ಪರಿಸರ ಸ್ನೇಹಿ ಆಡಳಿತ ಮತ್ತು ವ್ಯವಹಾರ ವಿಷಯವಾಗಿ ಕಾರ್ಯಾಗಾರ
Team Udayavani, Dec 3, 2018, 12:41 PM IST
ಮುಂಬಯಿ: ಆರ್ಚ್ ಡೈಯೊಸೆಸ್ ಆಫೀಸ್ ಫಾರ್ ಎನ್ವ್ಹಿರಾನ್ಮೆಂಟ್ ಮತ್ತು ಕ್ರಿಶ್ಚಿಯನ್ ಬಿಜಿನೆಸ್ ಪೋರಂ ಮುಂಬಯಿ ಸಂಯೋಜನೆಯಲ್ಲಿ ಗ್ರೀನಿಂಗ್ ಆಫ್ ದಿ ಆರ್ಚ್ಡೈಯೊಸೆಸ್ ಆ್ಯಂಡ್ ಬಿಜಿನೆಸ್ ಎಂಬ ವಿಷಯದ ಮೇಲೆ ವಿಶೇಷ ಕಾರ್ಯಾಗಾರವು ಡಿ. 1 ರಂದು ಪೂರ್ವಾಹ್ನ ಗೋರೆಗಾಂವ್ ಪೂರ್ವದ ಸೈಂಟ್ ಪಾಯಸ್ ಕಾಂಪ್ಲೆಕ್ಸ್ ನಲ್ಲಿರುವ ಸರ್ವೋದಯ ಸಭಾಗೃಹದಲ್ಲಿ ನೇರವೇರಿತು.
ಮುಂಬಯಿ ಧರ್ಮ ಪ್ರಾಂತ್ಯದ ಸಹಾಯಕ ಬಿಷಪ್ ಆಲ್ವಿನ್ ಡಿಸಿಲ್ವಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಉದ್ಯಮ ಹಾಗೂ ಧರ್ಮಪ್ರಾಂತ್ಯ ಮತ್ತು ಇದರ ವಿವಿಧ ಕ್ಷೇತ್ರಗಳನ್ನು ಜೀವಾಳವಾಗಿರಿಸಿಕೊಳ್ಳುತ್ತಾ ಪರಿಸರದ ಬಗ್ಗೆ ಕಾಳಜಿಯನ್ನು ವಹಿಸುವುದೇ ಕಾರ್ಯಕ್ರಮದ ಪ್ರಧಾನ ಉದ್ದೇಶ ವಾಗಿದೆ. ಪಾರಂಪರಿಕತೆ, ಬದ್ಧತೆ, ಉತ್ಕೃಷ್ಟತೆ ಮತ್ತು ವಿಶ್ವಾಸದ ಉತ್ಸಾಹದಲ್ಲಿ ಪರಸ್ಪರರ ಬೆಳವ ಣಿಗೆಗೆ ಒಗ್ಗೂಡಿಸುವ ಜೊತೆಗೆ ಸಂಪನ್ಮೂಲ ಗಳನ್ನು ಪೋಷಿಸುವ ಮೂಲಕ ಮತ್ತು ಅದರ ಸಮುದಾಯಕ್ಕೆ ಸಂಪತ್ತನ್ನು ಸೃಷ್ಟಿಸಲು ಕನಸಿನೊಂದಿಗೆ ಕ್ರಿಶ್ಚಿಯನ್ ಉದ್ಯಮಿಗಳು ಮತ್ತು ವೃತ್ತಿಪರರ ಸಾಂಘಿಕತೆ ಅವಶ್ಯವಾಗಿದೆ ಎಂದರು.
ನೈತಿಕ, ಸಹಾನುಭೂತಿಯ ಮತ್ತು ಬದ್ಧದೃಷ್ಟಿಯನ್ನು ಹೊಂದಿರುವ ಸಮಾಜ ಮತ್ತು ಮಾನವೀಯತೆಯನ್ನು ರೂಪಿಸಲು ಉದ್ಯಮಿಗಳು ಮುಂದಾ ಗಬೇಕು. ಪರಿಸರ ಸ್ನೇಹಿ ವಾತಾವರಣದ ನಿರ್ಮಾಣ ಅಗತ್ಯವಾಗಿಸಬೇಕು. ಅವಾಗಲೇ ಹಸಿರು ಜೀವನ ಮಾನವ ಬದುಕಿನ ಸುಂದರೀಕರಣವಾಗುತ್ತದೆ ಎಂದರು. ಪರಿಸರ ಪ್ರೇಮಿ, ಸಂಘಟಕ ರೆ| ಫಾ| ಜೋಸೆಫ್ ಗೋನ್ಸಾಲ್ವಿಸ್, ಗ್ರೀನ್ ನೈನ್ ಸರಕಾರೇತರ ಸಂಸ್ಥೆಯ ನಿರ್ದೇಶಕ ರೆ| ಫಾ| ಸಾಮೋ ಸಿಲ್ವಾ ಅವರು ಸಂಪನ್ಮೂಲ ವ್ಯಕ್ತಿಗಳಾಗಿದ್ದು ಕಾರ್ಯಾಗಾರ ನೆರವೇರಿಸಿದರು.
ಫಾ| ಜೋಸೆಫ್ ಗೋನ್ಸಾಲ್ವಿಸ್ ಮಾತನಾಡಿ, ಸಾಮಾನ್ಯವಾಗಿ ಹಸಿರು ಜೀವನವು ನೀರಿನ ಶಕ್ತಿಯಂತಹ ಸಂಪನ್ಮೂಲಗಳನ್ನು ಸಂರಕ್ಷಿಸಲು ನೆರವಾಗುವ ಕೊಡುಗೆ ನೀಡುವ ಉತ್ಪನ್ನ ಗಳನ್ನು ಸೂಚಿಸುತ್ತದೆ. ಪರಿಸರ-ಸ್ನೇಹಿ ಉತ್ಪನ್ನಗಳು ಗಾಳಿ, ನೀರು ಮತ್ತು ಭೂ ಮಾಲಿನ್ಯಕ್ಕೆ ತಡೆಯೊಡ್ಡುವ ಕಾರ್ಯವನ್ನು ಮಾಡುತ್ತವೆ. ನೀವು ಸಂಪನ್ಮೂಲಗಳನ್ನು ಹೇಗೆ ಬಳಸುತ್ತೀರಿ ಎಂಬುವುದರ ಬಗ್ಗೆ ಹೆಚ್ಚು ಜಾಗೃತರಾಗಿ ಪರಿಸರ ಸ್ನೇಹಿ ಪದ್ಧತಿ ಅಥವಾ ಅಭ್ಯಾಸಗಳಲ್ಲಿ ತೊಡಗಿಸಿಕೊಳ್ಳಬಹುದು ಎಂದರು.
ನಾವು ನಮ್ಮ ಆಸುಪಾಸಿನ ಎಲ್ಲರಲ್ಲೂ ಪರಿಸರ ಸ್ನೇಹಿ ಪದ್ಧತಿಯನ್ನು ರೂಢಿಸಿ ಕೊಳ್ಳಲು ಪ್ರೇರಿಪಿಸಬೇಕು. ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸಲು, ವಾಯುಮಾಲಿನ್ಯ ತಡೆಗಟ್ಟಲು ಮತ್ತು ವೈಜ್ಞಾನಿಕ ಇಂಧನ ಬಳಕೆಗಳನ್ನು ಕಡಿಮೆ ಮಾಡುತ್ತಾ ಪ್ರಾಕೃತಿಕ ವ್ಯವಸ್ಥೆಗೆ ಹೊಂದಿಕೊಳ್ಳುವ ಪ್ರಯತ್ನದೆಡೆದೆ ಮುಂದಾಗಬೇಕು. ಎಂದು ಫಾ| ಸಾಮೋ ಸಿಲ್ವಾ ತಿಳಿಸಿದರು.
ಕ್ರಿಶ್ಚಿಯನ್ ಬಿಜಿನೆಸ್ ಪೋರಂ ಸಂಸ್ಥೆಯ ಮುಖ್ಯಸ್ಥ, ಕ್ರಿಶ್ಚಿಯನ್ ಛೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ (ಸಿಸಿಸಿಐ) ಉಪ ಕಾರ್ಯಾಧ್ಯಕ್ಷ ಆಲ್ಬರ್ಟ್ ಡಬ್ಲೂÂ. ಡಿ’ಸೋಜಾ ಪ್ರಸ್ತಾವಿಕ ನುಡಿಗಳನ್ನಾಡಿ ಶಿಕ್ಷಣ, ಆರೋಗ್ಯ ಸೇವೆಗೆ ಕ್ರಿಶ್ಚಿಯನ್ ಸಮುದಾಯದ ಕೊಡುಗೆ ಅನನ್ಯ ವಾದುದು. ಭಾರತದಲ್ಲಿ ಅನುಕೂಲಕರ ವಾತಾವರಣವನ್ನು ಪೂರೈಸುವ ಕ್ಷೇತ್ರಗಳಲ್ಲಿ ಕ್ರೈಸ್ತರು ಮುಂಚೂಣಿ ಯಲ್ಲಿದ್ದಾರೆ. ಸದ್ಯ ಕ್ರಿಶ್ಚಿಯನ್ನರು ಉದ್ಯಮ, ವ್ಯಾಪಾರದಲ್ಲೂ ತಮ್ಮ ಸ್ಥಾನವನ್ನು ಗುರುತಿಸಿಕೊಂಡಿದ್ದು, ಉದ್ಯಮದ ಜೊತೆಗೆ ಪರಿಸರ ರಕ್ಷಣೆ, ಸ್ವಸ್ಥ ಸಮಾಜ ನಿರ್ಮಾಣ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಸಿಸಿಸಿಐ ಕಾರ್ಯಾಧ್ಯಕ್ಷ ಆ್ಯಂಟನಿ ಸಿಕ್ವೇರಾ, ಮಾಜಿ ಕಾರ್ಯಾಧ್ಯಕ್ಷ ಹೆನ್ರಿ ಲೊಬೋ, ಸಿಸಿಸಿಐ ನಿರ್ದೇಶಕರಾದ ನ್ಯಾಯವಾದಿ ಪಿಯೂಸ್ ವಾಸ್, ವಾಲ್ಟರ್ ಬುಥೆಲೋ, ಮೊಡೇಲ್ ಬ್ಯಾಂಕಿನ ಉಪ ಕಾರ್ಯಾಧ್ಯಕ್ಷ ವಿಲಿಯಂ ಸಿಕ್ವೇರಾ, ನಿರ್ದೇಶಕ ರುಗಳಾದ ಲಾರೇನ್ಸ್ ಡಿ’ಸೋಜಾ ಮುಲುಂಡ್, ಅಬ್ರಹಾಂ ಕ್ಲೇಮೆಂಟ್ ಲೊಬೋ, ಡೈಮೆನ್ಶನ್ ಸಂಸ್ಥೆಯ ಫ್ರೆಡ್ಡಿ ಮೆಂಡೋನ್ಸಾ, ಸಮಾಜ ಸೇವಕರಾದ ರೀಟಾ ಡೆಸಾ, ಎಲೈನಾ ಡಿ’ಸೋಜಾ, ಲಾರೇನ್ಸ್ ಡಿ’ಸೋಜಾ ಕಮಾನಿ, ವಾಲ್ಟರ್ ಡಿ’ಸೋಜಾ ಜೆರಿಮೆರಿ, ರೂಬೆನ್ ಬುಥೆಲೋ, ಲೀಯೋ ಫೆರ್ನಾಂಡಿಸ್ ಜೆರಿಮೆರಿ, ರೆಜೀ ಬುಥೇಲೋ ಸೇರಿದಂತೆ ಹಲವಾರು ಉದ್ಯಮಿಗಳು ಉಪಸ್ಥಿತರಿದ್ದರು.
ಮುಂಬಯಿ ಧರ್ಮಪ್ರಾಂತ್ಯದ ಆರ್ಚ್ಬಿಷಪ್ ಕಾರ್ಡಿನಲ್ ಓಸ್ವಾಲ್ಡ್ ಗ್ರೇಯಸ್ ಅವರು ಕಳೆದ ಸೆ. 1 ರಂದು ಗ್ರೀನಿಂಗ್ ಆಫ್ ದಿ ಆರ್ಚ್ ಡೈಯೊಸೆಸ್ ಆ್ಯಂಡ್ ಬಿಜಿನೆಸ್ ಕಾರ್ಯಕ್ರಮ ಆರಂಭಿಸುವುದಾಗಿ ಮಾಹಿತಿ ನೀಡಿದ್ದರು ಎಂದು ಶಿಬಿರದ ಉದ್ಧೇ ಶವನ್ನು ವಿವರಿಸಿದ ಕು| ಮರಿಯಾ ಅಂತಾವೋ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಚಿತ್ರ-ವರದಿ : ರೋನ್ಸ್ ಬಂಟ್ವಾಳ್