Asia Cup; ‘ದೋಸ್ತಿ ಮೈದಾನದ ಹೊರಗಿರಲಿ…’: ಟೀಂ ಇಂಡಿಯಾ ಆಟಗಾರರ ವಿರುದ್ಧ ಗಂಭೀರ್ ಕಿಡಿ
Team Udayavani, Sep 3, 2023, 5:06 PM IST
ಮುಂಬೈ: ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದೊಂದಿಗೆ ಏಷ್ಯಾ ಕಪ್ 2023 ಕೂಟ ರಂಗೇರಿದೆ. ಶನಿವಾರ ನಡೆದ ಸಾಂಪ್ರದಾಯಿಕ ಎದುರಾಳಿಗಳ ಪಂದ್ಯ ಮಳೆಯಿಂದ ರದ್ದಾದರೂ, ಒಂದು ಇನ್ನಿಂಗ್ಸ್ ಆಡಿದ ಕಾರಣ ಅಭಿಮಾನಿಗಳಿಗೆ ಸ್ವಲ್ಪವಾದರೂ ಮನರಂಜನೆ ಸಿಕ್ಕಿತು. ಆದರೆ ಪಂದ್ಯ ರದ್ದಾದ ಬಳಿಕ ಟೀಂ ಇಂಡಿಯಾ ಆಟಗಾರರ ನಡವಳಿಕೆಗೆ ಮಾಜಿ ಆಟಗಾರ ಗೌತಮ್ ಗಂಭೀರ್ ಕಿಡಿಕಾರಿದ್ದಾರೆ.
140 ಕೋಟಿ ಜನರನ್ನು ಪ್ರತಿನಿಧಿಸುತ್ತಿರುವ ಭಾರತೀಯ ಕ್ರಿಕೆಟಿಗರು, ಕ್ರೀಡಾಂಗಣದೊಳಗೆ ಸೌಹಾರ್ದದ ಪ್ರದರ್ಶನ ಮಾಡಬಾರದು. ಅಂತಹ ನಡವಳಿಕೆಗಳು ಯಾವಾಗಲೂ ಹೊರಗೆ ಉಳಿಯಬೇಕು ಎಂದು ಗಂಭೀರ್ ಹೇಳಿದ್ದಾರೆ.
“ನೀವು ನಿಮ್ಮ ರಾಷ್ಟ್ರೀಯ ತಂಡಕ್ಕಾಗಿ ಮೈದಾನದಲ್ಲಿ ಆಡುವಾಗ, ನೀವು ಬೌಂಡರಿ ಲೈನ್ ಹೊರಗೆ ಸ್ನೇಹವನ್ನು ಬಿಡಬೇಕು. ಎರಡೂ ಸೆಟ್ ಗಳ ಆಟಗಾರರ ದೃಷ್ಟಿಯಲ್ಲಿ ಆಕ್ರಮಣಶೀಲತೆ ಇರಬೇಕು. ಆ ಆರು – ಏಳು ಗಂಟೆಗಳ ಕ್ರಿಕೆಟ್ ನ ನಂತರ ನಿಮಗೆ ಬೇಕಾದಷ್ಟು ಸ್ನೇಹದಿಂದಿರಿ. ಏಕೆಂದರೆ ನೀವು ನಿಮ್ಮನ್ನು ಪ್ರತಿನಿಧಿಸುತ್ತಿಲ್ಲ, ನೀವು ಒಂದು ಶತಕೋಟಿಗೂ ಹೆಚ್ಚು ರಾಷ್ಟ್ರವನ್ನು ಪ್ರತಿನಿಧಿಸುತ್ತಿದ್ದೀರಿ” ಎಂದು ಗಂಭೀರ್ ಹೇಳಿದರು.
ಇದನ್ನೂ ಓದಿ:Sanatan Dharma ; ಬಿಜೆಪಿಗೆ ಹೊಸ ಅಸ್ತ್ರವಾದ ಉದಯನಿಧಿ ಸ್ಟಾಲಿನ್ ಹೇಳಿಕೆ
“ಈ ದಿನಗಳಲ್ಲಿ ಪ್ರತಿಸ್ಪರ್ಧಿ ತಂಡಗಳ ಆಟಗಾರರು ಪಂದ್ಯದ ಸಮಯದಲ್ಲಿ ಪರಸ್ಪರ ಬೆನ್ನು ತಟ್ಟುವುದನ್ನು ನೀವು ನೋಡುತ್ತೀರಿ. ಕೆಲವು ವರ್ಷಗಳ ಹಿಂದೆ ಅದು ಕಾಣಸಿಗುತ್ತಿರಲಿಲ್ಲ. ನೀವೇನೋ ಫ್ರೆಂಡ್ಲಿ ಮ್ಯಾಚ್ ಆಡುತ್ತಿದ್ದೀರಾ?” ಎಂದು ಗಂಭೀರ್ ಪ್ರಶ್ನಿಸಿದರು.