ಬಾಂಗ್ಲಾ ಟಿ20 ಸರಣಿ; ಏಶ್ಯ ಇಲೆವೆನ್ನಲ್ಲಿ ಭಾರತದ ಐವರು
Team Udayavani, Dec 26, 2019, 11:18 PM IST
ಹೊಸದಿಲ್ಲಿ: ಬಾಂಗ್ಲಾದೇಶದಲ್ಲಿ ಮುಂದಿನ ಮಾರ್ಚ್ನಲ್ಲಿ ನಡೆಯಲಿರುವ ಏಶ್ಯ ಇಲೆವೆನ್-ವಿಶ್ವ ಇಲೆವೆನ್ ನಡುವಿನ 2 ಟಿ20 ಪಂದ್ಯಗಳ ಸರಣಿಯಲ್ಲಿ ಭಾರತದ 5 ಕ್ರಿಕೆಟಿಗರು ಪಾಲ್ಗೊಳ್ಳಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.
ಬಾಂಗ್ಲಾದೇಶದ ಪಿತಾಮಹ, “ಬಂಗ ಬಂಧು’ ಶೇಖ್ ಮುಜಿಬುರ್ ರೆಹಮಾನ್ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಈ ಪಂದ್ಯಗಳು ನಡೆಯಲಿದ್ದು, ಇದಕ್ಕೆ ಐಸಿಸಿ ಅಧಿಕೃತ ಮಾನ್ಯತೆ ನೀಡಿದೆ.
ಪಾಕ್ ಕ್ರಿಕೆಟಿಗರಿಲ್ಲ
ಭಾರತದ ಆಟಗಾರರು ಏಶ್ಯ ಇಲೆವೆನ್ ತಂಡವನ್ನು ಪ್ರತಿನಿಧಿಸಲಿದ್ದಾರೆ. ಆದರೆ ಇಲ್ಲಿ ಭಾರತ ಮತ್ತು ಪಾಕ್ ಕ್ರಿಕೆಟಿಗರು ಒಟ್ಟಿಗೇ ಆಡುವುದನ್ನು ಕಾಣಬೇಕೆಂಬ ಕೆಲವರ ನಿರೀಕ್ಷೆ ಹುಸಿಯಾಗಿದೆ. ಕಾರಣ, ಈ ಸರಣಿಗಾಗಿ ಪಾಕ್ ಕ್ರಿಕೆಟಿಗರಿಗೆ ಆಹ್ವಾನ ವನ್ನೇ ನೀಡಿಲ್ಲ.
ಭಾರತದ ಜತೆಗೆ ಆತಿಥೇಯ ಬಾಂಗ್ಲಾ ದೇಶ, ಶ್ರೀಲಂಕಾ ಮತ್ತು ಅಫ್ಘಾನಿಸ್ಥಾನ ತಂಡದ ಆಟಗಾರರಷ್ಟೇ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಬಿಸಿಸಿಐ ಸೂಚನೆ ಮೇರೆಗೆ ಪಾಕ್ ಆಟಗಾರ ರನ್ನು ಹೊರಗಿಡಲಾಗಿದೆ ಎಂದು ಬಾಂಗ್ಲಾ ಕ್ರಿಕೆಟ್ ಮಂಡಳಿಯ ಸಿಇಒ ನಿಜಾಮುದ್ದೀನ್ ಚೌಧರಿ ಹೇಳಿದ್ದಾರೆ. ಪಂದ್ಯ ಮಾ. 18 ಮತ್ತು 21ರಂದು ಢಾಕಾದಲ್ಲಿ ನಡೆಯಲಿದೆ.
ಗಂಗೂಲಿಗೆ ಆಯ್ಕೆ ಹೊಣೆ
ಈ ಸರಣಿಯಲ್ಲಿ ಪಾಲ್ಗೊಳ್ಳಲಿರುವ ಭಾರತದ ಆಟಗಾರರು ಯಾರು ಎಂಬುದನ್ನು ಬಿಸಿಸಿಐ ಇನ್ನೂ ಪ್ರಕಟಿಸಿಲ್ಲ. ಆದರೆ ಬಾಂಗ್ಲಾ ಕ್ರಿಕೆಟ್ ಮಂಡಳಿ ಧೋನಿ, ಕೊಹ್ಲಿ, ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ, ಜಡೇಜ, ಭುವನೇಶ್ವರ್ ಕುಮಾರ್ ಮತ್ತು ರೋಹಿತ್ ಶರ್ಮ ಅವರ ಹೆಸರನ್ನು ಸೂಚಿಸಿದೆ.
“ನಾವು ಈ ಸರಣಿಗಾಗಿ 5 ಮಂದಿ ಕ್ರಿಕೆಟಿ ಗರನ್ನು ಕಳುಹಿಸಲು ನಿರ್ಧರಿಸಿದ್ದೇವೆ. ಆದರೆ ಇವರ ಆಯ್ಕೆಯನ್ನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರೇ ಮಾಡಲಿದ್ದಾರೆ’ ಎಂದು ಮಂಡಳಿಯ ಜಂಟಿ ಕಾರ್ಯದರ್ಶಿ ಜಯೇಶ್ ಜಾರ್ಜ್ ಹೇಳಿದ್ದಾರೆ.