IPL 2020: ಇಂದು ಡೆಲ್ಲಿ- ಚೆನ್ನೈಕದನ ಕುತೂಹಲ
Team Udayavani, Sep 25, 2020, 7:05 AM IST
ದುಬಾೖ: ಒಂದೆಡೆ ಪಂಜಾಬ್ ವಿರುದ್ಧ ಸೂಪರ್ ಓವರ್ನಲ್ಲಿ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್, ಇನ್ನೊಂದೆಡೆ ರಾಜಸ್ಥಾನ್ ರಾಯಲ್ಸ್ ವಿರುದ್ಧ ಅಚ್ಚರಿಯ ಸೋಲುಂಡ ಚೆನ್ನೈ ಸೂಪರ್ ಕಿಂಗ್ಸ್… ಈ ತಂಡಗಳೆರಡು ಶುಕ್ರವಾರ ದುಬಾೖಯಲ್ಲಿ ಪರಸ್ಪರ ಎದುರಾಗಲಿವೆ.
ಧೋನಿ ಬಳಗಕ್ಕೆ ಇದು 3ನೇ ಪಂದ್ಯ. ಸ್ಟಾರ್ ಆಟಗಾರರಾದ ಬೆನ್ ಸ್ಟೋಕ್ಸ್, ಜಾಸ್ ಬಟ್ಲರ್ ಇಲ್ಲದ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋತದದ್ದು ಚೆನ್ನೈಗೆ ಎದುರಾದ ದೊಡ್ಡ ಆಘಾತ.
ಕೇರಳದ ಸ್ಟಂಪರ್ ಸಂಜು ಸ್ಯಾಮ್ಸನ್, ನಾಯಕ ಸ್ಟೀವನ್ ಸ್ಮಿತ್, ಜೋಫ್ರ ಆರ್ಚರ್ ಸೇರಿಕೊಂಡು ಚೆನ್ನೈ ಬೌಲಿಂಗನ್ನು ಪುಡಿಗಟ್ಟಿದ್ದರು.
ರಾಜಸ್ಥಾನ್ ಯುಎಇ ಆವೃತ್ತಿಯಲ್ಲಿ ಅತ್ಯಧಿಕ ರನ್ ಪೇರಿಸಿದ ದಾಖಲೆಯನ್ನೂ ಬರೆಯಿತು. ಹೀಗಾಗಿ ಚೆನ್ನೈ ಬೌಲಿಂಗ್ ಸಾಮರ್ಥ್ಯದ ಬಗ್ಗೆ ಭಾರೀ ಅನುಮಾನ ಕಾಡುತ್ತಿದೆ.
ಚೆನ್ನೈ ಬೌಲಿಂಗ್ ಹರಿತಗೊಂಡೀತೇ?
ಲುಂಗಿ ಎನ್ಗಿಡಿ, ರವೀಂದ್ರ ಜಡೇಜ, ಪೀಯೂಷ್ ಚಾವ್ಲಾ ಎಸೆತಗಳೆಲ್ಲ ದಿಕ್ಕಾಪಾಲಾಗಿದ್ದವು. ತಂಡದ ಬೌಲಿಂಗ್ ವಿಭಾಗವನ್ನು ಹರಿತಗೊಳಿಸುವುದು ಹೇಗೆ ಎಂಬುದು ಧೋನಿಗೆ ದೊಡ್ಡ ಸಮಸ್ಯೆಯಾಗಿ ಕಾಡಿದೆ.
ಲುಂಗಿ ಎನ್ಗಿಡಿ ಬದಲು ಜೋಶ್ ಹ್ಯಾಝಲ್ವುಡ್ ಬರಲೂಬಹುದು. ಇಮ್ರಾನ್ ತಾಹಿರ್ ಕೂಡ ರೇಸ್ನಲ್ಲಿದ್ದಾರೆ. ಆರಂಭಿಕ ಪಂದ್ಯದಲ್ಲಿ ಗೆದ್ದರೂ ಚೆನ್ನೈ ಬ್ಯಾಟಿಂಗ್ ವಿಭಾಗವೂ ಸಮಸ್ಯೆ ಎದುರಿಸುತ್ತಿದೆ. ಎರಡೂ ಪಂದ್ಯಗಳಲ್ಲಿ ಸಿಡಿದದ್ದು ಫಾ ಡು ಪ್ಲೆಸಿಸ್ ಮಾತ್ರ.
ಮುಂಬೈ ವಿರುದ್ಧ ಸಿಡಿದ ಅಂಬಾಟಿ ರಾಯುಡು ಒಂದೇ ಪಂದ್ಯದ ಬಳಿಕ ಹೊರಗುಳಿಯುವಂತಾದದ್ದು ದೊಡ್ಡ ಹಿನ್ನಡೆ. ರಾಯುಡು ವಾಪಸಾದರೆ ಚೆನ್ನೈ ಕೂಡ ಗೆಲುವಿನ ಹಳಿಗೆ ಮರಳಬಹುದು.
ಓಪನರ್ಗಳಲ್ಲಿ ಶೇನ್ ವಾಟ್ಸನ್ ಅಪಾಯಕಾರಿಯಾಗುವ ಸೂಚನೆ ನೀಡಿದ್ದಾರೆ. ಆದರೆ ಮುರಳಿ ವಿಜಯ್ ಬ್ಯಾಟ್ ಮಾತಾಡುತ್ತಿಲ್ಲ.
ರಾಜಸ್ಥಾನ್ ವಿರುದ್ಧ ಧೋನಿ ಏಳರಷ್ಟು ಕೆಳ ಕ್ರಮಾಂಕದಲ್ಲಿ ಬ್ಯಾಟ್ ಹಿಡಿದು ಬಂದದ್ದು ಭಾರೀ ಟೀಕೆಗೆ ಒಳಗಾಗಿತ್ತು. ಡೆಲ್ಲಿ ವಿರುದ್ಧ ಅವರು ತುಸು ಮೇಲೇರಬಹುದು.
ಡೆಲ್ಲಿಗೆ ಅದೃಷ್ಟದ ಗೆಲುವು
ಪಂಜಾಬ್ ವಿರುದ್ಧ ಡೆಲ್ಲಿ ಸಾಧನೆ ಅಚ್ಚರಿಯದ್ದಾಗಿತ್ತಾದರೂ ಪ್ರಶಂಸನೀಯ. ಮಾರ್ಕಸ್ ಸ್ಟೋಯಿನಿಸ್ ಅವರ ಆಲ್ರೌಂಡ್ ಶೋ ಅಯ್ಯರ್ ಪಡೆಯ ಅದೃಷ್ಟವನ್ನು ತೆರೆದಿರಿಸಿತ್ತು. ಆದರೆ ಪ್ರತೀ ಸಲವೂ ಅದೃಷ್ಟವನ್ನು ನಂಬಿ ಕೂರಲಾಗದು. ಶಾ, ಧವನ್, ಹೆಟ್ಮೈರ್ ಅವರ ಬ್ಯಾಟಿನಿಂದಲೂ ರನ್ ಹರಿದು ಬರಬೇಕಿದೆ.
ಪ್ರಧಾನ ಸ್ಪಿನ್ನರ್ ಆರ್. ಅಶ್ವಿನ್ ಇನ್ನೂ ಭುಜದ ನೋವಿನಿಂದ ಪೂರ್ತಿ ಚೇತರಿಸಿಕೊಂಡಿಲ್ಲ. ಗುರುವಾರದ ಅಭ್ಯಾಸದ ಅವಧಿ ಬಳಿಕ ಅಶ್ವಿನ್ ಪರಿಸ್ಥಿತಿಯನ್ನು ಗಮನಿಸಲಾಗುವುದು ಎಂದು ತಂಡದ ಫಿಸಿಯೋ ಪ್ಯಾಟ್ರಿಕ್ ಫರ್ಹಾತ್ ಹೇಳಿದ್ದಾರೆ. ಅವರು ಪಂಜಾಬ್ ವಿರುದ್ಧ ಒಂದೇ ಓವರ್ ಎಸೆದು 2 ವಿಕೆಟ್ ಉರುಳಿಸಿ ಮೈದಾನ ತೊರೆದಿದ್ದರು. ಅಕಸ್ಮಾತ್ ಅಶ್ವಿನ್ ಹೊರಗುಳಿದರೆ ಅಮಿತ್ ಮಿಶ್ರಾ ಆಡಲಿದ್ದಾರೆ.