ಜ.17ರಿಂದ ಬೆಂಗಳೂರಲ್ಲಿ ಸಂತೋಷ್ ಟ್ರೋಫಿ
Team Udayavani, Jan 11, 2018, 11:30 AM IST
ಬೆಂಗಳೂರು: 48 ವರ್ಷಗಳ ಸುದೀರ್ಘ ಅವಧಿಯ ಬಳಿಕ ಬೆಂಗಳೂರು ಮಹಾನಗರಿ ಸಂತೋಷ್ ಟ್ರೋಫಿ ಫುಟ್ಬಾಲ್ ಕೂಟಕ್ಕೆ ಆತಿಥ್ಯ ವಹಿಸಲಿದೆ. ಇದಕ್ಕೂ ಮುನ್ನ ಕರ್ನಾಟಕ 1968-69ರಲ್ಲಿ ಆತಿಥ್ಯ ವಹಿಸಿರುವುದೇ ಕೊನೆಯದಾಗಿತ್ತು.
ಜ. 17ರಿಂದ 22ರ ವರೆಗೆ ಬೆಂಗಳೂರಿನ ಅಶೋಕ ನಗರದಲ್ಲಿರುವ ರಾಜ್ಯ ಫುಟ್ಬಾಲ್ ಕ್ರೀಡಾಂಗಣದಲ್ಲಿ ಕೂಟ ನಡೆಯಲಿದೆ. ಒಟ್ಟು 8 ತಂಡಗಳು ಪಾಲ್ಗೊಳ್ಳಲಿದ್ದು, ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಪಂದ್ಯಗಳು ರೌಂಡ್ ರಾಬಿನ್ ಮಾದರಿಯಲ್ಲಿ ಪಂದ್ಯ ನಡೆಯಲಿದ್ದು, ಎರಡೂ ಗುಂಪಿನಲ್ಲಿ ಅಗ್ರಸ್ಥಾನ ಪಡೆದ ತಂಡಗಳು ಫೈನಲ್ ಪ್ರವೇಶಿಸಲಿವೆ. ಗುಂಪು “ಎ’ದಲ್ಲಿ ಕರ್ನಾಟಕ, ಸರ್ವಿಸಸ್, ತೆಲಂಗಾಣ ಮತ್ತು ಪಾಂಡಿಚೇರಿ ತಂಡಗಳು ಸ್ಥಾನ ಪಡೆದಿವೆ. “ಬಿ’ ಗುಂಪಿನಲ್ಲಿ ಕೇರಳ, ಆಂಧ್ರ ಪ್ರದೇಶ, ತಮಿಳುನಾಡು ಮತ್ತು ಅಂಡಮಾನ್ ನಿಕೋಬಾರ್ ತಂಡಗಳು ಸ್ಥಾನ ಪಡೆದಿವೆ. ಪಂದ್ಯದ ಟಿಕೆಟ್ ಬೆಲೆ 100 ರೂ. ಮತ್ತು 50 ರೂ. ನಿಗದಿಪಡಿಸಲಾಗಿದೆ.
ಕರ್ನಾಟಕದ ಸಾಧನೆ: ಕರ್ನಾಟಕ ತಂಡ ಮೊದಲ ಬಾರಿಗೆ ಸಂತೋಷ್ ಟ್ರೋಫಿಯಲ್ಲಿ ಗೆಲುವು ಸಾಧಿಸಿರುವುದು 1946-47ರ ಅವಧಿಯಲ್ಲಿ. ಬೆಂಗಳೂರು ಆತಿಥ್ಯದಲ್ಲಿ ನಡೆದ ಈ ಪಂದ್ಯದಲ್ಲಿ ಕರ್ನಾಟಕ ತಂಡ ಫೈನಲ್ ನಲ್ಲಿ ಬಂಗಾಳ ತಂಡವನ್ನು ಸೋಲಿಸಿ ಚಾಂಪಿ ಯನ್ ಆಗಿತ್ತು. ಆನಂತರ 1952-53, 1967-68, 1968-69ರಲ್ಲಿ ಚಾಂಪಿಯನ್ಶಿಪ್ ಪ್ರಶಸ್ತಿ ಪಡೆದಿದೆ. ನಾಲ್ಕು ಬಾರಿ ರನ್ನರ್ಅಪ್ ಪ್ರಶಸ್ತಿ ಯನ್ನು ಪಡೆದಿದೆ. ಕರ್ನಾಟಕ ಕೊನೆಯ ಬಾರಿಗೆ ಚಾಂಪಿಯನ್ ಆಗಿದ್ದು, 1968-69ರಲ್ಲಿ. ಬೆಂಗಳೂರಿ ನಲ್ಲಿ ನಡೆದ ಪಂದ್ಯದಲ್ಲಿ ಕರ್ನಾಟಕ ತಂಡ ಬಂಗಾಳ ತಂಡವನ್ನು ಸೋಲಿಸಿ ಚಾಂಪಿ ಯನ್ ಆಗಿತ್ತು. ಉಳಿದಂತೆ 1975-76ರಲ್ಲಿ ಫೈನಲ್ ತಲುಪಿ ಸೋಲುಂಡಿತ್ತು. ಆನಂತರ ರಾಜ್ಯ ತಂಡಕ್ಕೆ ಫೈನಲ್ ತಲುಪಲು ಸಾಧ್ಯವಾಗಿಲ್ಲ.
ಬೆಳೆಯಲು ಅನುಕೂಲ
ಇಂತಹ ಮಹತ್ವದ ಕೂಟವೊಂದನ್ನು ರಾಜ್ಯದಲ್ಲಿ ನಡೆಸಲು ಅನುವುಮಾಡಿಕೊಟ್ಟ ಅಖೀಲ ಭಾರತ ಫುಟ್ಬಾಲ್ ಒಕ್ಕೂಟಕ್ಕೆ (ಎಐಎಫ್ಎಫ್) ಧನ್ಯವಾದ ಹೇಳುತ್ತೇನೆ. ನಾವು ಕೂಟವನ್ನು ಯಶಸ್ವಿಯಾಗಿ ನಡೆಸುತ್ತೇವೆ. ರಾಜ್ಯದಲ್ಲಿರುವ ಫುಟ್ಬಾಲ್ ಅಭಿಮಾನಿಗಳ ಪ್ರೋತ್ಸಾಹ ಪಡೆಯುತ್ತೇವೆ. ಈ ಕೂಟ ರಾಜ್ಯದಲ್ಲಿ ಇನ್ನಷ್ಟು ಪ್ರತಿಭೆಗಳು ಬೆಳೆಯಲು ಅನುಕೂಲ ಮಾಡಲಿದೆ.
ಎನ್.ಎ. ಹ್ಯಾರೀಸ್, ಕೆಎಸ್ಎಫ್ಎ ಅಧ್ಯಕ್ಷ