ದುಲೀಪ್ ಟ್ರೋಫಿ ಫೈನಲ್ ಪಾಂಚಾಲ್-ದಕ್ಷಿಣ ವಲಯ ಹೋರಾಟ
Team Udayavani, Jul 16, 2023, 5:03 AM IST
ಬೆಂಗಳೂರು: ದುಲೀಪ್ ಟ್ರೋಫಿಗಾಗಿ ಪಶ್ಚಿಮ ವಲಯದ ನಾಯಕ ಪ್ರಿಯಾಂಕ್ ಪಾಂಚಾಲ್ ಮತ್ತು ದಕ್ಷಿಣ ವಲಯದ ನಡುವೆ ಭಾರೀ ಹೋರಾಟ ಜಾರಿಯಲ್ಲಿದೆ. ಗೆಲುವಿಗೆ 298 ರನ್ ಗುರಿ ಪಡೆದಿರುವ ಪಶ್ಚಿಮ ವಲಯ 4ನೇ ದಿನದಾಟದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 182 ರನ್ ಗಳಿಸಿದೆ. ಆರಂಭಕಾರ ಪಾಂಚಾಲ್ 92 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
67 ರನ್ ಲೀಡ್ ಬಳಿಕ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ದಕ್ಷಿಣ ವಲಯ 7ಕ್ಕೆ 181 ರನ್ ಗಳಿಸಿ 3ನೇ ದಿದನಾಟ ಮುಗಿ ಸಿತ್ತು. ಶನಿವಾರ 230ರ ತನಕ ಇನ್ನಿಂಗ್ಸ್ ವಿಸ್ತರಿಸಿತು. ವಾಷಿಂಗ್ಟನ್ ಸುಂದರ್ 37 ಮತ್ತು ವಿಜಯ್ಕುಮಾರ್ ವೈಶಾಖ್ 23 ರನ್ ಮಾಡಿ ಮೊತ್ತವನ್ನು 221ಕ್ಕೆ ಏರಿಸಿದರು. ಎಡಗೈ ಸ್ಪಿನ್ನರ್ ಧರ್ಮೇಂದ್ರ ಸಿನ್ಹ ಜಡೇಜ 5 ವಿಕೆಟ್ ಕೆಡವಿ ಮಿಂಚಿದರು.
ಪಶ್ಚಿಮ ವಲಯಕ್ಕೆ ದ್ವಿತೀಯ ಇನ್ನಿಂಗ್ಸ್ನಲ್ಲಿ ಬಿಸಿ ಮುಟ್ಟಿಸಿ ದವರು ಕರ್ನಾಟಕದ ಮಧ್ಯಮ ವೇಗಿ ವಾಸುಕಿ ಕೌಶಿಕ್. ಅವರು ಪೃಥ್ವಿ ಶಾ (7), ಚೇತೇಶ್ವರ್ ಪೂಜಾರ (15) ಮತ್ತು ಸೂರ್ಯಕುಮಾರ್ ಯಾದವ್ (4) ಅವರ ಬಹುಮೂಲ್ಯ ವಿಕೆಟ್ ಉರುಳಿಸಿದರು. ಹಾರ್ವಿಕ್ ದೇಸಾಯಿ (4) ವಿಕೆಟ್ ವೈಶಾಖ್ ಪಾಲಾಯಿತು. 79ಕ್ಕೆ ಪಶ್ಚಿಮ ವಲಯದ 4 ವಿಕೆಟ್ ಬಿತ್ತು.
ಆದರೆ ಆರಂಭಕಾರ ಪ್ರಿಯಾಂಕ್ ಪಾಂಚಾಲ್ ಕ್ರೀಸ್ ಆಕ್ರಮಿಸಿಕೊಂಡು ನಿಂತಿದ್ದರು. ಅವರಿಗೆ ಸರ್ಫರಾಜ್ ಖಾನ್ ಉತ್ತಮ ಬೆಂಬಲ ನೀಡಿದರು. 5ನೇ ವಿಕೆಟಿಗೆ 98 ರನ್ ಹರಿದು ಬಂತು. ಇನ್ನೇನು ದಿನದಾಟದ ಮುಕ್ತಾಯ ಸಮೀಪಿಸಿತು ಎನ್ನುವಾಗ ಸಾಯಿ ಕಿಶೋರ್ ಈ ಜೋಡಿಯನ್ನು ಬೇರ್ಪಡಿಸಿ ದಕ್ಷಿಣ ವಲಯಕ್ಕೆ ನಿಟ್ಟುಸಿರು ಬಿಡುವಂತೆ ಮಾಡಿದರು. 48 ರನ್ ಮಾಡಿದ ಸಫìರಾಜ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿಕೊಂಡರು. ಪಾಂಚಾಲ್ ಈಗಾಗಲೇ 205 ಎಸೆತ ಎದುರಿಸಿದ್ದು, 11 ಬೌಂಡರಿ ಬಾರಿಸಿದ್ದಾರೆ.