ ಮಾಡುತ್ತಿದ್ದಾರೆ ಎಂದು ನುಡಿದರು.
ಆಶೀರ್ವಚನ ನೀಡಿದ ದೇವಾಲಯದ ಪ್ರಧಾನ ಅರ್ಚಕ ಗುರುಪ್ರಸಾದ್ ಭಟ್ ಅವರು, ಮಹಿಳೆಯರು ಯಾವ ಕ್ಷೇತ್ರಗಳಲ್ಲಿ ನಿರಂತರವಾಗಿ ಚಟುವಟಿಕೆಯಲ್ಲಿರುತ್ತಾರೋ ಆ ಕ್ಷೇತ್ರ ಬೆಳಗುವುದರಲ್ಲಿ ಸಂಶಯವಿಲ್ಲ. ಗಂಗಾನೀರು ತುಂಬಾ ಪವಿತ್ರ. ನಮ್ಮ ಜೀವನದಲ್ಲಿ ಒಮ್ಮೆಯಾದರೂ ಗಂಗಾ ಸ್ನಾನ ಮಾಡುವುದರಿಂದ ನಮ್ಮ ಪಾಪ ಪರಿಹಾರವಾಗುತ್ತದೆ. ದೇವತಾ ಕಾರ್ಯವನ್ನು ಶ್ರದ್ಧಾ-ಭಕ್ತಿಯಿಂದ ಮಾಡಬೇಕು. ಅಯ್ಯಪ್ಪ ಸ್ವಾಮಿಯ ವ್ರತಧಾರಿಗಳು ಕಪ್ಪು ಬಟ್ಟೆ ಧರಿಸುತ್ತಾರೆ. ಏಕೆಂದರೆ ಅದು ಅಯ್ಯಪ್ಪನ ಪ್ರೀತಿಯ ಬಣ್ಣ. ಅದನ್ನು ಧರಿಸಿ ನಮ್ಮ ಎಲ್ಲಾ ದುರಾಭ್ಯಾಸವನ್ನು ತ್ಯಾಗ ಮಾಡಿ, ಭಕ್ತಿಯಿಂದ ವ್ರತಾಚರಣೆ ಮಾಡಿ ಶಬರಿಮಲೆ ಯಾತ್ರೆ ಮಾಡುವುದರಿಂದ ಅವರಿಗೆ ಅಯ್ಯಪ್ಪ ಸ್ವಾಮಿಯ ಅನುಗ್ರಹ ದೊರಕುತ್ತದೆ. ಅದರಲ್ಲೂ ಕಳೆದ 18 ವರ್ಷಗಳಿಂದ ದೇವಿಯ ಸೇವೆಗೈಯುತ್ತಿರುವ ಸುರೇಶ್ ಕೋಟ್ಯಾನ್ ಅವರನ್ನು ಗೌರವಿಸಿರುವುದು ಸೂಕ್ತ ವಾಗಿದೆ. ಅವರಿಗೆ ದೇವಿಯ ಅನುಗ್ರಹ ಇರಲಿ ಎಂದು ಹಾರೈಸಿದರು.
ರಂಗನಟ ಅಶೋಕ್ ಪಕ್ಕಳ ಕಾರ್ಯಕ್ರಮ ನಿರ್ವಹಿಸಿದರು. ದೆಪ್ಪುಣಿಗುತ್ತು ಚಂದ್ರಹಾಸ ಶೆಟ್ಟಿ ವಂದಿಸಿದರು. ಸಹಕರಿಸಿದ ಎಲ್ಲರನ್ನು ಗೌರವಿಸಲಾಯಿತು. ಪ್ರಾರಂಭದಲ್ಲಿ ದೇವಾಲಯದ ಸದಸ್ಯರಿಂದ ಹಾಗೂ ಚಿಣ್ಣರ ಬಿಂಬದ ಮಕ್ಕಳಿಂದ ನೃತ್ಯ ವೈವಿಧ್ಯ, ಪ್ರಸಿದ್ಧ ಗಾಯಕ ಕಲೈಮಾಮಣಿ ವೀರಮಣಿ ರಾಜು ಮತ್ತು ಬಳಗದವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು.
ಸಂಸ್ಥೆಯ ಅಧ್ಯಕ್ಷ ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದ ವೇದಿಕೆಯಲ್ಲಿ ಅತಿಥಿಗಳಾಗಿ ತುಳುಕೂಟ ಐರೋಲಿ ಅಧ್ಯಕ್ಷ ಹರೀಶ್ ಶೆಟ್ಟಿ ಪಡುಬಿದ್ರೆ, ನೋರ್ಡಿಕ್ ಲಾಜಿಸ್ಟಿಕ್ನ ಮಾಲಕ ಪ್ರಮೋದ್ ಕರ್ಕೇರ ಅಡ್ವೆ, ಶ್ರೀ ಮೂಕಾಂಬಿಕಾ ಧರ್ಮಶಾಸ್ತ ಸೇವಾ ಸಂಸ್ಥೆಯ ಉಪಾಧ್ಯಕ್ಷರುಗಳಾದ ಪದ್ಮನಾಭ ಗುರುಸ್ವಾಮಿ ಮತ್ತು ದೆಪ್ಪುಣಿಗುತ್ತು ಚಂದ್ರಹಾಸ ಗುರುಸ್ವಾಮಿ, ಕಾರ್ಯದರ್ಶಿ ಸುರೇಶ್ ಎಸ್. ಕೋಟ್ಯಾನ್, ಜತೆ ಕಾರ್ಯದರ್ಶಿ ತಾಳಿಪಾಡಿಗುತ್ತು ಭಾಸ್ಕರ ಎಂ. ಶೆಟ್ಟಿ, ಕೋಶಾಧಿಕಾರಿ ಧರ್ಮೇಂದ್ರ ನಾಯ್ಕ, ಜತೆ ಕೋಶಾಧಿಕಾರಿ ಸತೀಶ್ ಎಸ್. ಪೂಜಾರಿ, ಸಂಸ್ಥೆಯ ಹಿತೈಷಿಗಳಾದ ಧನ್ಯಾ ರವಿರಾಜ್ ಮತ್ತು ರೇಷ್ಮಾ ರವಿರಾಜ್ ಹಾಗೂ ಗಣ್ಯರು ಉಪಸ್ಥಿತರಿದ್ದರು. ಸಂಸ್ಥೆಯ ಸ್ವಾಮಿಗಳಾದ ಶ್ರೀನಿವಾಸ ಸ್ವಾಮಿ, ಬಾಲಕಷ್ಣ ಸ್ವಾಮಿ, ಚಿರಂಜನ್ ಸ್ವಾಮಿ, ಪ್ರದೀಪ್ ಸ್ವಾಮಿ, ದಿನೇಶ್ ಸ್ವಾಮಿ, ನಾಗೇಶ್ ಸ್ವಾಮಿ ಮೊದಲಾದವರು ಹಾಗೂ ದೇವಾಲಯದ ಸದಸ್ಯರು, ಉಪ ಸಸಮಿತಿಯ ಸದಸ್ಯರು ಸಹಕರಿಸಿದರು. ಕೊನೆಯಲ್ಲಿ ಅನ್ನಸಂತರ್ಪಣೆ ಜರಗಿತು. ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ವರ್ಷದಿಂದ ವರ್ಷಕ್ಕೆ ಈ ಕ್ಷೇತ್ರ ಬೆಳಗುತ್ತಿದ್ದು, ದೇವಿಯ ಅನುಗ್ರಹದಿಂದ ಜಾಗವೂ ಸಿಕ್ಕಿದೆ. ಅಲ್ಲಿ ಕಟ್ಟಡ ನಿರ್ಮಾಣ ಕಾರ್ಯವಾಗಲಿದೆ. ಅದು ನಿರ್ವಿಘ್ನವಾಗಿ ನೆವೇರಲಿದೆ. ಸುರೇಶ್ ಕೋಟ್ಯಾನ್ ಅವರು ಇಲ್ಲಿ ಒಳ್ಳೆಯ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರನ್ನು ಸಮ್ಮಾನಿಸಿದ್ದು ಸಂತೋಷವಾಗಿದೆ. ಈ ಕ್ಷೇತ್ರವು ಇನ್ನಷ್ಟು ಬೆಳಗಲಿ
– ಕೆ. ಡಿ. ಶೆಟ್ಟಿ
(ಕಾರ್ಯಾಧ್ಯಕ್ಷರು ಮತ್ತು ನಿರ್ದೇಶಕರು : ಭವಾನಿ ಶಿಪ್ಪಿಂಗ್ ಕಂಪೆನಿ).
ಪ್ರಸ್ತುತ ನವಿಮುಂಬಯಿಯಲ್ಲಿ ತುಳು-ಕನ್ನಡಿಗರ ಮೂರು ಧಾರ್ಮಿಕ ಕ್ಷೇತ್ರಗಳಿವೆ. ಕಳೆದ 25 ವರ್ಷಗಳಿಂದ ಶಬರಿಮಲೆಯಾತ್ರೆ ಕೈಗೊಳ್ಳುತ್ತಿರುವ ವಿ. ಕೆ. ಸುವರ್ಣ ಗುರುಸ್ವಾಮಿ, ಅನಿಲ್ ಗುರುಸ್ವಾಮಿ ಮತ್ತು ಸುರೇಶ್ ಕೋಟ್ಯಾನ್ ಅವರನ್ನು ಸಮ್ಮಾನಿಸಿದ್ದು ಸಂತೋಷವಾಗಿದೆ. ದಕ್ಷಿಣ ಭಾರತೀಯರು ಧಾರ್ಮಿಕ ಭಾವನೆವುಳ್ಳವರಾಗಿದ್ದು, ಹೆಚ್ಚಿನವರು ಅಯ್ಯಪ್ಪನ ಮಾಲಾಧಾರಣೆ ಮಾಡುತ್ತಾರೆ. ಮುಂದಿನ ದಿನಗಳಲ್ಲಿ ರಂಗಮಂದಿರದ ಒಳಗೆ ಇಂತಹ ಕಾರ್ಯಕ್ರಮ ಮಾಡುವ ಭಾಗ್ಯ ದೊರೆಯಲಿ. ತಾಯಿಯ ಅನುಗ್ರಹದಿಂದ ಆದಷ್ಟು ಬೇಗ ಈ ಯೋಜನೆ ಕಾರ್ಯಗತಗೊಳ್ಳಲಿ
– ಸಂತೋಷ್ ಡಿ. ಶೆಟ್ಟಿ (ಕಾರ್ಯಾಧ್ಯಕ್ಷರು : ಶ್ರೀ ಶನೀಶ್ವರ ಮಂದಿರ ನೆರೂಲ್).
ಸುರೇಶ್ ಕೋಟ್ಯಾನ್ ಅವರನ್ನು ಗೌರವಿಸಿದ್ದು ಆನಂದವಾಗಿದೆ. ಅವರು ಕಳೆದ 18 ವರ್ಷಗಳಿಂದ ಪ್ರಧಾನ ಕಾರ್ಯದರ್ಶಿಯಾಗಿ ಶ್ರದ್ಧಾ ಭಕ್ತಿಯಿಂದ, ನಿಷ್ಠೆಯಿಂದ ತಾಯಿಯ ಸೇವೆ ಮಾಡುತ್ತಿದ್ದಾರೆ. ಅವರ ಕೆಲಸವನ್ನು ಯಾವುದೇ ಕುಂದು ಕೊರತೆ ಬಾರದಂತೆ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಅವರು ಇನ್ನೂ 40 ವರ್ಷ ದೇವಿಯ ಸೇವೆ ಮಾಡುವ ಭಾಗ್ಯ ತಾಯಿ ಮೂಕಾಂಬಿಕೆ ಕರುಣಿಸಲಿ. ವಿ. ಕೆ. ಸುವರ್ಣ ಗುರುಸ್ವಾಮಿ ಮತ್ತು ಅನಿಲ್ ಗುರುಸ್ವಾಮಿ ಅವರನ್ನು ಸಮ್ಮಾನಿಸಿದ್ದು, ಸಂತೋಷದ ವಿಷಯ. ಮನುಷ್ಯ ಮಾಡುವ ಸತ್ಕರ್ಮದಿಂದ ಅವರು ಆದರ್ಶ ಮನುಷ್ಯನಾಗಬೇಕು. ನಮಗೆ ಸಿಕ್ಕಿದ ಜಾಗದಲ್ಲಿ ರಂಗಭವನ ನಿರ್ಮಿಸಿ ಅಲ್ಲಿ ಕಾರ್ಯಕ್ರಮ ಆಯೋಜಿಸುವ ಭಾಗ್ಯವನ್ನು ದೇವಿಯು ಆದಷ್ಟು ಬೇಗ ಕರುಣಿಸಲಿ. ನಿಮ್ಮೆಲ್ಲರ ಸಹಕಾರ ಸದಾಯಿರಲಿ
– ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ
(ಅಧ್ಯಕ್ಷರು : ಶ್ರೀ ಮೂಕಾಂಬಿಕಾ ಮಂದಿರ ಘನ್ಸೋಲಿ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ