ಮಹಾರಾಜ ಟಿ20 ಪಂದ್ಯಾವಳಿ; ಮಂಗಳೂರು ಯುನೈಟೆಡ್ ಸಜ್ಜು
Team Udayavani, Aug 3, 2022, 10:39 PM IST
ಮಂಗಳೂರು: ಮೈಸೂರಿನಲ್ಲಿ ಆ. 7ರಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ವತಿಯಿಂದ ಆರಂಭಗೊಳ್ಳಲಿರುವ ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್ ಪಂದ್ಯಾವಳಿಯಲ್ಲಿ ಮಂಗಳೂರು ಯುನೈಟೆಡ್ ತಂಡವೂ ಭಾಗವಹಿಸಲಿದೆ ಎಂದು ಕೆಎಸ್ಸಿಎ ಪ್ರಧಾನ ಕಾರ್ಯದರ್ಶಿ ಸಂತೋಷ್ ಮೆನನ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿ20 ಟೂರ್ನಿಯ ಮೊದಲ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ವಿರುದ್ಧ ಮಂಗಳೂರು ಯುನೈಟೆಡ್ ತಂಡವು ಸೆಣಸಲಿದೆ. ಒಟ್ಟು 6 ತಂಡಗಳು ಟೂರ್ನಿಯಲ್ಲಿ ಭಾಗವಹಿಸುತ್ತಿವೆ ಎಂದರು.
ಪ್ರತಿಭೆಗಳಿಗೆ ಅವಕಾಶ
ಮಂಗಳೂರು, ಉಡುಪಿ, ಕೊಡಗು, ಉತ್ತರ ಕನ್ನಡ ಜಿಲ್ಲೆಯ ಕ್ರಿಕೆಟ್ ಪ್ರತಿಭೆಗಳಿಗೆ ಸೂಕ್ತ ಅವಕಾಶ ಕಲ್ಪಿಸ ಬೇಕು ಎಂಬ ಉದ್ದೇಶದಿಂದ ಮಂಗಳೂರು ಯುನೈಟೆಡ್ ತಂಡವನ್ನು ಮುನ್ನಡೆಸುತ್ತಿದ್ದೇವೆ. ಅದಕ್ಕಾಗಿಯೇ ಯುನೈಟೆಡ್ ಎಂಬ ಹೆಸರು ಇಟ್ಟಿದ್ದೇವೆ. ಇನ್ನೂ ಉತ್ತೇಜನ ಸಿಗದ ಪ್ರತಿಭೆಗಳು ಮುಂದೆ ದೇಶ ವನ್ನು ಪ್ರತಿನಿಧಿಸುವ ಮಟ್ಟಕ್ಕೆ ಏರಬೇಕೆನ್ನು ವುದು ನಮ್ಮ ಗುರಿ ಎಂದು ಮಂಗಳೂರು ಯುನೈಟೆಡ್ ತಂಡದ ಪ್ರಾಯೋಜಕ, ಉದ್ಯಮಿ ಹಾಗೂ ವಿಧಾನ ಪರಿಷತ್ ಸದಸ್ಯ ಎಂ.ಬಿ. ಫಾರುಖ್ ತಿಳಿಸಿದರು.
ಮಂಗಳೂರಿನಲ್ಲಿ ಸ್ಟೇಡಿಯಂ
ಇದುವರೆಗೆ ಮಂಗಳೂರಿನಲ್ಲಿ ಅಂತಾ ರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣ ವನ್ನು ನಿರ್ಮಿಸಲು ಸಾಕಷ್ಟು ಪ್ರಯತ್ನವಾದರೂ ಸಫಲವಾಗಿಲ್ಲ. ಆದರೆ ಈಗ ಅದಕ್ಕೆ ತೀವ್ರ ಪ್ರಯತ್ನ ನಡೆಯುತ್ತಿದೆ.
ಜಿಲ್ಲಾಧಿಕಾರಿಯವರನ್ನು ಭೇಟಿಯಾಗಿ ಜಾಗವನ್ನೂ ವೀಕ್ಷಿಸಲಿದ್ದೇವೆ. ಮುಂದಿನ ಎರಡು ವರ್ಷದಲ್ಲಿ ಮಂಗಳೂರಿನಲ್ಲಿ ಒಂದು ಸ್ಟೇಡಿಯಂ ನಿರ್ಮಿಸುವುದು ನಮ್ಮ ಹಂಬಲ ಎಂದು ಸಂತೋಷ್ ಮೆನನ್ ತಿಳಿಸಿದರು. ಇದೇ ವೇಳೆ ಮಹಾರಾಜ ಟ್ರೋಫಿಯನ್ನು ಅನಾ ವರಣಗೊಳಿಸಲಾಯಿತು.
ಕೆಎಸ್ಸಿಎ ಮಂಗಳೂರು ವಲಯ ಅಧ್ಯಕ್ಷ ಶೇಖರ್ ಶೆಟ್ಟಿ, ಕನ್ವೀನರ್ ರತನ್ ಕುಮಾರ್, ಫಿಜಾ ಗ್ರೂಪ್ನ ಅರವಿಂದ ಕುಮಾರ್, ಮಂಗಳೂರು ಯುನೈಟೆಡ್ ಮ್ಯಾನೇಜರ್ ಸಯ್ಯದ್ ರಾಶೀದ್ ಹಾಜರಿದ್ದರು.
ಮಂಗಳೂರು ಯುನೈಟೆಡ್ ತಂಡ
ಸಮರ್ಥ್ ಆರ್. (ನಾಯಕ), ಅಭಿನವ್ ಮನೋಹರ್, ವೈಶಾಖ್ ವಿಜಯ್ ಕುಮಾರ್, ಅಮಿತ್ ವರ್ಮ, ವೆಂಕಟೇಶ್ ಎಂ., ಅನೀಶ್ವರ್ ಗೌತಮ್, ಸುಜಯ್ ಸಾತೇರಿ, ರೋಹಿತ್ ಕುಮಾರ್, ಮೆಕ್ನೈಲ್ ನರೊನ್ಹ, ಶರತ್ ಎಚ್.ಎಸ್., ಶಶಿ ಕುಮಾರ್ ಕೆ., ನಿಕಿನ್ ಜೋಸ್, ರಘುವೀರ್ ಪವಲೂರ್, ಅಮೋಘ ಎಸ್., ಚಿನ್ಮಯ್ ಎನ್.ಎ., ಆದಿತ್ಯ ಸೋಮಣ್ಣ, ಯಶೋವರ್ಧನ್ ಪರಾಂತಪ್, ಧೀರಜ್ ಜೆ.ಗೌಡ. ಸ್ಟುವರ್ಟ್ ಬಿನ್ನಿ (ಕೋಚ್), ಸಿ. ರಾಘವೇಂದ್ರ (ಸಹಾಯಕ ಕೋಚ್).