ಟಿ20 ವಿಶ್ವಕಪ್ ಕ್ರಿಕೆಟ್ ವೈಫಲ್ಯ: ರಾಷ್ಟ್ರೀಯ ಕ್ರಿಕೆಟ್ ಆಯ್ಕೆ ಸಮಿತಿ ಬರ್ಖಾಸ್ತು
Team Udayavani, Nov 18, 2022, 10:40 PM IST
ಹೊಸದಿಲ್ಲಿ: ಭಾರತದ ಟಿ20 ವಿಶ್ವಕಪ್ ಕ್ರಿಕೆಟ್ ವೈಫಲ್ಯದ ಬೆನ್ನಲ್ಲೇ ಬಿಸಿಸಿಐ ಚೇತನ್ ಶರ್ಮ ನೇತೃತ್ವದ ಆಯ್ಕೆ ಸಮಿತಿಯನ್ನು ಬರ್ಖಾಸ್ತುಗೊಳಿಸಿದೆ. ಶುಕ್ರವಾರ ರಾತ್ರಿ ಈ ದಿಢೀರ್ ಬೆಳವಣಿಗೆ ಸಂಭವಿಸಿತು.
ಚೇತನ್ ಶರ್ಮ ನೇತೃತ್ವದ ಸಮಿತಿಯಿಂದ ಆರಿಸಲ್ಪಟ್ಟ ಭಾರತ ತಂಡ 2021ರ ಟಿ20 ವಿಶ್ವಕಪ್ನಲ್ಲೂ ಯಶಸ್ಸು ಕಂಡಿರಲಿಲ್ಲ. ಅದು ನಾಕೌಟ್ ತಲುಪಲು ವಿಫಲವಾಗಿತ್ತು. ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲೂ ಸೋತಿತ್ತು.
ಚೇತನ್ ಶರ್ಮ ನೇತೃತ್ವದ ಸಮಿತಿಯಲ್ಲಿನ ಇತರ ಸದಸ್ಯರೆಂದರೆ ಹರ್ವಿಂದರ್ ಸಿಂಗ್ (ಕೇಂದ್ರ ವಲಯ), ಸುನೀಲ್ ಜೋಶಿ (ದಕ್ಷಿಣ ವಲಯ) ಮತ್ತು ದೇಬಶಿಷ್ ಮೊಹಂತಿ (ಪೂರ್ವ ವಲಯ). ಅಬೆ ಕುರುವಿಲ್ಲ ಅವಧಿ ಮುಗಿದ ಬಳಿಕ ಪಶ್ಚಿಮ ವಲಯವನ್ನು ಯಾರೂ ಪ್ರತಿನಿಧಿಸಿರಲಿಲ್ಲ.