ಪದಕ ವಿಜೇತರಿಗೆ ಯುಪಿ ಸರಕಾರದಿಂದ ಸಮ್ಮಾನ: ಯೋಗಿ ಆದಿತ್ಯನಾಥ್
Team Udayavani, Aug 10, 2022, 11:31 PM IST
ಲಕ್ನೋ: ಬರ್ಮಿಂಗ್ಹ್ಯಾಮ್ನಲ್ಲಿ ನಡೆದ ಕಾಮನ್ವೆಲ್ತ್ ಕೂಟದಲ್ಲಿ ಪದಕ ಗೆಲ್ಲುವ ಮೂಲಕ ರಾಜ್ಯ ಮತ್ತು ದೇಶಕ್ಕೆ ಹೆಮ್ಮೆ ತಂದ ಎಂಟು ಕ್ರೀಡಾಪಟುಗಳನ್ನು ಉತ್ತರ ಪ್ರದೇಶ ಸರಕಾರ ಗೌರವಿಸಲಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಹೊಸ ಕ್ರೀಡಾ ನೀತಿಯಡಿ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕ ಗೆದ್ದ ಆಟಗಾರರಿಗೆ “ಸಮಂಜಸವಾದ ಗೌರವ ಮತ್ತು ಸ್ಥಾನ” ನೀಡಲಾಗುವುದು ಎಂದು ಸರಕಾರ ಇತ್ತೀಚೆಗೆ ಘೋಷಿಸಿತ್ತು. ಅದರಂತೆ ಗೇಮ್ಸ್ನಲ್ಲಿ ಭಾಗವಹಿಸಿದ ರಾಜ್ಯದ ಕ್ರೀಡಾಪಟುಗಳನ್ನು ಸರಕಾರ ಗೌರವಿಸಲಿದೆ. ಕ್ರೀಡಾ ನೀತಿಯಂತೆ ಸರಕಾರವು ಪದಕ ಗೆದ್ದ ಕ್ರೀಡಾಪಟುಗಳಿಗೆ ಉದ್ಯೋಗ ಮತ್ತು ಹೆಚ್ಚುವರಿ ಪ್ರಯೋಜನಗಳನ್ನು ನೀಡಲಿದೆ ಎಂದು ಆದಿತ್ಯನಾಥ್ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಹೊಸ ಕ್ರೀಡಾ ನೀತಿಯಂತೆ ಚಿನ್ನದ ಪದಕ ಗೆದ್ದ ಆ್ಯತ್ಲೀಟ್ಗಳಿಗೆ ಒಂದು ಕೋಟಿ ರೂ., ಬೆಳ್ಳಿಗೆ 75 ಲಕ್ಷ ರೂ. ಮತ್ತು ಕಂಚು ಗೆದ್ದವರಿಗೆ 50 ಲಕ್ಷ ರೂ. ನೀಡಲಾಗುತ್ತದೆ. ಮಾತ್ರವಲ್ಲದೇ ಪದಕ ಗೆದ್ದವರಿಗೆ ಗಜೆಟೆಡ್ ಅಫೀಸರ್ ರ್ಯಾಂಕಿನ ಉದ್ಯೋಗ ನೀಡಲಾಗುವುದು ಎದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನವನೀತ್ ಸೆಹಗಲ್ ಹೇಳಿದ್ದಾರೆ.
ಪ್ರಿಯಾಂಕಾ ಗೋಸ್ವಾಮಿ, ದೀಪ್ತಿ ಶರ್ಮ, ಮೇಘನಾ ಸಿಂಗ್, ಲಲಿತ್ ಉಪಾಧ್ಯಾಯ್, ವಿಜಯ್ ಕುಮಾರ್ ಯಾದವ್, ದಿವ್ಯಾ ಕಕ್ರಾನ್, ಅನ್ನು ರಾಣಿ, ವಂದನಾ ಕಟಾರಿಯಾ ಗೇಮ್ಸ್ನಲ್ಲಿ ಪದಕ ಗೆದ್ದ ಉತ್ತರ ಪ್ರದೇಶದ ಕ್ರೀಡಾಪಟುಗಳಾಗಿದ್ದಾರೆ. ಎಂಟು ಮಂದಿ ಪದಕ ವಿಜೇತರಲ್ಲದೇ ಗೇಮ್ಸ್ನಲ್ಲಿ ಪಾಲ್ಗೊಂಡ ಇನ್ನುಳಿದ ಐವರು ಕ್ರೀಡಾಪಟುಗಳಿಗೆ ಸರಕಾರವು ತಲಾ 5 ಲಕ್ಷ ರೂ.ಗಳನ್ನು ನೀಡಲಿದೆ.