ಬಿಸಿಸಿಐ: ಅಮಿತ್ ಶಾ, ಗಂಗೂಲಿ ವಿರುದ್ಧ ರಾಮಚಂದ್ರ ಗುಹಾ ಆರೋಪ
Team Udayavani, Nov 24, 2020, 7:52 AM IST
ಹೊಸದಿಲ್ಲಿ: ಭಾರತೀಯ ಕ್ರಿಕೆಟ್ ಮಂಡಳಿಯ ಆಡಳಿತವನ್ನು ಎನ್. ಶ್ರೀನಿವಾಸನ್ ಮತ್ತು ಅಮಿತ್ ಶಾ ಅವರೇ ನಡೆಸುತ್ತಿದ್ದಾರೆ. ಬಿಸಿಸಿಐನಲ್ಲಿ ಸ್ವಜನ ಪಕ್ಷಪಾತ, ಕುಟುಂಬ ಆಡಳಿತ ಆಳಕ್ಕೆ ಹೋಗಿದೆ ಎಂದು ಸಿಒಎಯ ಮಾಜಿ ಸದಸ್ಯ ರಾಮಚಂದ್ರ ಗುಹಾ ಕಿಡಿಕಾರಿದ್ದಾರೆ.
“ದಿ ಕಾಮನ್ವೆಲ್ತ್ ಆಪ್ ಕ್ರಿಕೆಟ್’ ಎಂಬ ತನ್ನ ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ದೇಶದ ಕ್ರಿಕೆಟ್ ಆಡಳಿತದ ಬಗ್ಗೆ ಮಾತನಾಡಿರುವ ರಾಮಚಂದ್ರ ಗುಹಾ, ಬಿಸಿಸಿಐ ಆಡಳಿತದ ವೈಖರಿಯಲ್ಲಿ ನಿರೀಕ್ಷಿಸಲಾಗಿದ್ದ ಬದಲಾವಣೆ ಇನ್ನೂ ಬಂದಿಲ್ಲ. ಅಲ್ಲದೆ ಕೆಲ ರಾಜ್ಯಗಳ ಕ್ರಿಕೆಟ್ ಸಂಸ್ಥೆಯಲ್ಲಿ ಈಗಲೂ ಕೆಲ ಪ್ರಭಾವಿಗಳ ಮಕ್ಕಳೇ ಅಧಿಕಾರದಲ್ಲಿದ್ದಾರೆ. ಸ್ವಜನಪಕ್ಷಪಾತ ಮುಂದುವರಿದಿದೆ ಎಂದು ದೂರಿದ್ದಾರೆ.
ಗುಹಾ 2017ರಲ್ಲಿ ಸಿಒಎ ರಚಿಸಲ್ಪಟ್ಟಾಗ 6 ತಿಂಗಳ ಕಾಲ ಅದರ ಸದಸ್ಯರಾಗಿದ್ದರು. ಬಿಸಿಸಿಐ ಅಧ್ಯಕ್ಷರಾಗಿರುವ ಗಂಗೂಲಿ ಬೆಟ್ಟಿಂಗ್ ಆ್ಯಪ್ಗ್ಳಿಗೆ ಜಾಹೀರಾತು ನೀಡುತ್ತಿದ್ದಾರೆ. ಕ್ರಿಕೆಟಿಗರ ಈ ರೀತಿಯ ಹಣ ದಾಹ ಆಘಾತಕಾರಿಯಾಗಿದೆ. ಅಧ್ಯಕ್ಷರೇ ಹೀಗೆ ಮಾಡಿದರೆ ನೈತಿಕ ಗುಣಮಟ್ಟ ಪಾತಾಳಕ್ಕಿಳಿಯುತ್ತದೆ ಎಂದು ಗುಹಾ ಆರೋಪಿಸಿದ್ದಾರೆ.