Wrestlers ವಿರುದ್ಧ ಬ್ರಿಜ್ ಭೂಷಣ್ ಆಕ್ರೋಶ: ಜಂತರ್ ಮಂತರ್ ನಲ್ಲಿ ನ್ಯಾಯ ಸಿಗುವುದಿಲ್ಲ
ಆರೋಪ ಮಾಡಿರುವವರು ಕಾಂಗ್ರೆಸ್ ಸಂಸದನ ಅಖಾಡಾಕ್ಕೆ ಸೇರಿದವರು...!
Team Udayavani, Apr 30, 2023, 8:34 PM IST
ಹೊಸದಿಲ್ಲಿ: ಜಂತರ್ ಮಂತರ್ ನಲ್ಲಿ ನಿಮಗೆ ನ್ಯಾಯ ಸಿಗುವುದಿಲ್ಲ ಎಂದು ನವದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳ ವಿರುದ್ಧ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (WFI) ಅಧ್ಯಕ್ಷ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಭಾನುವಾರ ವಾಗ್ದಾಳಿ ನಡೆಸಿದ್ದಾರೆ.
ಏಳು ಮಹಿಳಾ ಕುಸ್ತಿಪಟುಗಳು ಮಾಡಿದ ಲೈಂಗಿಕ ಕಿರುಕುಳದ ಆರೋಪದ ಮೇಲೆ ದೆಹಲಿ ಪೊಲೀಸರು ಸಿಂಗ್ ವಿರುದ್ಧ ಎರಡು ಎಫ್ಐಆರ್ಗಳನ್ನು ದಾಖಲಿಸಿದ ಕೆಲವೇ ದಿನಗಳಲ್ಲಿ ಈ ಹೇಳಿಕೆಯನ್ನು ನೀಡಿದ್ದಾರೆ. ಮೊದಲ ಎಫ್ಐಆರ್ ಅಪ್ರಾಪ್ತ ಕುಸ್ತಿಪಟುವಿನ ಆರೋಪಗಳಿಗೆ ಸಂಬಂಧಿಸಿದೆ ಮತ್ತು ಪೋಕ್ಸೊ ಕಾಯ್ದೆಯಡಿ ದಾಖಲಾಗಿದ್ದರೆ, ಎರಡನೆಯದು ಅತಿರೇಕದ ವರ್ತನೆಗೆ ಸಂಬಂಧಿಸಿದ್ದಾಗಿದೆ.
ತಮ್ಮ ವಿರುದ್ಧ ಆರೋಪ ಮಾಡಿರುವವರು ಕಾಂಗ್ರೆಸ್ ಸಂಸದ ದೀಪೇಂದರ್ ಹೂಡಾ ಅವರ ಪೋಷಕರಾಗಿರುವ ಅಖಾಡಾಕ್ಕೆ ಸೇರಿದವರು ಎಂದು ಬ್ರಿಜ್ ಭೂಷಣ್ ಸಿಂಗ್ ಆರೋಪಿಸಿದ್ದಾರೆ.
“ಹರಿಯಾಣದ 90% ಕ್ರೀಡಾಪಟುಗಳು ಮತ್ತು ರಕ್ಷಕರು ಭಾರತದ ಕುಸ್ತಿ ಫೆಡರೇಶನ್ ಅನ್ನು ನಂಬುತ್ತಾರೆ. ಕೆಲವು ಕುಟುಂಬಗಳು ಮತ್ತು ಆರೋಪಗಳನ್ನು ಮಾಡಿದ ಹುಡುಗಿಯರು ಒಂದೇ ‘ಅಖಾಡಾ’ಕ್ಕೆ ಸೇರಿದವರು. ಆ ‘ಅಖಾಡಾ’ದ ಪೋಷಕ ದೀಪೇಂದರ್ ಹೂಡಾ’ ಎಂದು ಬ್ರಿಜ್ ಭೂಷಣ್ ಶರಣ್ ಸಿಂಗ್ ಹೇಳಿದ್ದಾರೆ.
“ಜಂತರ್ ಮಂತರ್ ನಿಂದ ನಿಮಗೆ ನ್ಯಾಯ ಸಿಗುವುದಿಲ್ಲ, ನಿಮಗೆ ನ್ಯಾಯ ಬೇಕಾದರೆ, ನೀವು ಪೋಲೀಸ್, ನ್ಯಾಯಾಲಯಕ್ಕೆ ಹೋಗಬೇಕು, ಅವರು ಇಲ್ಲಿಯವರೆಗೆ ಅದನ್ನು ಮಾಡಿಲ್ಲ. ನ್ಯಾಯಾಲಯ ಏನು ತೀರ್ಪು ನೀಡಿದರೂ ನಾವು ಸ್ವೀಕರಿಸುತ್ತೇವೆ.” ಎಂದು ಕಿಡಿ ಕಾರಿದ್ದಾರೆ.