ರಾಷ್ಟ್ರೀಯ ಆಯ್ಕೆ ಸಮಿತಿ ಚೇರ್ಮನ್ ಚೇತನ್ ಶರ್ಮ ಪುನರಾಯ್ಕೆ
Team Udayavani, Jan 8, 2023, 6:40 AM IST
ಹೊಸದಿಲ್ಲಿ: ಟಿ20 ವಿಶ್ವಕಪ್ನಲ್ಲಿ ಭಾರತೀಯ ತಂಡ ಸೆಮಿಫೈನಲ್ನಲ್ಲಿ ನಿರ್ಗಮಿಸಿದ ಬಳಿಕ ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ರಾಷ್ಟ್ರೀಯ ಸೀನಿಯರ್ ಆಯ್ಕೆ ಸಮಿತಿಯನ್ನು ವಿಸರ್ಜಿಸಿತ್ತು. ಇದೀಗ ಎರಡು ತಿಂಗಳ ಬಳಿಕ ಹೊಸ ಆಯ್ಕೆ ಸಮಿತಿಯನ್ನು ರಚಿಸಲಾಗಿದ್ದು ಚೇತನ್ ಶರ್ಮ ಅವರನ್ನು ಚೇರ್ಮನ್ ಆಗಿ ಪುನರಾಯ್ಕೆ ಮಾಡಲಾಗಿದೆ.
ಚೇತನ್ ಅವರ ಹೊಸ ತಂಡವು ಸಂಪೂರ್ಣವಾಗಿ ಹೊಸ ಮುಖಗಳನ್ನು ಹೊಂದಿದ್ದು, ದಕ್ಷಿಣ ವಲಯದ ಎಸ್. ಶರತ್ಗೆ ಭಡ್ತಿ ನೀಡಲಾಗಿದೆ. ಪೂರ್ವ ವಲಯದಿಂದ ಮಾಜಿ ಸೀಮರ್ ಸುಬ್ರೋತೊ ಬ್ಯಾನರ್ಜಿ, ಪಶ್ಚಿಮ ವಲಯದಿಂದ ಸಲೀಲ್ ಅಂಕೋಲಾ ಮತ್ತು ಮಧ್ಯ ವಲಯದಿಂದ ಟೆಸ್ಟ್ ನ ಆರಂಭಿಕ ಆಟಗಾರ ಶಿವಸುಂದರ್ದಾಸ್ ಸಮಿತಿಯಲ್ಲಿರುವ ಇತರರು.
ದಾಸ್ ಒಡಿಶಾ ಪರ ಆಡುವುದನ್ನು ಬಿಟ್ಟ ಅನಂತರ ವಿದರ್ಭದ ಮಾಜಿ ಆಟಗಾರ ದಾಸ್ ಮಧ್ಯ ವಲಯದಿಂದ ಸಮಿತಿಗೆ ಅರ್ಹತೆ ಗಳಿಸಿದರು. ಅವರ ಸ್ನೇಹಿತ ಹರ್ವಿಂದರ್ ಸಿಂಗ್ ಕೂಡ ಅರ್ಜಿ ಸಲ್ಲಿಸಿದ್ದರು. ಆದರೆ ಸಂದರ್ಶನದಲ್ಲಿ ಅವರನ್ನು ಪರಿಗಣಿಸಲಾಗಿಲ್ಲ.
2022ರ ನವೆಂಬರ್ನಲ್ಲಿ ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಹೊರಡಿಸಲಾದ ಜಾಹೀರಾತಿನ ಬಳಿಕ ಮಂಡಳಿಯು ಸುಮಾರು 600ರಷ್ಟು ಅರ್ಜಿಗಳನ್ನು ಸ್ವೀಕರಿಸಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ.